ಬೀದರ್ನಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ
ಬೀದರ್, ಸೆ. 22 : ಬೀದರ್ ಜಿಲ್ಲೆಯ ಚಿಟಗುಪ್ಪ ಸಮೀಪ ಹಸುಗಳ ಎಲುಬುಗಳಿಂದ ಡಾಲ್ಡಾ, ಪೌಡರ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಿದ್ದ ಅಕ್ರಮ ಅಡ್ಡೆಗಳ ಕುರಿತು ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಭಾನುವಾರ ಅಲ್ಲಿನ 40 ಕ್ಕೂ ಹೆಚ್ಚು ಕೆಲಸಗಾರರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ವರದಿಗಾರರ ಬಳಿ ಇದ್ದ ಕ್ಯಾಮೆರಾ, ಮೊಬೈಲ್ಗಳನ್ನು ಅವರು ಸುಟ್ಟು ಹಾಕಿದ್ದಾರೆ.
ಖಾಸಗಿ ವಾಹಿನಿಯ ಕ್ಯಾಮೆರಾಮನ್ ಹಣಮಂತರಾವ್, ಸಾಬೀರ್, ವರದಿಗಾರರಾದ ಉದಯ ಜೀರ್ಗೆ, ಸಹದೇವ್ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಜ್ಜು ಅಬ್ದುಲ್ ಹಮೀದ್, ಅಯ್ಯುಬ್ ಬಾಬುಮಿಯ್ಯಾ, ಜಾವೇದ್ ಪಾಶಾಮಿಯ್ಯಾ ಹಾಗೂ ಮಹಮದ್ ಹಾಜಿ ಎಂಬುವವರನ್ನು ಚಿಟಗುಪ್ಪ ಪೊಲೀಸರು ಬಂಧಿಸಿದ್ದಾರೆ.

ಗ್ರಾಮಸ್ಥರು ದಾಳಿ ಮಾಡಿದ್ದರು : ಅಕ್ರಮವಾಗಿ ಡಾಲ್ಡಾ, ಪೌಡರ್ಗಳನ್ನು ತಯಾರಿಸಿ ಈ ಘಟಕದಿಂದ ದೇಶದ ವಿವಿಧ ರಾಜ್ಯಗಳಿಗೆ ಸರಬರಾಬು ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಹಸುಗಳ ರಕ್ತ ಮತ್ತಿತರ ಹೊಲಸನ್ನು ಈ ತಯಾರಿಕಾ ಘಟಕದ ಪಕ್ಕವಿರುವ ನಾಲೆಗೆ ಬಿಟ್ಟ ಕಾರಣ ಸಮೀಪದ ಕೆರೆ ನೀರು ಕಲುಷಿತಗೊಂಡಿತ್ತು.
ಇದರಿಂದ ಕೆರಳಿದ ಗ್ರಾಮಸ್ಥರು ಒಂದು ವಾರದ ಹಿಂದೆ ಘಟಕದ ಮೇಲೆ ದಾಳಿ ಮಾಡಿದ್ದರು. ಭಾನುವಾರ ಘಟಕಕ್ಕೆ ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಲ್ಲೆ ನಡೆಸಿದ್ದರು. ಕ್ಯಾಮೆರಾ, ಮೊಬೈಲ್ಗಳನ್ನು ಸುಟ್ಟು ಹಾಕಿ, ವರದಿ ಮಾಡದಂತೆ ಬೆದರಿಕೆ ಹಾಕಿದ್ದರು.
ಆರೋಪಿಗಳ ವಿರುದ್ಧ ಕಠಿಣ ಕ್ರಮ : ಘಟನೆ ಕುರಿತು ಸೋಮವಾರ ತುಮಕೂರಿನಲ್ಲಿ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಳಿ ನಡೆಸಿರುವುದು ಖಂಡನೀಯ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪತ್ರಕರ್ತರಿಂದ ಪ್ರತಿಭಟನೆ : ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ, ಮಂಗಳೂರಿನಲ್ಲಿ ಪತ್ರಕರ್ತರು ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.











Click it and Unblock the Notifications