ನಿದ್ದೆಯಿಂದ ಏಳದಿದ್ದರೆ ಕಾಂಗ್ರೆಸ್ ನಾಯಕರಿಗೆ ಉಳಿಗಾಲವಿಲ್ಲ!
ಮೈಸೂರು, ಜನೆವರಿ 2: ಕಳೆದ ಒಂದು ವರ್ಷ ಕೊರೊನಾ ಮಹಾಮಾರಿ, ಪ್ರವಾಹ ಇನ್ನಿತರ ಸಮಸ್ಯೆಗಳಲ್ಲಿಯೇ ಕಳೆದು ಹೋಗಿದೆ. ನೂರೆಂಟು ಸಮಸ್ಯೆಯಲ್ಲಿ ಸಿಲುಕಿ ಬಳಲುತ್ತಿರುವ ಜನರ ಕಣ್ಣೀರು ಒರೆಸುವಲ್ಲಿ ಸರ್ಕಾರ ವಿಫಲವಾಗಿದೆ. ಆದರೆ ಜನರ ಪರವಾಗಿ ನಿಂತು ಸರ್ಕಾರದ ವಿರುದ್ಧ ಮುಗಿಬೀಳಬೇಕಾದ ವಿಪಕ್ಷಗಳು ಒಂದರ ಮೇಲೊಂದರಂತೆ ಆರೋಪ ಪ್ರತ್ಯಾರೋಪಗಳಲ್ಲಿ ಮುಂದುವರೆದು ತಮ್ಮ ಕರ್ತವ್ಯ ಮರೆತಿದ್ದು ದುರಂತವೇ ಸರಿ.
ಕೊರೊನಾ ಸಂಕಷ್ಟದ ನಡುವೆಯೂ ವಿಧಾನಸಭಾ ಉಪ ಚುನಾವಣೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದಿದ್ದು, ಈ ಚುನಾವಣೆಗಳ ಫಲಿತಾಂಶ ಆಡಳಿತದಲ್ಲಿರುವ ಬಿಜೆಪಿ ಪರವಾಗಿಯೇ ಬಂದಿರುವುದು ಗಮನಾರ್ಹ ಸಂಗತಿ.

ಡಿಕೆಶಿ ಸಾರಥ್ಯದಲ್ಲೂ ಬದಲಾವಣೆಯಾಗಿಲ್ಲ!
ಕೆಪಿಸಿಸಿ ಸಾರಥ್ಯವನ್ನು ಡಿ.ಕೆ.ಶಿವಕುಮಾರ್ ಅವರು ವಹಿಸಿಕೊಂಡ ಬಳಿಕ ಕಾಂಗ್ರೆಸ್ ನಲ್ಲಿ ಬದಲಾವಣೆ ಗಾಳಿ ಬೀಸಿ ಪಕ್ಷ ಸಂಘಟನೆಯಲ್ಲಿ ಗಟ್ಟಿಯಾಗುತ್ತದೆ ಎಂದೇ ನಂಬಲಾಗಿತ್ತು. ಆದರೆ ಇಲ್ಲಿವರೆಗೂ ಅಂತಹ ಬದಲಾವಣೆ ಕಾಣುತ್ತಿಲ್ಲ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಮತ್ತು ಯಾವುದಾದರೂ ಒಂದು ವಿಚಾರವನ್ನು ಬಲವಾಗಿ ಹಿಡಿದುಕೊಂಡು ಜನರ ಬಳಿ ಹೋಗೋಣ ಎಂದರೂ ಸಾಧ್ಯವಾಗುತ್ತಿಲ್ಲ.

ಜನರ ಬಳಿಗೆ ಒಟ್ಟಾಗಿ ತೆರಳಿದ್ದು ಅಪರೂಪವೇ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ, ನಮ್ಮ ನಾಯಕರೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಹೇಳುತ್ತಾ ಬರುತ್ತಿದ್ದಾರೆಯಾದರೂ ಎಲ್ಲ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದು ಅಪರೂಪವೇ ಎನ್ನಬೇಕು. ಕೇವಲ ಪಕ್ಷದ ಕಾರ್ಯಕ್ರಮಗಳ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಬಿಟ್ಟರೆ ಜನರ ಬಳಿಗೆ ಒಟ್ಟಾಗಿ ತೆರಳಿದ್ದು ಅಪರೂಪವೇ. ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ಜನರ ಬಳಿಗೆ ಹೋಗಲು ಹಲವು ಅವಕಾಶಗಳು ಇತ್ತಾದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿರುವುದು ಎದ್ದು ಕಾಣುತ್ತಿದೆ.

