ಸುಮಲತಾ ವಿರುದ್ಧ ರೇವಣ್ಣ ಹೇಳಿಕೆ ಹಿಂದೆ ಇದೆಯಾ ರಾಜಕೀಯ ಲೆಕ್ಕಾಚಾರ?
Recommended Video

ಬೆಂಗಳೂರು, ಮಾರ್ಚ್ 09: ಸುಮಲತಾ ಅಂಬರೀಶ್ ವಿರುದ್ಧ ಸಚಿವ ಎಚ್.ಡಿ.ರೇವಣ್ಣ ಅವರು ಬಹು ಅಸೂಕ್ಷ್ಮ ಹೇಳಿಕೆ ನೀಡಿರುವುದು ರಾಜ್ಯದಾದ್ಯಂತ ಆಕ್ರೋಶ ಎಬ್ಬಿಸಿದೆ. ಜೆಡಿಎಸ್ ಕಾರ್ಯಕರ್ತರಿಗೂ ಇದು ಮುಜುಗರ ಉಂಟುಮಾಡಿದೆ.
1978 ರಿಂದಲೂ ರಾಜಕೀಯ ಬಲ್ಲೆ ಎನ್ನುತ್ತಾರೆ ರೇವಣ್ಣ, ಅಷ್ಟು ಅನುಭವಿ ರಾಜಕಾರಣಿ ಹೀಗೆ ಮಹಿಳೆಯೊಬ್ಬರ ಮೇಲೆ ಅದೂ ದಕ್ಷಿಣ ಕರ್ನಾಟಕದ ಖ್ಯಾತ ನಟಿ, ರಾಜ್ಯದ ಸೂಪರ್ ಸ್ಟಾರ್ ಅಂಬರೀಶ್ ಅವರ ಪತ್ನಿಯ ಬಗ್ಗೆ ಕೀಳಾಗಿ ಮಾತನಾಡಿರುವುದು ರೇವಣ್ಣ ಅವರ ಅಸೂಕ್ಷ್ಮತೆಗೆ ಉದಾಹರಣೆ. ಆದರೆ ರೇವಣ್ಣ ರಾಜಕೀಯ ಅನುಭವವನ್ನು ಹಿನ್ನೆಲೆಯಾಗಿಟ್ಟು ನೋಡಿದರೆ ಈ ಹೇಳಿಕೆಗೆ ರಾಜಕೀಯ ಆಯಾಮ ಇರಬಹುದೇ ಎಂಬ ಅನುಮಾನ ಕಾಡದೆ ಇರದು.
ರೇವಣ್ಣ ಉದ್ದೇಶಪೂರ್ವಕವಾಗಿ ಸುಮಲತಾ ಅವರ ವಿರುದ್ಧ ಇಂತಹದ್ದೊಂದು ಹೇಳಿಕೆ ನೀಡಿದ್ದಾರಾ? ಈ ಪ್ರಶ್ನೆಯನ್ನು ತಳ್ಳಿಹಾಕುವಂತಿಲ್ಲ ಏಕೆಂದರೆ ಈ ರೀತಿಯ ಹೇಳಿಕೆಗಳಿಂದ ಯಾರಿಗೆ ಲಾಭ-ಯಾರಿಗೆ ನಷ್ಟವಾಗುತ್ತದೆ ಎಂಬುದನ್ನು ತಿಳಿಯದಷ್ಟು ಅಪ್ರಬುದ್ಧ ರಾಜಕಾರಣಿ ರೇವಣ್ಣ ಅಲ್ಲ.
ಒಮ್ಮೆ ನೆನಪಿಸಿಕೊಳ್ಳಿ, ರಮ್ಯಾ ಅವರು ಮಂಡ್ಯದಿಂದ ಲೋಕಸಭೆ ಉಪಚುನಾವಣೆಗೆ ನಿಂತಿದ್ದಾಗ ಇದೇ ಜೆಡಿಎಸ್ನ ಮುಖಂಡರೊಬ್ಬರು ರಮ್ಯಾ ಅವರಿಗೆ 'ಅಪ್ಪನ ಹೆಸರು ಗೊತ್ತಿಲ್ಲದವಳು' ಎಂದು ನೀಚ ಹೇಳಿಕೆ ನೀಡಿದ್ದರು. ಹೇಳಿಕೆ ವಿರುದ್ಧ ಭಾರಿ ಆಕ್ರೋಶದ ಅಲೆ ಎದ್ದಿತ್ತು. ಕೊನೆಗೆ ಕುಮಾರಸ್ವಾಮಿ ಅವರು ಸಹ ತಮ್ಮದೇ ಪಕ್ಷದ ಮುಖಂಡನ ಹೇಳಿಕೆಯನ್ನು ಖಂಡಿಸಬೇಕಾಯಿತು. ಜೆಡಿಎಸ್ ಮುಖಂಡನ ಅಸೂಕ್ಷ್ಮ ಹೇಳಿಕೆ ರಮ್ಯಾ ಪರ ಮತಗಳಾಗಿ ಪರಿವರ್ತನೆ ಆಗಿ ಅವರು ಭಾರಿ ಅಂತರದಿಂದ ಗೆದ್ದು ಬಂದರು.

