ಜಿಂದಾಲ್ ವಿವಾದದಲ್ಲಿ ಚರ್ಚೆಗೆ ಸಿದ್ಧ, ಸಿಎಂ ಸಿಗಬೇಕಲ್ಲ : ಅಶೋಕ
ಬೆಂಗಳೂರು, ಜೂನ್ 18 : 'ಜಿಂದಾಲ್ ವಿಚಾರದಲ್ಲಿ ಚರ್ಚೆ ನಡೆಸಲು ಬಿಜೆಪಿ ನಾಯಕರಿಗೆ ಆಹ್ವಾನ ನೀಡುವುದಕ್ಕಿಂತ ಮುಖ್ಯಮಂತ್ರಿಗಳು ಅಧಿವೇಶನ ಕರೆಯಲಿ' ಎಂದು ಬಿಜೆಪಿ ನಾಯಕ ಆರ್.ಅಶೋಕ ಸವಾಲು ಹಾಕಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಆರ್.ಅಶೋಕ ಅವರು, 'ಜಿಂದಾಲ್ಗೆ ಭೂಮಿ ನೀಡುವ ವಿಚಾರದಲ್ಲಿ ಬಿಜೆಪಿಯ ಹೋರಾಟ ಮುಂದುವರೆಯಲಿದೆ. ನಾವು ಚರ್ಚೆಗೆ ಸಿದ್ಧ. ಯಾವುದೇ ಪಲಾಯನ ಮಾಡುತ್ತಿಲ್ಲ' ಎಂದು ಸ್ಪಷ್ಟಪಡಿಸಿದರು.
'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಲ್ಲಿರುತ್ತಾರೆ? ಎಂಬುದು ಯಾರಿಗೂ ಗೊತ್ತಿಲ್ಲ. ಅವರು ಯಾರ ಕೈಗೂ ಸಿಗುವುದಿಲ್ಲ. ಅವರು ಎಲ್ಲಿ ಸಿಗುತ್ತಾರೆ ಎಂಬುದು ಗೊತ್ತಿಲ್ಲ. ಅವರ ಜೊತೆ ಚರ್ಚೆ ಮಾಡುವುದು ಹೇಗೆ?' ಎಂದು ಅಶೋಕ ಪ್ರಶ್ನೆ ಮಾಡಿದರು.

'ಮುಖ್ಯಮಂತ್ರಿಗಳು ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡುವ ಬದಲು ತಕ್ಷಣ ವಿಧಾನಸಭೆ ಅಧಿವೇಶನವನ್ನು ಕರೆಯಲಿ. ಅಲ್ಲಿ ಜಿಂದಾಲ್ ವಿಚಾರದಲ್ಲಿ ನಾವು ಚರ್ಚೆಗೆ ಸಿದ್ಧ. ಅಧಿವೇಶನದಲ್ಲಿ ಅದರ ಸತ್ಯಾಸತ್ಯತೆ ಹೊರಬರಲಿದೆ' ಎಂದು ಹೇಳಿದರು.
'ಮುಖ್ಯಮಂತ್ರಿಗಳು ಜಿಂದಾಲ್ ವಿಚಾರದಲ್ಲಿ ಚರ್ಚೆಗೆ ಸಿದ್ಧ ಎಂದು ಪ್ರತಿಪಕ್ಷಗಳಿಗೆ ಪತ್ರ ಬರೆದಿರುವುದು ಕೇವಲ ಮಾಧ್ಯಮ, ಜನರ ಕಣ್ಣೊರೆಸಲು ಮಾತ್ರ. ಕೊಟ್ಟಹಾಗೆ ಇರಬೇಕು, ಕೊಡದ ಹಾಗೆ ಇರಬೇಕು ಎಂಬಂತೆ ಪತ್ರ ಬರೆದಿದ್ದಾರೆ' ಎಂದು ಅಶೋಕ ಆರೋಪಿಸಿದರು.
'ಜಿಂದಾಲ್ ವಿಚಾರದಲ್ಲಿ ಮೊದಲು ಧ್ವನಿ ಎತ್ತಿದ್ದು ಯಡಿಯೂರಪ್ಪ ಅವರಲ್ಲ. ಕಾಂಗ್ರೆಸ್ನ ಎಚ್.ಕೆ.ಪಾಟೀಲ್ ಮತ್ತು ಜೆಡಿಎಸ್ ನಾಯಕರು. ನಿಮ್ಮ ದೋಸ್ತಿ ಸರ್ಕಾರದ ನಾಯಕರ ಅನುಮಾನಗಳಿಗೆ ಮೊದಲು ಉತ್ತರ ಕೊಡಿ' ಎಂದು ಆರ್.ಅಶೋಕ್ ಆಗ್ರಹಿಸಿದರು.
ಯಡಿಯೂರಪ್ಪ ಜಿಂದಾಲ್ಗೆ ಭೂಮಿ ನೀಡಿದ್ದಾರೆ ಎಂಬ ಆರೋಪ ತಳ್ಳಿ ಹಾಕಿದ ಆರ್.ಅಶೋಕ ಅವರು, 'ಜಿಂದಾಲ್ಗೆ ಭೂಮಿ ನೀಡಿದ್ದು ಕುಮಾರಸ್ವಾಮಿ ಅವರೇ. ಗಣಿ ಖಾತೆ ಅವರ ಬಳಿಯೇ ಇತ್ತು. ನಾವು ಹೇಗೆ ಜಿಂದಾಲ್ಗೆ ಭೂಮಿ ನೀಡಲು ಸಾಧ್ಯ?' ಎಂದು ಪ್ರಶ್ನಿಸಿದರು.












Click it and Unblock the Notifications