ಕಲಬುರ್ಗಿ ಹತ್ಯೆ : ಗಡಿಯಲ್ಲಿ ರುದ್ರ ಪಾಟೀಲ್ಗಾಗಿ ಹುಡುಕಾಟ
ಬೆಂಗಳೂರು, ಸೆಪ್ಟೆಂಬರ್ 21 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ, ರುದ್ರ ಪಾಟೀಲ್ ಹತ್ಯೆಯ ಸಂಚು ರೂಪಿಸಿದ್ದ ಎಂಬುದಕ್ಕೆ ಮಾಹಿತಿಗಳನ್ನು ಸಂಗ್ರಹಣೆ ಮಾಡಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪಾಟೀಲ್ ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದೆ.
ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದಿರುವ ಕರ್ನಾಟಕದ ಸಿಐಡಿ ತಂಡ ರುದ್ರ ಪಾಟೀಲ್ಗಾಗಿ ಹುಡುಕಾಟ ನಡೆಸುತ್ತಿದೆ. ಕಲಬುರ್ಗಿ ಅವರ ಹತ್ಯೆ ನಡೆದ ಬಳಿಕ ಕೊನೆಯ ಬಾರಿ ಪಾಟೀಲ್ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಕಾಣಿಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. [ಕಲಬುರ್ಗಿ ಹತ್ಯೆ ಮಾಸ್ಟರ್ ಮೈಂಡ್ ಪಾಟೀಲ್]

ರುದ್ರ ಪಾಟೀಲ್ ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಸಂಚನ್ನು ರೂಪಿಸಿದ್ದಾನೆ ಎಂಬ ಆರೋಪವಿದೆ. ಆದ್ದರಿಂದ, ಮಹಾರಾಷ್ಟ್ರದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಮೂರು ಹತ್ಯೆಗಳ ನಡುವೆ ಸಾಮ್ಯತೆ]
ರೆಡ್ ಕಾರ್ನರ್ ನೋಟಿಸ್ : ರುದ್ರ ಪಾಟೀಲ್ ಗೋವಾದಲ್ಲಿ ನಡೆದ ಎರಡು ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಭಾಗಿಯಾಗಿದ್ದಾನೆ ಎಂಬ ಆರೋಪವಿದೆ. ಆದ್ದರಿಂದ, ರಾಷ್ಟ್ರೀಯ ತನಿಖಾ ದಳದ ಮೋಸ್ಟ್ ವಾಟೆಂಡ್ ಪಟ್ಟಿಯಲ್ಲಿ ಪಾಟೀಲ್ ಇದ್ದು, ಆತನ ಪತ್ತೆಗಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಅತ್ತ ಸಿಬಿಐಗೂ ಪಾಟೀಲ್ ಬೇಕಾಗಿದ್ದಾನೆ.
2015ರ ಆ.30ರಂದು ಧಾರವಾಡದಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆಯುವ ಕೆಲವೇ ದಿನಗಳ ಮೊದಲು ರುದ್ರ ಪಾಟೀಲ್ ಕೊಲ್ಲಾಪುರಕ್ಕೆ ಭೇಟಿ ನೀಡಿದ್ದ ಎಂದು ಮಹಾರಾಷ್ಟ್ರ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ. ಈ ಮಾಹಿತಿಯ ಅನ್ವಯ ಹತ್ಯೆ ನಡೆಯುವ ದಿನ ಪಾಟೀಲ್ ಬೆಳಗಾವಿಯಲ್ಲಿದ್ದ ಎಂದು ತಿಳಿದುಬಂದಿದೆ.












Click it and Unblock the Notifications