ಮುಂದುವರೆದ ಬಿಜೆಪಿ ಆಪರೇಷನ್: ಜನಾರ್ದನ ರೆಡ್ಡಿ ಘರ್ವಾಪ್ಸಿ ಫಿಕ್ಸಾ?
ಬೆಂಗಳೂರು, ಫೆಬ್ರವರಿ 02: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿ ಲೋಕಸಭಾ ಚುನಾವಣೆಗೆ ಸಕಲ ತಯಾರಿಯನ್ನ ನಡೆಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಲ್ಲಿನ ಅಸಮಾಧಾನದಿಂದ ಪಕ್ಷ ಬಿಟ್ಟು ಕಾಂಗ್ರಸ್ ಸೇರ್ಪಡೆಯಾಗಿರುವ ಹಲವು ನಾಯಕರಿಗೆ ಬಿಜೆಪಿ ನಾಯಕರು ಗಾಳ ಹಾಕಿದ್ದು, ಪಕ್ಷವನ್ನ ಬಲ ಪಡಿಸುವ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಯನ್ನ ನಡೆಸಿದೆ.
ಹೌದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನ ಕಾಂಗ್ರೆಸ್ ನಿಂದ ಮರಳಿ ಬಿಜೆಪಿ ಕರೆತಂದಿದ್ದು, ಇದೀಗ ಲಕ್ಷ್ಮಣ್ ಸವದಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಬಿಜೆಪಿ ಕರೆತರುವ ತಂತ್ರಗಾರಿಕೆಯನ್ನ ಬಿಜೆಪಿ ನಾಯಕರು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಸಚಿವ ಹಾಗೂ ಕೆಆರ್ಪಿಪಿ ಸಂಸ್ಥಾಪಕ ಅಧ್ಯಕ್ಷ, ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾರತೀಯ ಜನತಾ ಪಾರ್ಟಿಗೆ ಸೇರುವ ಸಾಧ್ಯತೆ ದಟ್ಟವಾಗಿದ್ದು, ಇನ್ನೇನು ಸೇರ್ಪಡೆ ದಿನಾಂಕ ನಿಗದಿಯಾಗುವುದು ಬಾಕಿ ಇದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ಹೈಕಮಾಂಡ್ ಜವಾಬ್ದಾರಿಯನ್ನ ನೀಡಿದೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಹಲವು ಹಲವು ನಾಯಕರನ್ನ ಪಕ್ಷಕ್ಕೆ ಕರೆತರುವ ಪ್ರಯತ್ನವನ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇತ್ತ ಜನಾರ್ದನ ರೆಡ್ಡಿ ಅವರನ್ನ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಈಗಾಗಲೇ ಬಿ ವೈ ವಿಜಯೇಂದ್ರ ಅವರು ಜನಾರ್ದನ ರೆಡ್ಡಿ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಜನಾರ್ದನ ರೆಡ್ಡಿ ಆವರೊಂದಿಗೆ ಬಿಜೆಪಿ ಹೈಕಮಾಂಡ್ ನಿರಂತರ ಸಂಪರ್ಕದಲ್ಲಿದ್ದು, ಕೆಲವೊಂದು ವಿಷಯಗಳ ಕುರಿತು ಚರ್ಚೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದೆ.ಇತ್ತ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೆಆರ್ಪಿಪಿ ಪಕ್ಷ ಕಟ್ಟಿರುವ ಮಾಝಿ ಸಚಿವ ಜನಾರ್ದನ ರೆಡ್ಡಿ ಅವರು, ಇದೀಗ ಕೆಆರ್ಪಿಪಿ ಉಳಿಸಿಕೊಂಡು ಬಿಜೆಪಿ ಸೇರ್ಪಡೆಯಾಗಬೇಕೇ ಅಥವಾ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಬೇಕೇ ಎನ್ನುವ ಬಗ್ಗೆಯೂ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಜನಾರ್ದನ ರೆಡ್ಡಿ ಅವರನ್ನ ಬಿಜೆಪಿಗೆ ಶೀಘ್ರ ಸೇರುವ ಸಾಧ್ಯತೆ ಬಿಜೆಪಿ ಪಾಳಯದಲ್ಲಿ ದಟ್ಟವಾಗಿವಾಗಿ ಕೇಳಿ ಬರುತ್ತಿದೆ. ಇತ್ತ ಜನಾರ್ದನ ರೆಡ್ಡಿ ಅವರು ಸಹ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಮಾಡುವುದಕ್ಕಾಗಿ ನನ್ನ ಬೆಂಬಲ ಎಂದಿದ್ದಾರೆ.ಇತ್ತ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಯ ಸಂಘಟನೆಯನ್ನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಜನಾರ್ದನ ರೆಡ್ಡಿ ಅವರನ್ನ ಪಕ್ಷ ಕರೆತರುವ ಲೆಕ್ಕಾಚಾರವನ್ನ ಹಾಕಿಕೊಂಡಿದೆ.
ಕಲ್ಯಾಣ ಕರ್ನಾಟಕದಲ್ಲಿ ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಶಕ್ತಿಯುತ ನಾಯಕರಾಗಿ ಬೆಳೆದಿದ್ದಾರೆ. ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರಿದರೆ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳದಲ್ಲಿ ಲಾಭ ಆಗುವ ಲೆಕ್ಕಾಚಾರವಿದೆ. ಹೀಗಾಗಿ ಬಿಜೆಪಿ ಜೊತೆ ಕೆಆರ್ಪಿಪಿ ವಿಲೀನಗೊಳಿಸುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಅಲ್ಲದೇ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕೊಪ್ಪಳ ಲೋಕಸಭಾ ಕ್ಷೇತ್ರದಿಂದಲೂ ಅಖಾಡಕ್ಕೆ ಇಳಿಸಬೇಕು ಎನ್ನುವುದು ಬಿಜೆಪಿ ಪಾಳಯದಲ್ಲಿ ಚರ್ಚೆಯಾಗುತ್ತಿದೆ.












Click it and Unblock the Notifications