ಕೆ.ರೋಸಯ್ಯ ಕರ್ನಾಟಕದ ಉಸ್ತುವಾರಿ ರಾಜ್ಯಪಾಲರು
ಬೆಂಗಳೂರು, ಜೂ. 27 : ಕರ್ನಾಟಕದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಶನಿವಾರ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿದ್ದು, ಹೊಸ ರಾಜ್ಯಪಾಲರ ಆಯ್ಕೆ ಆಗುವ ತನಕ ತಮಿಳುನಾಡು ರಾಜ್ಯಪಾಲರಾದ ಕೆ.ರೋಸಯ್ಯ ಅವರಿಗೆ ಕರ್ನಾಟಕದ ಉಸ್ತುವಾರಿವಹಿಸಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಅಧಿಕಾರಾವಧಿ ಜೂ.28ರ ಶನಿವಾರ ಅಂತ್ಯಗೊಳ್ಳಲಿದೆ. ಹೊಸ ರಾಜ್ಯಪಾಲರ ನೇಮಕವಾಗುವ ತನಕ ಕೆ.ರೋಸಯ್ಯ ಅವರು ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಶುಕ್ರವಾರ ಹೊರಡಿಸಲಾದ ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿರುವ ಕೆ.ರೋಸಯ್ಯ ಅವರು ಸದ್ಯ ತಮಿಳುನಾಡಿನ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕರ್ನಾಟಕದ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿದೆ. ಹೊಸ ರಾಜ್ಯಪಾಲರು ಅಧಿಕಾರಿ ಸ್ವೀಕರಿಸುವ ತನಕ ರೋಸಯ್ಯ ಅವರು ಕಾರ್ಯ ನಿರ್ವಹಿಸಲಿದ್ದಾರೆ. [ಗವರ್ನರ್ ಎತ್ತಂಗಡಿ: ಮೋದಿ ಸರಕಾರದ ನಿರ್ಧಾರ ಸರಿಯೇ?]
ಕರ್ನಾಟಕಕ್ಕೆ ಯಾರು ರಾಜ್ಯಪಾಲರು : ಎಚ್.ಆರ್.ಭಾರದ್ವಾಜ್ ಅವರಿಂದ ತೆರವಾಗುವ ಕರ್ನಾಟಕದ ರಾಜ್ಯಪಾಲರ ಹುದ್ದೆಗೆ ಯಾರು ನೇಮಕವಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಬಿಜೆಪಿ ಹಿರಿಯ ನಾಯಕರಾದ ಮುರಳಿ ಮನೋಹರ ಜೋಷಿ, ಯಶವಂತ ಸಿನ್ಹಾ, ವಿ.ಕೆ.ಮಲ್ಹೋತ್ರಾ ಮತ್ತು ಕಲ್ಯಾಣ್ ಸಿಂಗ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಆದರೆ, ಕರ್ನಾಟಕದ ರಾಜ್ಯಪಾಲರನ್ನಾಗಿ ಯಾರನ್ನು ನೇಮಿಸಲಾಗುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಶನಿವಾರ ಎಚ್.ಆರ್.ಭಾರದ್ವಾಜ್ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಜುಲೈ ಮೊದಲ ವಾರದಲ್ಲಿ ಕರ್ನಾಟಕಕ್ಕೆ ನೂತನ ರಾಜ್ಯಪಾಲರ ನೇಮಕವಾಗುವ ಸಾಧ್ಯತೆ ಇದೆ.












Click it and Unblock the Notifications