ಜೈನ ಧರ್ಮ ಅತ್ಯಂತ ಪವಿತ್ರ ಧರ್ಮ, ಭಗವಾನ್ ಮಹಾವೀರರು ನಮಗೆ ಸ್ಪೂರ್ತಿ ಮತ್ತು ಪ್ರೇರಣೆ: ಬಸವರಾಜ ಬೊಮ್ಮಾಯಿ
ಬೆಳಗಾವಿ , ಡಿಸೆಂಬರ್ 30: ಜೈನ ಧರ್ಮ ಅತ್ಯಂತ ಪವಿತ್ರ ಧರ್ಮವಾಗಿದ್ದು, ಭಗವಾನ್ ಮಹಾವೀರರು ನಮಗೆ ಸ್ಪೂರ್ತಿ ಮತ್ತು ಪ್ರೇರಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಹೊಸೂರು ಜೈನ್ ಬಸದಿ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಿದರು ಹಾಗೂ ಶ್ರೀ ಪಟ್ಟಾಚಾರ್ಯ ಲಕ್ಷ್ಮಿ ಸೇನ ಮಹಾರಾಜರು ಕೊಲ್ಲಾಪುರ ಮತ್ತು ಶ್ರೀ ಸ್ವಸ್ತಿಕ ಜೀವಸೇನ ಭಟ್ಟಾರಕ ಸ್ವಾಮೀಜಿ, ನಾಂದಿನಿ , ಇವರ ಬೆಳಗಾವಿ ಮಂಗಲಪುರ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂ, ಬೌಧ, ಸಿಖ್, ಜೈನ್ ಧರ್ಮಗಳು ಹುಟ್ಟಿದ್ದೇ ಭಾರತ ವರ್ಷದಲ್ಲಿ. ಜೈನ ಧರ್ಮ ಅತ್ಯಂತ ಪವಿತ್ರ ಧರ್ಮ. ಸಣ್ಣ ಕೀಟಗಳನ್ನು ನಾಶ ಮಾಡಬಾರದು ಅಂತ ಭಾವಿಸುವುದು ಜೈನ ಧರ್ಮ. ಎಲ್ಲಿ ಅಹಿಂಸೆ ಇದೆ ಅಲ್ಲಿ ಪಾವಿತ್ರ್ಯತೆ ಇದೆ, ಪುಣ್ಯ ಇದೆ ಪುಣ್ಯ ಇದ್ದಲ್ಲಿ ಸ್ವರ್ಗ ಇದೆ ಎಂದರು.
ತ್ಯಾಗದ ಧರ್ಮ
ಮಹಾವೀರರು ತ್ಯಾಗಮೂರ್ತಿ, ರಾಜಮನೆತನದಲ್ಲಿ ಹುಟ್ಡಿದರು ತ್ಯಾಗಮೂರ್ತಿ, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಕಾಡಿಗೆ ಹೋಗುವಾಗ ಎಲ್ಲವನ್ನು ಹಂಚುತ್ತಾರೆ. ಅವರು ಕಾಡಿಗೆ ಹೋಗುವಾಗ ಒಬ್ಬ ಕುಂಟ ಅವರ ಬಳಿ ಬಂದು ನನಗೆ ಏನು ಕೊಡುತ್ತೀರಾ ಎಂದು ಕೇಳುತ್ತಾನೆ. ಅವರು ಅವನಿಗೆ ತಾವು ತೊಟ್ಟ ಬಟ್ಟೆಯ ಮೆಲಿನ ಭಾಗವನ್ನು ಕೊಡುತ್ತಾರೆ. ಮುಂದೆ ಹೋಗುವಾಗ ಮುಳ್ಳಿನ ಕಂಟಿಗೆ ಬಟ್ಟೆ ಸಿಲುಕುತ್ತದೆ. ಆಗ ಮಹಾವಿರರು ಉಟ್ಟ ಬಟ್ಡೆಯನೆಲ್ಲ ಬಿಟ್ಟು ತಪಸ್ಸಿಗೆ ಹೋಗುತ್ತಾರೆ. ಇಂತ ತ್ಯಾಗದ ಧರ್ಮ ಇನ್ನೊಂದು ಧರ್ಮ ಜಗತ್ತಿನಲ್ಲಿಲ್ಲ. ಜೈನ ಧರ್ಮದ ಪುಣ್ಯಾತ್ಮರು ಪುರ ಪ್ರವೇಶ ಮಾಡಿದ್ದಾರೆ. ಅವರನ್ನು ಗೌರವದಿಂದ ಸ್ವಾಗತಿಸಲಾಗಿದೆ ಎಂದರು.

ಅರಟಾಳ ದಲ್ಲಿ ಯಾತ್ರಿ ನಿವಾಸ
ಜೈನ ಧರ್ಮದ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದೇನೆ. ಅಧ್ಯಾತ್ಮಕ ಚಿಂತನೆ ಬಗ್ಗೆ ಅರಿತಿದ್ದೇನೆ. ನನ್ನ ಕ್ಷೇತ್ರದಲ್ಲಿ ಅರಟಾಳ್ ಎಂಬ ಹಳ್ಳಿ ಇದ್ದು, ಅಲ್ಲಿ ಜೈನ ಬಸದಿ, ಸಮುದಾಯ ಭವನ ಕೂಡ ನಿರ್ಮಾಣವಾಗಿದೆ. 1.50 ಕೋಟಿ ರೂ.ಗಳ ವೆಚ್ಚದಲ್ಲಿ ಯಾತ್ರಿ ನಿವಾಸವನ್ನೂ ನಿರ್ಮಿಸಲಾಗುತ್ತಿದೆ. ಎಲ್ಲ ಜೈನ ಮುನಿಗಳು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಶಾಸಕ ಅಭಯ್ ಪಾಟಿಲ್ , ಸಂಜಯ್ ಪಾಟೀಲ್ ಇಬ್ಬರು ಬೆಳಗಾವಿ ಅಭಿವೃದ್ದಿ ಮಾಡಿದ್ದಾರೆ. ಸಾಕಷ್ಟು ಯೋಜನೆಗಳನ್ನು ತಂದು ಅನುಮತಿ ಪಡೆದುಕೊಂಡು ಹೋಗುತ್ತಾರೆ. ಬಹಳ ಕ್ರಿಯಾಶೀಲ ಶಾಸಕರಾಗಿದ್ದಾರೆ ಅವರಿಗೆ ಗುರುಗಳ ಆಶೀರ್ವಾದ ಮತ್ತು ನಿಮ್ಮ ಆಶೀರ್ವಾದ ಇರಬೇಕು ಎಂದರು.












Click it and Unblock the Notifications