ನಿಗಮ ಮಂಡಳಿ ನೇಮಕಕ್ಕೆ ದೇವೇಗೌಡ ಹಸಿರು ನಿಶಾನೆ, ಶಿವರಾತ್ರಿಗೆ ಮುನ್ನಾ ನೇಮಕ
ಬೆಂಗಳೂರು, ಫೆಬ್ರವರಿ 23: ಮಿತ್ರ ಪಕ್ಷ ಕಾಂಗ್ರೆಸ್ ಈಗಾಗಲೇ ನಿಗಮ ಮಂಡಳಿಗೆ ನೇಮಕ ಮಾಡಿ ಎರಡು ತಿಂಗಳು ಆಗುತ್ತಾ ಬಂದಿದ್ದರು, ಜೆಡಿಎಸ್ ಈ ವರೆಗೂ ನಿಗಮ ಮಂಡಳಿ ನೇಮಕಕ್ಕೆ ಆಸಕ್ತಿ ತೋರಿರಲಿಲ್ಲ, ಆದರೆ ಈಗ ಆ ಬಗ್ಗೆ ಗಮನವಹಿಸಿದೆ.
ಶಿವರಾತ್ರಿಗೆ ಮುನ್ನಾ ಜೆಡಿಎಸ್ ಪಕ್ಷವು ನಿಗಮ ಮಂಡಳಿಗೆ ನೇಮಕ ಮಾಡಲು ಇಚ್ಛಿಸಿದ್ದು, ಈಗಾಗಲೇ ದೇವೇಗೌಡ ಅವರು ನಿಗಮ-ಮಂಡಳಿ ಅಂತಿಮ ಪಟ್ಟಿಗೆ ಅಂಕಿತ ಹಾಕಿದ್ದಾರೆ.

ಈಗಾಗಲೇ ಮೊದಲ ಹಂತದಲ್ಲಿ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ 9 ಹಾಲಿ ಶಾಸಕರನ್ನು ನೇಮಕ ಮಾಡಲು ವರಿಷ್ಠರು ನಿರ್ಧರಿಸಿದ್ದಾರೆ. ಅಲ್ಲದೆ ಮೂರು ಮಂದಿ ವಿಧಾನಪರಿಷತ್ ಸದಸ್ಯರಿಗೂ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದ ಮೇಲೆ ಮಧು ಬಂಗಾರಪ್ಪ ಅವರು ಕಣ್ಣಿಟ್ಟಿದ್ದಾರೆ, ಕೋನರೆಡ್ಡಿ ಅವರು ಸಹ ಇದೇ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.
ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಡಾ.ಅನ್ನದಾನಿ ಡಾ.ಶ್ರೀನಿವಾಸಮೂರ್ತಿ, ನಾರಾಯಣಗೌಡ ಅವರ ಹೆಸರುಗಳು ಪ್ರಸ್ತಾಪವಾಗಿತ್ತಿದ್ದು, ಇನ್ನು ಯಾವುದೂ ಸಹ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಹಂತದಲ್ಲಿ ಸೋತಿದ್ದ ಜೆಡಿಎಸ್ ಅಭ್ಯರ್ಥಿಗಳಿಗೂ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಸಾಧ್ಯತೆ ಇದ್ದು, ನಿಗಮ ಮಂಡಳಿಯ ಮೊದಲ ಪಟ್ಟಿ ನಾಳೆ ಬಿಡುಗಡೆ ಆಗುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆ ಅಧಿಸೂಚನೆ ಮಾರ್ಚ್ ಮೊದಲು ಅಥವಾ ಎರಡನೇ ವಾರದಲ್ಲಿ ಘೋಷಣೆ ಆಗಲಿರುವ ಕಾರಣ ಅದಕ್ಕೂ ಮುನ್ನವೇ ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಸರ್ಕಾರಿ ಆದೇಶ ಹೊರಡಿಸಬೇಕಿರುವ ಕಾರಣ ನಾಳೆಯೇ ಪಟ್ಟಿ ಹೊರಡಿಸುವ ಸಾಧ್ಯತೆ ಇದೆ.












Click it and Unblock the Notifications