ಮತ್ತೆ ಕಣಕ್ಕಿಳಿದ ಎಚ್ಡಿಕೆ ಸಂಸದೀಯ ಸಾಧನೆ ಏನು?
ಚಿಕ್ಕಬಳ್ಳಾಪುರ, ಮಾರ್ಚ್ 27: ಮಾಜಿ ಸಂಸದ ಎಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಆದರೆ ಇನ್ನೂ ಅವರು ರಾಮನಗರದ sitting ಶಾಸಕ ಎಂಬುದು ಗಮನಾರ್ಹ. ಏಕೆಂದರೆ ಲೋಕಸಭೆಯಲ್ಲಿದ್ದೂ ವಿಧಾನಸಭೆ ಚುನಾವಣೆಗೆ ನಿಲ್ಲುವುದು ಮತ್ತು ವಿಧಾನಸಭೆಯಲ್ಲಿದ್ದೂ ಲೋಕಸಭೆಗೆ ಹೈಜಂಪ್ ಮಾಡುವುದನ್ನು ಎಚ್ಡಿಕೆ ಕರಗತ ಮಾಡಿಕೊಂಡಿದ್ದಾರೆ.
ನಡುಗಾಲದಲ್ಲೇ ಸಂಸತ್ತಿಗೆ ಗುಡ್ ಬೈ ಹೇಳಿದ್ದರು:
ಅಂದಹಾಗೆ ಇದೇ ಕುಮಾರಸ್ವಾಮಿ ಅವರು ಕಳೆದ ಬಾರಿ ಸಂಸದರಾಗಿದ್ದಾಗ ಬಹುತೇಕ ಎಲ್ಲ ಅಧಿವೇಶನಗಳಿಗೂ ಚಕ್ಕರ್ ಹೊಡೆದು ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ಯಾಕೆ ಸ್ವಾಮಿ ನೀವು ಸಂಸತ್ತಿನಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಕೇಳಿದ್ದಕ್ಕೆ 'ಅಯ್ಯೋ ನಾನು ಇಲ್ಲಿಂದ ದಿಲ್ಲಿವರೆಗೂ ಹೋಗದೆ ಸರಕಾರದ ಬೊಕ್ಕಸಕ್ಕೆ ಟಿಎ/ ಡಿಎ ಉಳಿಸಿದ್ದೇನಲ್ಲಾ!?' ಎಂಬ ಉಡಾಫೆಯ ಉತ್ತರ ನೀಡಿದ್ದವರು.

2013ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ಏಪ್ರಿಲ್ ನಲ್ಲಿ ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಿದವರು ರಾಮನಗರದ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಜತೆಗೆ ಮಂಡ್ಯದ ಸಂಸದ ಚೆಲುವರಾಯಸ್ವಾಮಿ ಅವರನ್ನೂ ಸಂಸತ್ತಿನಿಂದ ಎಬ್ಬಿಸಿ, ಜತೆಯಲ್ಲೇ ಕರೆದುಕೊಂಡುಬಂದಿದ್ದರು. ನಾಗಮಂಗಲ ಕ್ಷೇತ್ರದಿಂದ ಚೆಲುವರಾಯಸ್ವಾಮಿ ಅವರನ್ನು ಕಣಕ್ಕಿಳಿಸಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಹಾಗೆ ನೋಡಿದರೆ ಇದ್ದ ಮೂವರ ಪೈಕಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮಾತ್ರವೇ ಸಂಸದರಾಗಿ ಕೊನೆಯವರೆಗೂ ಮುಂದುವರೆದಿದ್ದು. ಗಮನಾರ್ಹವೆಂದರೆ ಸಂಸತ್/ ವಿಧಾನಸಭೆ ಜಿಗಿದಾಟವನ್ನು ತಮಗೊಬ್ಬರಿಗೆ ಸೀಮಿತಗೊಳಿಸಿರುವ ಕುಮಾರಸ್ವಾಮಿ ಅವರು ಈ ಬಾರಿ ಸದ್ಯ ಚೆಲುವರಾಯಸ್ವಾಮಿ ಅವರಿಂದ ರಾಜೀನಾಮೆ ಕೊಡಿಸಿ ಮತ್ತೆ ಲೋಕಸಭೆಗೆ ಸ್ಪರ್ಧಿಸುವಂತೆ ದುಂಬಾಲು ಬಿದ್ದಿಲ್ಲ. ಆತ್ಮೀಯರು ಹೇಳುವಂತೆ ಸ್ವತಃ ಚೆಲುವರಾಯಸ್ವಾಮಿ ಅವರೇ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲಿಲ್ಲವಂತೆ.
ಗಮನಾರ್ಹವೆಂದರೆ ತಮ್ಮ ರಾಜೀನಾಮೆಯಿಂದಾಗಿ ಆಗಸ್ಟ್ ವೇಳೆಗೆ ಮತ್ತೆ ಚುನಾವಣೆ ನಡೆಯುವುದಕ್ಕೆ ಕಾರಣೀಭೂತರಾದ ಇಬ್ಬರೂ ತಮ್ಮ ಕ್ಷೇತ್ರಗಳನ್ನು ಕಾಂಗ್ರೆಸ್ ಮಡಿಲಿಗೆ ಹಾಕಿ, ಪಕ್ಷದ ಅಧಿಪತ್ಯವನ್ನು ಕಾಂಗ್ರೆಸ್ಸಿಗೆ ಒಪ್ಪಿಸಿಬಿಟ್ಟರು. ಹೋಗಲಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರಾ ಅಂದರೆ ಜನತೆ ಯಾಕೋ ಜೆಡಿಎಸ್ ಪಕ್ಷದತ್ತ ಮನಸ್ಸು ಮಾಡಲೇ ಇಲ್ಲ. ಬಿಜೆಪಿ/ಕೆಜೆಪಿ ಜಗಳದಿಂದ ಅನಾಯಾಸವಾಗಿ ಪ್ರತಿಪಕ್ಷದ ನಾಯಕ ಸ್ಥಾನಮಾನ ದಕ್ಕಿತಾದರೂ ಕುಮಾರಸ್ವಾಮಿಗೆ ಅಲ್ಲೂ ಹೆಚ್ಚು ಕಾಲ ನಿಲ್ಲಲಾಗಲಿಲ್ಲ.