ಅಂದು ರಮ್ಯಾ , ಇಂದು ಸುಮಲತಾ?
ರಮ್ಯಾ ಅವರ ಹೇಳಿಕೆಯನ್ನು ರೇವಣ್ಣ ಅವರ ಹೇಳಿಕೆಯನ್ನು ಪಕ್ಕ-ಪಕ್ಕ ಇಟ್ಟು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ರೇವಣ್ಣ ಅವರು ಉದ್ದೇಶಪೂರ್ವಕವಾಗಿಯೇ ಸುಮಲತಾ ವಿರುದ್ಧ ಹೇಳಿಕೆ ನೀಡಿದರು ಎಂಬ ಅನುಮಾವೊಂದು ತಟ್ಟನೆ ಹಾದು ಹೋಗುವುದಿಲ್ಲವೇ?. ನಿಖಿಲ್ ಕುಮಾರಸ್ವಾಮಿಗೆ ಮಂಡ್ಯದಲ್ಲಿ ಹಿನ್ನಡೆ ಆಗಲೆಂದೇ ರೇವಣ್ಣ ಹೀಗೊಂದು ವಿರೋಧಿಗಳಿಗೆ ಲಾಭವಾಗುವ ಹೇಳಿಕೆ ನೀಡಿದ್ದಾರೆಯೇ ಎಂಬ ಅನುಮಾನ ಬರುವುದಿಲ್ಲವೇ?

ಪ್ರಜ್ವಲ್ ರೇವಣ್ಣ ಅವರಿಗಾಗಿ ರೇವಣ್ಣ ಹೀಗೆ ಮಾಡಿದರೆ?
ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಸಹ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಪ್ರಭೆ ಮುಂದೆ ಹೇಗೆ ರೇವಣ್ಣ ಅವರು ಮಂಕಾಗಿದ್ದರೋ, ನಿಖಿಲ್ ಅವರ ಖ್ಯಾತಿಯ ಮುಂದೆ ಪ್ರಜ್ವಲ್ ಸಹ ಮಂಕಾಗಿದ್ದಾರೆ. ಹಾಗಾಗಿ ಆ ಪ್ರಭಾವಳಿಯನ್ನು ತಗ್ಗಿಸಬೇಕೆಂಬ ಉದ್ದೇಶದಿಂದಲೇ ರೇವಣ್ಣ ಅವರು ಈ ಹೇಳಿಕೆ ದಾಳ ಉರುಳಿಸಿದ್ದಾರೆ ಎಂಬ ಚರ್ಚೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಪ್ರಜ್ವಲ್ ಟಿಕೆಟ್ ತಪ್ಪಿಸಿದ್ದು ಎಚ್ಡಿಕೆ?
ಪ್ರಜ್ವಲ್ ರೇವಣ್ಣ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿಯೇ ಟಿಕೆಟ್ ನೀಡಬೇಕೆಂಬ ಒತ್ತಡ ಇತ್ತು. ಆದರೆ ಆಗ ಅದನ್ನು ಕುಮಾರಸ್ವಾಮಿಯೇ ತಡೆದರು ಎಂಬುದು ಸುದ್ದಿ, ಹಾಗಾಗಿಯೇ ನಿಖಿಲ್ ಕುಮಾರಸ್ವಾಮಿ ಅವರು ಸೋಲಲೆಂಬ ಮಾತ್ಸರ್ಯದಿಂದಲೇ ರೇವಣ್ಣ ಹೀಗೊಂದು ಹೇಳಿಕೆ ನೀಡಿ ನಿಖಿಲ್ ಎದುರಾಳಿಗೆ ಬಲ ತುಂಬಿದ್ದಾರೆ ಎನ್ನುವುದೂ ಸಹ ಒಪ್ಪತಕ್ಕಬಹುದಾದ ವಾದವೇ.

ನಿಖಿಲ್ ಸೋತರೆ ಪ್ರಜ್ವಲ್ ಜೆಡಿಎಸ್ನ ಹೀರೋ
ನಿಖಿಲ್ ಕುಮಾರಸ್ವಾಮಿ ಒಂದೊಮ್ಮೆ ಸೋತದ್ದೇ ಆದರೆ ಜೆಡಿಎಸ್ಗೆ ಗೌಡರ ಕುಟುಂಬದ ವಾರಸುದಾರ ಪ್ರಜ್ವಲ್ ರೇವಣ್ಣ ಆಗುವುದರಲ್ಲಿ ಅನುಮಾನವೇ ಇರುವುದಿಲ್ಲ. ಹಾಗಾಗಿಯೇ ರೇವಣ್ಣ ಅವರು ತಮ್ಮ ಇಷ್ಟು ವರ್ಷದ ರಾಜಕೀಯ ಅನುಭವ ಉಪಯೋಗಿಸಿ ಸುಮಲತಾ ವಿರುದ್ಧ ಹರಿಹಾಯ್ದಿದ್ದಾರೆ. ಅಷ್ಟೆ ಅಲ್ಲದೆ ಕ್ಷಮೆ ಕೇಳುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.












Click it and Unblock the Notifications