ಡಬಲ್ ಇಂಜಿನ್ನಿಂದಲೇ ಟ್ರಬಲ್ ಹೆಚ್ಚು; ಮೋದಿಗೆ ತಿರುಗೇಟು
ಬೆಂಗಳೂರು, ಏಪ್ರಿಲ್ 30; ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳಿಂದ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಪ್ರಚಾರಕ್ಕಾಗಿ ರಾಜ್ಯದಲ್ಲಿದ್ದಾರೆ. ರಾಜ್ಯದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡುತ್ತಿದ್ದಾರೆ.
ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಮೈತ್ರಿ ಸರ್ಕಾರದ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. 'ಈ ಬಾರಿಯ ನಿರ್ಧಾರ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರ' ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ.

"ಕರ್ನಾಟಕವನ್ನು ನಂಬರ್ ಒನ್ ಮಾಡಲು ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯ" ಎಂದು ನರೇಂದ್ರ ಮೋದಿ ಹೇಳುತ್ತಿದ್ದಾರೆ. ಭಾನುವಾರ ಅವರು ಜೆಡಿಎಸ್ ಭದ್ರಕೋಟೆ ಚನ್ನಪಟ್ಟಣದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬಳಿಕ ಹಾಸನ ಜಿಲ್ಲೆಯ ಬೇಲೂರಿನಲ್ಲಿಯೂ ಸಮಾವೇಶದಲ್ಲಿ ಮಾತನಾಡಿದರು.
ಭಾನುವಾರ ಮೋದಿ, "ಕಾಂಗ್ರೆಸ್ ಮತ್ತು ಜೆಡಿಎಸ್ ಹೊರಗಿನಿಂದ ನೋಡಲು ಮಾತ್ರ ಬೇರೆ-ಬೇರೆ ಆದರೆ ಆಂತರಿಕವಾಗಿ ಒಂದೇ". "ಜೆಡಿಎಸ್ಗೆ ನೀಡುವ ಒಂದೊಂದು ವೋಟು ಸಹ ಕಾಂಗ್ರೆಸ್ಗೆ ಸೇರುತ್ತದೆ". "ಜೆಡಿಎಸ್ ಕಾಂಗ್ರೆಸ್ನ ಬಿ ಟೀಂ" ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ಜೆಡಿಎಸ್ ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಟ್ವೀಟ್ ಮೂಲಕ ತಿರುಗೇಟು ನೀಡಿದೆ. "ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಪಾರದರ್ಶಕ ಆಡಳಿತ ನಡೆಸಿದ ಬಗ್ಗೆ ರಾಜ್ಯದ ಜನರು ಚೆನ್ನಾಗಿ ಗಮನಿಸಿದ್ದಾರೆ. ಡಬಲ್ ಇಂಜಿನ್ ಸರಕಾರ ಬಂದ್ಮೇಲೆ ರಾಜ್ಯಕ್ಕೆ ಟ್ರಬಲೇ ಹೆಚ್ಚು. ಸುಸ್ಥಿರ ಆಡಳಿತ ಬಗ್ಗೆ ಮಾತಾಡಿದ ನರೇಂದ್ರ ಮೋದಿ ರಾಜ್ಯವನ್ನು ಕರೆಪ್ಶನ್ ಕ್ಯಾಪಿಟಲ್ ಮಾಡಿದವರ ಬಗ್ಗೆ ಮಾತಾಡಿಲ್ಲ ಯಾಕೆ?" ಎಂದು ಬಿಜೆಪಿ ಮತ್ತು ಮೋದಿಯನ್ನು ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ಸಹ ಆಕ್ರೋಶ; ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸುತ್ತಿದ್ದಾರೆ. "ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದರೆ, ಬಿಜೆಪಿ ಸರ್ಕಾರ ಜನರಿಗೆ ಕಲ್ಯಾಣ ಕಾರ್ಯಕ್ರಮ ನೀಡುವ ಸಂತುಷ್ಟೀಕರಣ ಮಾಡುತ್ತಿದೆ. ಜನರ ಆಕಾಂಕ್ಷೆ, ಅವಕಾಶ ಮತ್ತು ಗೌರವಕ್ಕಾಗಿ ಡಬಲ್ ಎಂಜಿನ್ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಸರ್ಕಾರ ಅಂದ್ರೆ 85 ಪರ್ಸೆಂಟ್ ಸರ್ಕಾರ. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಮೂಲದಲ್ಲಿಯೇ ಇದೆ. ಹೀಗಾಗಿ, ಇಂತಹ ಪಕ್ಷಗಳಿಂದ ಪ್ರಗತಿ ಸಾಧ್ಯವಿಲ್ಲ. ಕರ್ನಾಟಕವನ್ನು ನಂ.1 ಮಾಡಲು ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯ" ಎಂದು ಮೋದಿ ಭಾಷಣದಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿ, "2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿದ್ದರು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೈಜೋಡಿಸಿದರು. ಜೆಡಿಎಸ್ಗೆ ನೀಡುವ ಪ್ರತಿ ವೋಟ್ ಕೂಡ ಕಾಂಗ್ರೆಸ್ ಖಾತೆಗೇ ಜಮೆಯಾಗುತ್ತದೆ. ರಾಜ್ಯವನ್ನು ರಿವರ್ಸ್ ಗೇರ್ಗೆ ದೂಡುತ್ತದೆ" ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, 'ನರೇಂದ್ರ ಮೋದಿ ಅವರೇ, ನೆರೆ, ಕರೋನಾದಂತಹ ಸಂದರ್ಭದಲ್ಲಿ ಕನ್ನಡಿಗರ ಕಡೆ ತಿರುಗಿಯೂ ನೋಡದವರು ಈಗ ಚುನಾವಣೆಗೆ ಬಂದಿದ್ದೀರಿ, ಸಂತೋಷ. ನಿಮ್ಮ ಟೆಲಿಪ್ರಾಂಪ್ಟರ್ನಲ್ಲಿ ಬಿಜೆಪಿ ಸರ್ಕಾರದ ಒಂದೇ ಒಂದು ಸಾಧನೆ ಬಗ್ಗೆ ಮಾತಿಲ್ಲವೇಕೆ? ಡಬಲ್ ಇಂಜಿನ್ ಯೋಜನೆ ಬಗ್ಗೆ ಚಕಾರವಿಲ್ಲ ಏಕೆ? ಮುಂದಿನ ಜನಹಿತದ ದೃಷ್ಟಿಕೋನದ ಬಗ್ಗೆಯೂ ಮಾತಿಲ್ಲ ಏಕೆ?' ಎಂದು ಪ್ರಶ್ನೆ ಮಾಡಿದೆ.
'ಯುವಕರು, ಮಹಿಳೆಯರು, ರೈತರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸೇರಿದಂತೆ ಸಮಾಜದ ಎಲ್ಲಾ ವರ್ಗದ ಏಳಿಗೆಗಾಗಿ ಕಾಂಗ್ರೆಸ್ ಸ್ಪಷ್ಟ ದೃಷ್ಟಿಕೋನದಲ್ಲಿ ಗ್ಯಾರಂಟಿಗಳನ್ನು ಮುಂದಿಟ್ಟು ಮತ ಕೇಳುತ್ತಿದೆ. ಇದುವರೆಗೂ ಬಿಜೆಪಿ ಭರವಸೆ ಮೂಡಿಸುವ ಯೋಜನೆಯನ್ನು ಜನರ ಮುಂದಿಟ್ಟಿಲ್ಲ. ಬಿಜೆಪಿಗೆ ಜನಹಿತ ಬೇಕಿಲ್ಲ ಎಂಬುದು ಇದರಲ್ಲೇ ಸ್ಪಷ್ಟವಾಗುತ್ತದೆ' ಎಂದು ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.












Click it and Unblock the Notifications