ಪಕ್ಷಕ್ಕೆ ಮುಳುವಾಗುತ್ತಿರುವ ಸಿದ್ದು ಹೇಳಿಕೆ
ಆಡಳಿತ ಪಕ್ಷವನ್ನು ದೂಷಿಸುವ ಭರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀಡುತ್ತಿರುವ ಕೆಲವು ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುತ್ತಿದೆ. ಅವರ ಹೇಳಿಕೆಗಳಿಂದ ಆಡಳಿತ ಪಕ್ಷಕ್ಕಿಂತ ಹೆಚ್ಚು ಮುಜುಗರವಾಗುತ್ತಿರುವುದು ಪಕ್ಷದ ಸಾರಥ್ಯ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಎಂಬುದರಲ್ಲಿ ಎರಡು ಮಾತಿಲ್ಲ.

ಆಡಳಿತ ಪಕ್ಷದ ಮೇಲೆ ಮುಗಿ ಬೀಳಬೇಕಿತ್ತು
ಬದಲಾದ ಕಾಲಮಾನದಲ್ಲಿ ಕಾಂಗ್ರೆಸ್ಗೆ ಬೆಂಬಲವಾಗಿದ್ದ ಜೆಡಿಎಸ್ ಈಗ ಸಂಬಂಧ ಮುರಿದುಕೊಂಡು ಬಿಜೆಪಿಯತ್ತ ಒಲವು ತೋರುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಾಯಕರಿಂದ ತನಗಾದ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ವಿಪಕ್ಷ ಸ್ಥಾನದಲ್ಲಿದ್ದುಕೊಂಡು ಆಡಳಿತ ಪಕ್ಷದ ಮೇಲೆ ಮುಗಿ ಬೀಳಬೇಕಿತ್ತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ನಡೆಯುತ್ತಲೇ ಇದೆ. ಇದರಿಂದ ಆಡಳಿತ ಪಕ್ಷಕ್ಕೆ ಹೆಚ್ಚು ಅನುಕೂಲವಾಗುತ್ತಿದೆ.

ಕಾಂಗ್ರೆಸ್ ಇನ್ನೂ ಗೊಂದಲದಲ್ಲಿದೆ
ಬಿಜೆಪಿ ಈಗಾಗಲೇ ಹಿಂದುತ್ವದ ಅಜೆಂಡಾದೊಂದಿಗೆ ದೇಶದಲ್ಲಿ ಆಡಳಿತದ ಅಧಿಕಾರ ಹಿಡಿದಿದೆ. ಆದರೆ ಕಾಂಗ್ರೆಸ್ ಪಕ್ಷ ಸಂಘಟನೆಯ ವಿಷಯದಲ್ಲಿ ಇನ್ನೂ ಗೊಂದಲದಲ್ಲಿದೆ. ಯಾವ ವಿಷಯವನ್ನು ಹಿಡಿದು ಆಡಳಿತ ಪಕ್ಷದ ವಿರುದ್ಧ ಹೋರಾಡಬೇಕು ಮತ್ತು ಅದನ್ನು ಜನರ ಬಳಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದರಲ್ಲಿ ಎಡವುತ್ತಿದೆ. ಇದಕ್ಕೆ ಕಾರಣಗಳು ಅನೇಕ ಇರಬಹುದು. ಸ್ವಾತಂತ್ರ್ಯ ನಂತರದ ಸಾಧನೆಗಳನ್ನು ಏನೇ ಬಿಚ್ಚಿಟ್ಟರೂ ಮತ್ತು ಏನೇ ಹೇಳಿದರೂ ಅದೆಲ್ಲವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇವತ್ತಿನ ಜನ ಸಮುದಾಯವಿಲ್ಲ.

