ಕರ್ನಾಟಕಕ್ಕೆ ಪ್ರತಿ ನಿತ್ಯ 325 ಟನ್ ಆಕ್ಸಿಜನ್ ಪೂರೈಕೆ : ಜಿಂದಾಲ್ ಸ್ಪಷ್ಟನೆ
ಬೆಂಗಳೂರು, ಏಪ್ರಿಲ್ 27: ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಬಳಿಯಿರುವ ಜಿಂದಾಲ್ ಸ್ಟೀಲ್ ಸಂಸ್ಥೆ ರಾಜ್ಯಕ್ಕೆ ಪ್ರತಿದಿನ ವೈದ್ಯಕೀಯ ಸೇವೆಗಾಗಿ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಮಾಡುತ್ತಿದೆ ಎಂದು ಜಿಂದಾಲ್ ಸಂಸ್ಥೆ ಸ್ಪಷ್ಟೀಕರಣ ನೀಡಿದೆ. ಕೊರೋನಾ ಎರಡನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದುರಾಗಿತ್ತು. ರೋಗಿಗಳ ಜೀವ ಉಳಿಸಲು ಆಕ್ಸಿಜನ್ ಇಲ್ಲದೇ ಆಸ್ಪತ್ರೆಗಳೇ ಬೀಗ ಹಾಕಲು ಮುಂದಾಗಿದ್ದವು. ಈ ಕುರಿತು ವಿಶೇಷ ವರದಿ ಪ್ರಕಟಿಸಿದ್ದ ಒನ್ಇಂಡಿಯಾ ಕನ್ನಡ, ಜಿಂದಾಲ್ ಹೊರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡುವುದನ್ನು ಪ್ರಶ್ನಿಸಿತ್ತು.
ಅಲ್ಲದೇ ಕರ್ನಾಟಕಕ್ಕೆ ಪೂರ್ಣ ಪ್ರಮಾಣದ ಆಕ್ಸಿಜನ್ ಜಿಂದಾಲ್ ಪೂರೈಕೆ ಮಾಡಬೇಕಿತ್ತು ಎಂಬುದನ್ನು ಉಲ್ಲೇಖಿಸಿ ವರದಿ ಪ್ರಕಟಿಸಿತ್ತು. ಸ್ಟೀಲ್ಪ್ಲಾಂಟ್ಗಳಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ವೈದ್ಯಕೀಯ ಕ್ಷೇತ್ರಕ್ಕೆ ಪೂರೈಕೆ ಮಾಡುವ ಸಂಬಂಧ ಕೇಂದ್ರ ಸರ್ಕಾರ ನೀಡಿದ್ದ ವಿನಾಯ್ತಿ ಬಗ್ಗೆಯೂ ವರದಿ ಧ್ವನಿಯೆತ್ತಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಜೆಎಸ್ಡಬ್ಲೂ ಸ್ಟೀಲ್ ಲಿಮಿಟೆಡ್, ತೋರಣಗಲ್ಲು ಘಟಕದಲ್ಲಿ ಜಿಂದಾಲ್ ಸ್ಟೀಲ್ ಒಟ್ಟು ನಾಲ್ಕು ಆಕ್ಸಿಜನ್ ಉತ್ಪಾದನಾ ಘಟಕ ಹೊಂದಿದೆ. ಪ್ರತಿದಿನ ಜೆಎಸ್ಡಬ್ಲೂ ಇಂಡಸ್ಟ್ರಿಯಲ್ ಗ್ಯಾಸ್ ಪ್ರೆ. ಲಿ, ಮೆ. ಬಳ್ಳಾರಿ ಆಕ್ಸಿಜನ್ ಕಂಪನಿ ಪ್ರೆ. ಲಿ, ಮೆ. ಏರ್ ವಾಟರ್ ಇಂಡಿಯಾ ಪ್ರೆ. ಲಿ, ಮೆ. ಪ್ರಾಕ್ವೈರ್ ಇಂಡಿಯಾ ಪ್ರೆ. ಲಿ ವತಿಯಿಂದ ಪ್ರಸ್ತುತ ದಿನಕ್ಕೆ ಅಂದಾಜು 650 ಟನ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಇದೆ. ಇದರಲ್ಲಿಕರ್ನಾಟಕಕ್ಕೆ ಪ್ರತಿ ನಿತ್ಯ ಸರಾಸರಿ 350 ಟನ್ ಸರಬರಾಜು ಮಾಡುತ್ತಿದೆ. ಇತ್ತೀಚೆಗೆ 425 ಟನ್ ಸರಬರಾಜು ಮಾಡುತ್ತಿದ್ದು, ಉಳಿದ 225 ಮೆಟ್ರಿಕ್ ಟನ್ ಇತರೆ ರಾಜ್ಯಗಳಿಗೆ ಸರಬರಾಜು ಮಾಡುತ್ತಿದೆ ಎಂದು ಜಿಂದಾಲ್ ಸಂಸ್ಥೆ ತಿಳಿಸಿದೆ.

ವಿಶೇಷ ಎಂದರೆ, ಒನ್ಇಂಡಿಯಾ ಕನ್ನಡ ವರದಿ ಬೆನ್ನನ್ನೇ ಕೇಂದ್ರ ಸರ್ಕಾರ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಮಾಡುವ ಎಲ್ಲಾ ಸ್ಟೀಲ್ ಪ್ಲಾಂಟ್ಗಳಿಗೆ ನೀಡಿದ್ದ ವಿನಾಯಿತಿಯನ್ನು ರದ್ದು ಪಡಿಸಿತ್ತು. ಸ್ಟೀಲ್ ಪ್ಲಾಂಟ್ಗಳಲ್ಲಿ ಉತ್ಪಾದನೆಯಾಗುವ ಲಿಕ್ವಿಡ್ ಆಕ್ಸಿಜನ್ ಕೇವಲ ವೈದ್ಯಕೀಯ ಬಳಕೆಗಾಗಿ ಪೂರೈಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದ್ದು, ಇದೀಗ ವೈದ್ಯಕೀಯ ರಂಗದಲ್ಲಿ ಆಕ್ಸಿಜನ್ ಕೊರತೆಗೆ ಎದುರಾಗಿದ್ದ ಕೊರತೆಯನ್ನು ನೀಗಿಸಲು ನೆರವಾಗಲಿದೆ.












Click it and Unblock the Notifications