ಬಲವಂತದ ಹಿಂದಿ ಬೇಡ, ದ್ವಿಭಾಷಾ ನೀತಿ ಸಾಕು: ಕನ್ನಡಿಗರ ಆಂದೋಲನ
ಬೆಂಗಳೂರು, ಆಗಸ್ಟ್ 19: ಶಿಕ್ಷಣ ಸೇರಿದಂತೆ ವಿವಿಧ ರಂಗಗಳಲ್ಲಿ ತ್ರಿಭಾಷಾ ನೀತಿಯನ್ನು ತರುವ ಮೂಲಕ ಹಿಂದಿ ಹೇರಿಕೆ ಮಾಡುವ ಪ್ರಯತ್ನ ವಿರೋಧಿಸಿ ಕನ್ನಡಿಗರು ಟ್ವಿಟ್ಟರ್ ಅಭಿಯಾನ ನಡೆಸಿದ್ದಾರೆ.
Recommended Video
ಕನ್ನಡಿಗರು ಕನ್ನಡ ಮತ್ತು ಇಂಗ್ಲಿಷ್ ಜತೆಗೆ ಹಿಂದಿಯನ್ನು ಕೂಡ ಮೂರನೆಯ ಭಾಷೆಯನ್ನಾಗಿ ಕಲಿಯುವಂತೆ ಒತ್ತಾಯಿಸಲಾಗುತ್ತಿದೆ. ತ್ರಿಭಾಷಾ ಸೂತ್ರ ಎಂಬ ನೆಪದಲ್ಲಿ ಅನೇಕ ಕಡೆ ಈಗಾಗಲೇ ಜಾಗ ಪಡೆದಿರುವ ಹಿಂದಿ, ಕ್ರಮೇಣ ಪ್ರಾಬಲ್ಯ ಮೆರೆದ ಅನೇಕ ದೃಷ್ಟಾಂತಗಳಿವೆ. ಕರ್ನಾಟಕದಲ್ಲಿ ಕನ್ನಡವೇ ಮರೀಚಿಕೆಯಾಗುತ್ತಿದೆ. ಈಗಾಗಲೇ ತಮಿಳುನಾಡು ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿದೆ. ಕನ್ನಡಿಗರು ತಮ್ಮದಲ್ಲದ ಭಾಷೆಯನ್ನು ಕಲಿಯುವ ಒತ್ತಡ ಹೇರುವುದೇಕೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.
ಗಮನಿಸಬೇಕಾದ ಸಂಗತಿಯೆಂದರೆ ಉತ್ತರ ಭಾರತದ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವಿಲ್ಲ. ಅಂದರೆ ಅವರು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರವೇ ಶಿಕ್ಷಣ, ಉದ್ಯೋಗ ಮತ್ತು ಇತರೆ ಸರ್ಕಾರಿ ವ್ಯವಹಾರಗಳನ್ನು ನಡೆಸಬೇಕು. ಅಲ್ಲಿ ಇಲ್ಲದ ಮೂರನೇ ಭಾಷೆ ಇಲ್ಲೇಕೆ ಎಂದು ಕೇಳಲಾಗುತ್ತಿದೆ. ಮುಂದೆ ಓದಿ...

ಕನ್ನಡಿಗರು ಸ್ವಾಭಿಮಾನಿಗಳಲ್ಲವೇ?
ಸ್ವಾಭಿಮಾನಿಗಳಾದ ಉತ್ತರ ಭಾರತದ ಜನರು ತಮ್ಮ ಭಾಷೆಯಾದ ಹಿಂದಿಯನ್ನು ಕಲಿಯುತ್ತಾರೆ. ಜತೆಗೆ ಲೋಕೋಪಯೋಗಕ್ಕೆ ಒಂದು ಪರದೇಶೀಯ ನುಡಿಯಾದ ಇಂಗ್ಲಿಷನ್ನು ಕಲಿಯುತ್ತಾರೆ. ಸ್ವಾಭಿಮಾನಿಗಳಾದ ತಮಿಳರು ತಮ್ಮ ಭಾಷೆಯಾದ ತಮಿಳು ಕಲಿಯುತ್ತಾರೆ. ಜತೆಗೆ ತಮ್ಮ ವ್ಯವಹಾರಕ್ಕೆ ಬೇಕಾದಂತೆ ಇಂಗ್ಲಿಷ್ ಕಲಿಯುತ್ತಾರೆ. ಕನ್ನಡಿಗರೇಕೆ ತಮ್ಮ ಮಾತೃಭಾಷೆಯಾದ ಕನ್ನಡ ಮತ್ತು ವ್ಯಾವಹಾರಿಕ ಭಾಷೆಯಾದ ಇಂಗ್ಲಿಷ್ ಸಾಕು ಎನ್ನದೆ ಹಿಂದಿಯನ್ನೂ ಕಲಿಯಬೇಕು? ಉತ್ತರ ಭಾರತೀಯರು ಮತ್ತು ತಮಿಳಿಗರಂತೆ ಕನ್ನಡಿಗರು ಸ್ವಾಭಿಮಾನಿಗಳಲ್ಲವೇ? ಎಂದು ಪ್ರಶ್ನಿಸಲಾಗಿದೆ.

ದ್ವಿಭಾಷಾ ನೀತಿ ಜಾರಿಗೆ ತನ್ನಿ
ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಯಬೇಕೆಂದು ಮಕ್ಕಳ ಮೇಲೆ ಬಲವಂತವಾಗಿ ಹೊರೆ ಹೊರಿಸುತ್ತಿರುವುದೇಕೆ? ಕೇಂದ್ರದ ನೂತನ ಶಿಕ್ಷಣ ನೀತಿಯು ಮಕ್ಕಳು ಕಲಿಯುವ ಮೂರನೇ ಭಾಷೆಯು ಆ ರಾಜ್ಯ ಆಯ್ಕೆ ಎಂದು ಹೇಳಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಲೇ ರಾಜ್ಯದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.

ಅಭಿಯಾನಕ್ಕೆ ಕೈಜೋಡಿಸಿದ ವಸಿಷ್ಠ ಸಿಂಹ
ನೆರೆಯ ತಮಿಳುನಾಡು ಹಾಗೂ ಉತ್ತರದ ಕೆಲ ರಾಜ್ಯಗಳಂತೆ ಕರ್ನಾಟಕದಲ್ಲೂ #ದ್ವಿಭಾಷಾನೀತಿ ಜಾರಿಗೆ ಬರಬೇಕು. ಇತರೆ (optional) ಭಾಷೆಗಳನ್ನು ಆಯ್ಕೆ ಮಾಡುವ ಅವಕಾಶ ಕಲಿಯುವವರದ್ದಾಗಿರಬೇಕು!! ಮೂರನೇ ಭಾಷೆಯ ಹೆಸರಿನಲ್ಲಿ ಯಾವ ಭಾಷೆಯನ್ನೂ ಹೇರುವ ಪ್ರಯತ್ನ ನಡೆಯಬಾರದು.. ತ್ರಿಭಾಷಾನೀತಿ ಹೇರಣೆಯ ವಿರುದ್ಧ ಕೈಜೋಡಿಸೋಣ ಎಂದು ನಟ ವಸಿಷ್ಠ ಸಿಂಹ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

ಕನ್ನಡ-ಇಂಗ್ಲಿಷ್ ಸಾಕಲ್ಲವೇ?
ದೇಶದ ಕೆಲವು ರಾಜ್ಯಗಳಲ್ಲಿ ಹಿಂದಿ ಮಾತನಾಡಬಲ್ಲರು ಎಂಬ ಕಾರಣಕ್ಕೆ ಇಡೀ ದೇಶವೇ ಏಕೆ ಬಲವಂತವಾಗಿ ಹಿಂದಿ ಕಲಿಯಬೇಕು? ನಮಗೆ ನಮ್ಮ ಮಾತೃಭಾಷೆ ಕನ್ನಡ ಸಾಕು. ಉದ್ಯೋಗ ಮತ್ತು ವ್ಯವಹಾರಕ್ಕೆ ಇಂಗ್ಲಿಷ್ ಹೇಗೂ ಅನಿವಾರ್ಯ ಆಯ್ಕೆಯಾಗಿದೆ. ಇದರ ನಡುವೆ ಹಿಂದಿ ಏಕಿದೆ ಎಂದು ಅನೇಕರು ಕೇಳಿದ್ದಾರೆ.

ಮೂರನೇ ಭಾಷೆ ನನ್ನ ಆಯ್ಕೆ
ನನ್ನ ಮಗ ಶಾಲೆಯಲ್ಲಿ ಮೂರನೇ ಭಾಷೆಯೊಂದನ್ನು ಕಲಿಯಬೇಕಾಗಿದ್ದರೆ, ಸ್ಪ್ಯಾನಿಶ್, ಫ್ರೆಂಚ್ ಅಥವಾ ಇಟಾಲಿಯನ್ನಂತಹ ಜಾಗತಿಕ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದು ನನ್ನ ಹಕ್ಕು. ಹಿಂದಿಯೊಂದನ್ನೇ ಕಲಿಯಬೇಕು ಎಂದು ನನ್ನ ಮಗನಿಗೆ ಒತ್ತಾಯ ಮಾಡುವುದೇಕೆ? ಹೀಗಾಗಿ ನಮಗೆ ಎರಡೇ ಭಾಷೆಯ ನೀತಿ ಸಾಕು ಎಂದು ಅಜಯ್ ರಾಜ್ ಎಂಬುವವರು ಹೇಳಿದ್ದಾರೆ.

ಹಿಂದಿ ರಾಜ್ಯಗಳಲ್ಲಿ ದ್ವಿಭಾಷಾ ನೀತಿ
ತಮಿಳುನಾಡಿವರು ತಮ್ಮದು ದ್ವಿಭಾಷಾ ನೀತಿ ಅಂತ ಘೋಷಿಸಿ ಆ ವ್ಯವಸ್ಥೆ ಇಟ್ಕೊಂಡಿದಾರೆ. ಹಿಂದಿ ರಾಜ್ಯಗಳು ಹಾಗೆ ಘೋಷಣೆ ಮಾಡದೇ ದ್ವಿಭಾಷಾ ನೀತಿಯನ್ನೇ ಬಳಸ್ತಿದ್ದಾರೆ. ಅಂದರೆ ಅದರ ಅರ್ಥ ಮೂರನೇ ಭಾಷೆಯಾಗಿ ಹೇರಲ್ಪಡುವುದು ಹಿಂದಿ ಎನ್ನುವುದು ಸ್ಪಷ್ಟ. ಹಾಗಾಗಿ ಕರ್ನಾಟಕಕ್ಕೂ ದ್ವಿಭಾಷಾ ನೀತಿ ಬೇಕು. - ವಿಕಾಸ್ ಹೆಗ್ಡೆ

ಪ್ರಾದೇಶಿಕತೆಗೆ ಕೊಳ್ಳಿ
ಉತ್ತರ ಭಾರತದ ಎಲ್ಲಾ ರಾಜ್ಯಗಳಲ್ಲಿ ದ್ವಿಭಾಷಾ ನೀತಿ ಇದೆ. ಪಕ್ಕದ ತಮಿಳುನಾಡಿನಲ್ಲಿಯೂ ದ್ವಿಭಾಷಾ ನೀತಿ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಹಿಂದಿ ಹೇರಿ ಪ್ರಾದೇಶಿಕತೆಗೆ ಕೊಳ್ಳಿ ಇಡಲಾಗುತ್ತಿದೆ. ಲೋಕದ ಜೊತೆ ವ್ಯವಹರಿಸಲು ಇಂಗ್ಲೀಷ್ ಮತ್ತು ಕನ್ನಡ ನಾಡಿನ ಅಸ್ಮಿತೆಯಾಗಿ ಕನ್ನಡ ಮಾತ್ರ ಇರಲಿ..












Click it and Unblock the Notifications