ಕೈ’ನ ಹಳೇ ಗಿಮಿಕ್ ವರ್ಕೌಟ್ ಆಗುತ್ತಿಲ್ಲ
ಇವತ್ತು ವರ್ಷದಿಂದ ವರ್ಷಕ್ಕೆ ಯುವ ಮತದಾರರು ಬರುತ್ತಿದ್ದಾರೆ. ಅವರಿಗೆ ಹಿಂದಿನ ಯಾವ ವಿಷಯಗಳು ಅಗತ್ಯವಿಲ್ಲ. ಇವತ್ತಿನ ಪರಿಸ್ಥಿತಿಯನ್ನು ಅರಿಯುವ ಮತ್ತು ಎಲ್ಲವನ್ನೂ ಕೂಲಂಕುಶವಾಗಿ ತಿಳಿಯುವ ಪರಾಮರ್ಶಿಸುವ ಬುದ್ಧಿವಂತಿಕೆ ಅವರಿಗಿದೆ. ಹೀಗಿರುವಾಗ ಕಾಂಗ್ರೆಸ್ ನಾಯಕರ ಹಳೆಯ ಗಿಮಿಕ್ ನಡೆಯುವಂತೆ ಕಾಣುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಕೂಡ ಬದಲಾಗಬೇಕಿದೆ. ಕೇವಲ ಓಲೈಕೆ ರಾಜಕಾರಣವನ್ನು ಬದಿಗೊತ್ತಿ ಜನರ ಬಳಿಗೆ ಹೋಗುವ ಕೆಲಸ ಮಾಡಬೇಕಿದೆ.

ಪ್ರಚಾರಕ್ಕಷ್ಟೆ ಸೀಮಿತವಾಯ್ತು ಹೇಳಿಕೆಗಳು
ರಾಜ್ಯದಲ್ಲಿ ಇಂದು ಸಮಸ್ಯೆಗಳ ಹೊಳೆಯೇ ಹರಿಯುತ್ತಿದೆ. ಸರ್ಕಾರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗುತ್ತಿದೆ. ಆದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾದ ವಿಪಕ್ಷಗಳು ಮೌನತಾಳಿವೆ. ಕೇವಲ ವೈಯಕ್ತಿಕ ಹೇಳಿಕೆಗಳಿಂದಷ್ಟೆ ಕೆಲವು ನಾಯಕರು ಪ್ರಚಾರದಲ್ಲಿ ಉಳಿದಿದ್ದಾರೆ ವಿನಃ ಯಾರಿಗೂ ಸಾಮಾಜಿಕ ಕಾಳಜಿ ಇಲ್ಲ ಎನ್ನುವುದು ಜನಕ್ಕೆ ಅರ್ಥವಾಗುತ್ತಿದೆ. ಕೊರೊನಾದಿಂದಾಗಿ ಸಂಕಷ್ಟಗಳಲ್ಲಿಯೇ ಜನ ದಿನ ಕಳೆಯುತ್ತಿದ್ದಾರೆ. ಹೀಗಿರುವಾಗ ಜನಸ್ಪಂದನೆಯ ಕೆಲಸಗಳನ್ನು ವಿಪಕ್ಷವಾಗಿ ಕಾಂಗ್ರೆಸ್ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರಿಗೆ ಅದ್ಯಾಕೋ ಜಾಣ ಕುರುಡು.

ನಿದ್ದೆಯಿಂದ ಏಳದಿದ್ದರೆ ಉಳಿಗಾಲವಿಲ್ಲ
ಚುನಾವಣೆ ಬಂದಾಗ ಮಾತ್ರ ರಾಜಾರೋಷ ತಾಳಿ ಆಡಳಿತ ಪಕ್ಷದ ವಿರುದ್ಧ ನಾಯಕರ ಮೇಲೆ ಆರೋಪಗಳನ್ನು ಮಾಡಿಬಿಟ್ಟರೆ ಮುಗಿಯಿತಾ, ಒಂದು ಜವಾಬ್ದಾರಿಯುತ ವಿಪಕ್ಷವಾಗಿ ಉಳಿಯುವುದು ಬೇಡವೇ? ಇನ್ನಾದರೂ ಕಾಂಗ್ರೆಸ್ ನಾಯಕರು ನಿದ್ದೆಯಿಂದ ಎದ್ದು ಜನರ ಜತೆಗೆ ನಿಂತು ಹೋರಾಡುವುದನ್ನು ಕಲಿಯದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವುದನ್ನು ಅರಿಯಬೇಕಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications