ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಆಂತರಿಕ ಚುನಾವಣೆ
ಬೆಂಗಳೂರು, ಫೆ. 20 : ಕಾಂಗ್ರೆಸ್ ಪಕ್ಷದಲ್ಲಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗಾಗಿ ಆಂತರಿಕ ಚುನಾವಣೆ ನಡೆಸಲು ಹೈ ಕಮಾಂಡ್ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆಂತರಿಕ ಚುನಾವಣೆ ಬೇಡ ಎಂಬ ರಾಜ್ಯ ನಾಯಕರ ವಾದವನ್ನು ಹೈಕಮಾಂಡ್ ತಳ್ಳಿ ಹಾಕಿದ್ದು, ಫೆ.22ರಂದು ಚುನಾವಣಾಧಿಕಾರಿಗಳು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಲೋಕಸಭಾ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿರುವ ಬೆಂಗಳೂರು ಉತ್ತರ ಮತ್ತು ಮಂಗಳೂರು ಕ್ಷೇತ್ರದಲ್ಲಿ ಆಂತರಿಕ ಚುನಾವಣೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಈ ಆಂತರಿಕ ಚುನಾವಣೆ ವೇಳಾಪಟ್ಟಿ ಎರಡು ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. [ದಕ್ಷಿಣ ಕನ್ನಡ - ಹೊಸ ಮುಖವೊ ಹಳೆ ಹುಲಿಯೋ]

ಆಂತರಿಕ ಚುನಾವಣೆ ನಡೆಸುವ ಕುರಿತು ಜನಾರ್ದನ ಪೂಜಾರಿ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಚುನಾವಣೆ ನಡೆಸುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೋಮವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕುರಿತು ಪರಿಶೀಲಿಸುವುದಾಗಿ ಹೈಕಮಾಂಡ್ ನಾಯಕರು ಭರವಸೆ ನೀಡಿದ್ದರು. [ಕಾಂಗ್ರೆಸ್ ಪಾಲಿಗೆ ಕಗ್ಗಂಟಾದ 2 ಕ್ಷೇತ್ರಗಳು]
ಸದ್ಯ, ರಾಜ್ಯ ನಾಯಕರ ವಾದವನ್ನು ಹೈಕಮಾಂಡ್ ನಾಯಕರು ತಳ್ಳಿ ಹಾಕಿದ್ದು, ಆಂತರಿಕ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಶೀಘ್ರವೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಲಿದ್ದು, ಆಂತರಿಕ ಚುನಾವಣೆ ನಡೆಸುವ ಕುರಿತು ಚುನಾವಣಾಧಿಕಾರಿಗಳು ಹಾಗೂ ವೀಕ್ಷಕರಿಗೆ ದೆಹಲಿಯಲ್ಲಿ ತರಬೇತಿ ಆರಂಭಗೊಂಡಿದ್ದು, ಚುನಾವಣಾಧಿಕಾರಿ ಹಾಗೂ ವೀಕ್ಷಕರು ಫೆ.22ಕ್ಕೆ ರಾಜ್ಯಕ್ಕೆ ಆಗಮಿಸಲಿದ್ದಾರೆ. [ಪೂಜಾರಿ ಪರ ಬೆಂಗಳೂರಿನಲ್ಲಿ ಬ್ಯಾಟಿಂಗ್]
ಟಿಕೆಟ್ ಗಾಗಿ ಪೈಪೋಟಿ : ಮಂಗಳೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗಾಗಿ ಆಂತರಿಕ ಚುನಾವಣೆ ನಡೆಯಲಿದೆ. ಮಂಗಳೂರು ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಮತ್ತು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ರಮೇಶ್ ಜಿ.ಗೌಡ, ಬಿ.ಎಲ್.ಶಂಕರ್ ಮತ್ತು ರಾಜೀವ್ ಗೌಡ, ಎಚ್.ಎಂ.ರೇವಣ್ಣ ಮುಂತಾದವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದ್ದರಿಂದ ಆಂತರಿಕ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ದೇಶದ 15 ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಆಂತರಿಕ ಚುನಾವಣೆ ನಡೆಸಲು ಸೂಚನೆ ನೀಡಿದ್ದಾರೆ.












Click it and Unblock the Notifications