ಜೆಡಿಎಸ್ ಪಕ್ಷದ ಕೋರ್ ಕಮಿಟಿಗೆ ನೂತನ ಅಧ್ಯಕ್ಷರ ನೇಮಕ
ಬೆಂಗಳೂರು, ಆಗಸ್ಟ್ 18: ಕರ್ನಾಟಕ ಜೆಡಿಎಸ್ 2024ರ ಲೋಕಸಭೆ ಚುನಾವಣೆ ಸಿದ್ಧತೆಯನ್ನು ಆರಂಭಿಸಿದೆ. ಇದಕ್ಕಾಗಿ ಪಕ್ಷ ಸಂಘಟನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಕೋರ್ ಕಮಿಟಿಯನ್ನು ಪುನರ್ ರಚನೆ ಮಾಡಲಾಗಿದೆ.
ಶುಕ್ರವಾರ ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಪ್ರಮುಖರ ಸಭೆ ನಡೆಯಿತು. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಪಕ್ಷದ ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು. ನಂತರ, ಪಕ್ಷದ ಹಿರಿಯ ಮುಖಂಡರನ್ನೊಳಗೊಂಡ ಕೋರ್ ಕಮಿಟಿಯನ್ನು ಮಾಜಿ ಸಚಿವ ಹಾಗು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡರ ನೇತೃತ್ವದಲ್ಲಿ ರಚನೆ ಮಾಡಲಾಯಿತು.
ಕೋರ್ ಕಮಿಟಿ ಪುನರ್ ರಚನೆ; 2022ರ ಜನವರಿಯಲ್ಲಿ ಪಕ್ಷ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ರಚನೆ ಮಾಡಿತ್ತು. ಈಗ ಕೋರ್ ಕಮಿಟಿಯನ್ನು ಪುನರ್ ರಚನೆ ಮಾಡಲಾಗಿದ್ದು, ಜಿ. ಟಿ. ದೇವೇಗೌಡರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಜಿ. ಟಿ. ದೇವೇಗೌಡ ಕೋರ್ ಕಮಿಟಿ ಅಧ್ಯಕ್ಷರು. ಕಮಿಟಿಯ ಸಂಚಾಲಕರಾಗಿ ಮಾಜಿ ಶಾಸಕ ವೈಎಸ್ವಿ ದತ್ತ, ಸದಸ್ಯರಾಗಿ ಬಂಡೆಪ್ಪ ಕಾಶೆಂಪೂರ್, ಹೆಚ್. ಕೆ. ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಸಿ. ಎಸ್. ಪುಟ್ಟರಾಜು, ಸಾರಾ ಮಹೇಶ್, ಆಲ್ಕೋಡ್ ಹನುಮಂತಪ್ಪ ಇದ್ದಾರೆ.
ಶಾಸಕರಾದ ರಾಜೂಗೌಡ, ನೇಮಿರಾಜ್ ನಾಯ್ಕ್, ಬಿ. ಎಂ. ಫಾರೂಕ್, ಮಾಜಿ ಶಾಸಕರಾದ ಸುರೇಶ್ ಗೌಡ, ಎಂ. ಕೃಷ್ಣರೆಡ್ಡಿ, ದೊಡ್ಡಪ್ಪಗೌಡ ಎಸ್. ಪಾಟೀಲ್ ನರಿಬೋಳ, ತಿಮ್ಮರಾಯಪ್ಪ, ವೀರಭದ್ರಪ್ಪ ಹಾಲರವಿ, ಕೆ. ಬಿ. ಪ್ರಸನ್ನ ಕುಮಾರ್, ಪಕ್ಷದ ಮುಖಂಡರಾದ ಸುನಿತಾ ಚೌವ್ಹಾಣ್, ಸಿ. ವಿ. ಚಂದ್ರಶೇಖರ್, ಸುಧಾಕರ್ ಶೆಟ್ಟಿ, ಸೂರಜ್ ಸೋನಿ ನಾಯಕ್ ಸದಸ್ಯರಾಗಿದ್ದಾರೆ.
ಜೆಡಿಎಸ್ ಪಕ್ಷ ಲೋಕಸಭೆ ಚುನಾವಣೆಗೆ ಸಿದ್ಧತೆಯನ್ನು ಆರಂಭಿಸಿದೆ. 2019ರ ಚುನಾವಣೆಯಲ್ಲಿ ಹಾಸನ (ಪ್ರಜ್ವಲ್ ರೇವಣ್ಣ) ಮಾತ್ರ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂದು ಪಕ್ಷ ತಂತ್ರ ರೂಪಿಸುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹಬ್ಬಿತ್ತು. ಎನ್ಡಿಎ ಮೈತ್ರಿಕೂಟಕ್ಕೆ ಪಕ್ಷ ಸೇರಲಿದೆ ಎಂಬ ವಿಶ್ಲೇಷಣೆಗಳು ನಡೆದಿತ್ತು. ಆದರೆ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಈ ಕುರಿತು ಸ್ಪಷ್ಟನೆ ನೀಡಿದ್ದರು. ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದರು.
ಜೆಡಿಎಸ್ ಪಕ್ಷ ಎನ್ಡಿಎ ಮೈತ್ರಿಕೂಟದ ಜೊತೆಯೂ ಗುರುತಿಸಿಕೊಂಡಿಲ್ಲ. ಮತ್ತೊಂದು ಕಡೆ ಕಾಂಗ್ರೆಸ್ ನೇತೃತ್ವದ I.N.D.I.A ವಿರೋಧ ಪಕ್ಷಗಳ ಮೈತ್ರಿಕೂಟದಿಂದ ಸಹ ಸಮಾನ ಅಂತರವನ್ನು ಕಾಯ್ದುಕೊಂಡಿದೆ. ಆದ್ದರಿಂದ ಪಕ್ಷದ ನಿಲುವು ಕುತೂಲಹಕ್ಕೆ ಕಾರಣವಾಗಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ನಿರೀಕ್ಷೆ ಹೊಂದಿತ್ತು. ಆದರೆ ಕೇವಲ 19 ಸ್ಥಾನಗಳಿಗೆ ಪಕ್ಷ ತೃಪ್ತಿಪಟ್ಟುಕೊಂಡಿತ್ತು. ಚುನಾವಣೆಯ ಸೋಲಿನ ಬಳಿಕ ಪಕ್ಷ ಸಂಘಟನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಲೋಕಸಭೆ ಚುನಾವಣೆಯ ಸಿದ್ಧತೆಯನ್ನು ಆರಂಭಿಸಿದೆ.












Click it and Unblock the Notifications