ಈ ಮಧ್ಯೆ, ಈ ಇಬ್ಬರೂ ಸಂಸದರು ತಮ್ಮ ಕ್ಷೇತ್ರಗಳಿಗೆ ಏನಾದರೂ ಪ್ರಯೋಜನ ಮಾಡಿಕೊಟ್ಟರಾ? ಜನರ ಸಂಕಷ್ಟಗಳಿಗೆ ಸ್ಪಂದಿಸಿದರಾ ಅಂದರೆ ಉಹುಃ ಜನತೆಗೆ ಏನೂ ಉಪಯೋಗವಾಗಿಲ್ಲ. ಇದ್ದುದರಲ್ಲಿ ಕುಮಾರಸ್ವಾಮಿ ಅವರೊಬ್ಬರೇ ಸಂಸದರ ನಿಧಿ ಬಳಸಿಕೊಂಡು, ಕ್ಷೇತ್ರದಲ್ಲಿ ಒಂದಷ್ಟು ಕೆಲಸಗಳನ್ನು ಮಾಡಿದವರು.
ಇನ್ನು, ಕುಮಾರಸ್ವಾಮಿ ಸಂಸದರಾಗಿದ್ದ ಅವಧಿಯಲ್ಲಿ ಲೋಕಸಭಾ ಕಲಾಪದಲ್ಲಿ (2009ರಿಂದ) ಅವರ ಹಾಜರಾತಿ ಶೇ. 32ರಷ್ಟು ಮಾತ್ರ ಇತ್ತು. ಎಚ್ ಡಿ ದೇವೇಗೌಡ ಹಾಜರಾತಿ- ಶೇ.59, ಚರ್ಚೆ- 28, ಕೇಳಿದ ಪ್ರಶ್ನೆಗಳ ಸಂಖ್ಯೆ ಸೊನ್ನೆ (ಮಾಜಿ ಪ್ರಧಾನಿಯಾಗಿ ಅವರು ನೇರವಾಗಿ ಪ್ರಶ್ನೆ ಕೇಳುವಂತಿಲ್ಲ, ಹಾಗಾಗಿ ಸೊನ್ನೆ).
ಸುಮಾರು ನಾಲ್ಕು ವರ್ಷಗಳ ಕಾಲ ಸಂಸದರಾಗಿದ್ದ ಕುಮಾರಸ್ವಾಮಿ ಪ್ರಶ್ನೆ ಕೇಳುವುದರಲ್ಲಿ ಸಾಧಿಸಿದ್ದು ಶೂನ್ಯ. 2 ಚರ್ಚೆಗಳಲ್ಲಷ್ಟೇ ಭಾಗವಹಿಸಿದ್ದರು. ಚಲವುರಾಯಸ್ವಾಮಿ ಒಂದಿಷ್ಟು ಸಕ್ರಿಯರಾಗಿದ್ದು 18 ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಆದರೆ 835 ಪ್ರಶ್ನೆಗಳನ್ನು ಕೇಳಿರುವುದು ಚೆಲುವರಾಯಸ್ವಾಮಿಯ ವಿಶೇಷ ಸಾಧನೆ.
ಕುಮಾರಸ್ವಾಮಿ ಸಂಸತ್ತಿಗೆ ಪೂರ್ಣವಧಿಗೆ ಆಯ್ಕೆಯಾಗಿದ್ದರೂ ಏನು ಸಾಧನೆ ಮಾಡಿದರು ಅಂದರೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ದಾಖಲೆಗಳ ಬಿಡುಗಡೆ ಮಾಡುವುದನ್ನೇ ದೈನಂದಿನ ಕಾಯಕಾವಾಗಿಸಿಕೊಂಡಿದ್ದರು. ಸಾಲದು ಅಂತ ಸಂದರಾಗಿ ಕರ್ನಾಟಕ ಭವನಕ್ಕೂ ತೆರಳಿ ಅಲ್ಲಿಯೂ ರಾಷ್ಟ್ರೀಯ ಮಟ್ಟದಲ್ಲಿ ಯಡಿಯೂರಪ್ಪ ಭ್ರಷ್ಟಾಚಾರದ ದಾಖಲೆಗಳ ಬಿಡುಗಡೆ ಮಾಡಿದ ಸಾಧನೆ ಮಾಡಿದರು.
ಕುಮಾರಸ್ವಾಮಿ ಅವರು 2009ರಲ್ಲಿ ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಲೋಕಸಭೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ಸಿನ ತೇಜಸ್ವಿನಿ ರಮೇಶ್ ವಿರುದ್ಧ 1 ಲಕ್ಷ 80 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.
* ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ವಿರುದ್ಧ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ ಸೋಲುಂಡಿದ್ದರು.
* ಚಲುವರಾಯ ಸ್ವಾಮಿ 2013ರಲ್ಲಿ ನಾಗಮಂಗಲ ವಿಧಾಸನಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.
* 2013ರ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ಸಿನ ಪುಟ್ಟರಾಜು ಅವರು ನಟಿ ರಮ್ಯಾ ವಿರುದ್ಧ ಸೋತಿದ್ದರು.












Click it and Unblock the Notifications