ಇನ್ಫೋಸಿಸ್: ಸಂಚಾರಿ ಕಣ್ಣಿನ ಆಸ್ಪತ್ರೆಯಿಂದ 5 ಲಕ್ಷ ಮಂದಿಗೆ ಸೇವೆ
ಬೆಂಗಳೂರು, ನವೆಂಬರ್ 06: ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮ ಜಂಟಿಯಾಗಿ ಸಂಚಾರಿ ಕಣ್ಣಿನ ಆಸ್ಪತ್ರೆ ಮೂಲಕ ಕರ್ನಾಟಕ ರಾಜ್ಯ ಗ್ರಾಮೀಣ ಭಾಗದ ಐದು ಲಕ್ಷಕ್ಕೂ ಹೆಚ್ಚು ಜನರಿಗೆ ಸೇವೆ ಒದಗಿಸಲಿವೆ.
ಇನ್ಫೋಸಿಸ್ ಲಿಮಿಟೆಡ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಹಾಗೂ ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳನ್ನು ನಿಭಾಯಿಸುವ ಇನ್ಫೋಸಿಸ್ ಪ್ರತಿಷ್ಠಾನವು ಶ್ರೀಶಾರದಾದೇವಿ ಸಂಚಾರಿ ಕಣ್ಣಿನ ಆಸ್ಪತ್ರೆ ಆರಂಭಿಸಿದೆ. ಇದಕ್ಕೆ ಶ್ರೀರಾಮಕೃಷ್ಣ ಸೇವಾಶ್ರಮವು ಕೈ ಜೋಡಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಲಕ್ಷಾಂತರ ಮಂದಿಗೆ ಕಣ್ಣಿನ ಆರೈಕೆ, ತಪಾಸಣೆಯಂತಹ ಸೇವೆ ಲಭ್ಯವಾಗಲಿದೆ.
ರಾಜ್ಯದ ಹಳ್ಳಿಗಾಡಿನ ಜನರಿಗೆ ಸೇವೆ ಒದಗಿಸಲು ಅತ್ಯಂತ ವಿಭಿನ್ನವಾದ, ಸಂಪೂರ್ಣ ಸುಸಜ್ಜಿತವಾದ ಸಂಚಾರಿ ಕಣ್ಣಿನ ಆಸ್ಪತ್ರೆ ಇದಾಗಿರಲಿದೆ. ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮವು ತುಮಕೂರು, ಅನಂತಪುರ, ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳ ದೂರದ ಊರುಗಳಲ್ಲಿನ ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಐದು ಲಕ್ಷಕ್ಕೂ ಹೆಚ್ಚಿನ ಜನರಿಗೆ ಗುಣಮಟ್ಟದ, ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ನೀಡುವ ಉದ್ದೇಶ ಹೊಂದಿವೆ.

ಯಾವ ಸಮಸ್ಯೆಗೆ ಚಿಕಿತ್ಸೆ ಸಿಗಲಿದೆ
ಕ್ಯಾಟರಾಕ್ಟ್, ಕಣ್ಣಿನಲ್ಲಿ ಗಡ್ಡೆ, ಕಣ್ಣೀರು ಸೋರುವಿಕೆ, ಗ್ಲಾಕೊಮಾ, ಮಧುಮೇಹದಿಂದ ದೃಷ್ಟಿಗೆ ಹಾನಿ, ಮೆಳ್ಳಗಣ್ಣು, ಕಣ್ಣಿನ ಕ್ಯಾನ್ಸರ್ ಹಾಗೂ ಕಿವಿ, ಮೂಗು ಮತ್ತು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಇತರ ಸಾಮಾನ್ಯ ಕಾಯಿಲೆಗಳ ತಪಾಸಣೆಯ ಸೌಲಭ್ಯವನ್ನು ಈ ಸಂಚಾರಿ ಆಸ್ಪತ್ರೆ ನೀಡಲಿದೆ. ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕೂಡ ಈ ಹಿಂದೆ ಇನ್ಫೋಸಿಸ್ ಪ್ರತಿಷ್ಠಾನವು ನೆರವು ಒದಗಿಸಿತ್ತು. 2021ರಲ್ಲಿ ಈ ಆಸ್ಪತ್ರೆಗೆ ಹೊಸ ವಿಭಾಗವನ್ನು ನಿರ್ಮಿಸಲು ಸಹಾಯ ನೀಡಿತ್ತು. ಇದುವರೆಗೆ ಆಸ್ಪತ್ರೆಯು ಸಹಸ್ರಾರು ಜನರಿಗೆ ಶಸ್ತ್ರಚಿಕಿತ್ಸೆಯ ಸೌಲಭ್ಯಗಳನ್ನು ಒದಗಿಸಿದೆ.

ಹಿಂದುಳಿದವರಿಗೆ ತಾಂತ್ರಿಕ ಆರೋಗ್ಯ ಸೇವೆ
ಇನ್ಫೋಸಿಸ್ ಪ್ರತಿಷ್ಠಾನದ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ ಈ ಕುರಿತು ಪ್ರತಿಕ್ರಿಯಿಸಿ, ಬಹುಕಾಲದಿಂದ ಮೂಲಭೂತ ಆರೋಗ್ಯ ಸೇವೆಗಳು ಸಿಗದೆ ಇದ್ದವರಿಗೆ ಗುಣಮಟ್ಟದ ಕಣ್ಣಿನ ಆರೋಗ್ಯ ಸೇವೆ ಒದಗಿಸಲು ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಜೊತೆ ಕೈಜೋಡಿಸುತ್ತಿರುವುದು ನಮಗೆ ಸಂತಸದ ವಿಚಾರ. ಸಂಚಾರಿ ಕಣ್ಣಿನ ಆಸ್ಪತ್ರೆಯಂತಹ ತಾಂತ್ರಿಕವಾಗಿ ಮುಂದಿರುವ ಸೌಲಭ್ಯಗಳನ್ನು ಹಿಂದುಳಿದಿರುವ ವರ್ಗಗಳ ಜನರ ಮನೆಬಾಗಿಲಿಗೆ ತಲುಪಿಸಲಾಗುತ್ತಿದೆ. ಈ ಮೂಲಕ ನಾವು ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯದಲ್ಲಿ ಸಾಧ್ಯವಾದಷ್ಟು ಪರಿಣಾಮಕಾರಿ ನೆರವು ಒದಗಿಸುವ ಉದ್ದೇಶವನ್ನು ಹೊಂದಿದ್ದೇವೆ.

ಪಾವಗಡದ ಮಂದಿಗೆ ಕಣ್ಣಿನ ಸೇವೆ
ದೇಶದಲ್ಲಿ ಸರಿಸುಮಾರು ಪ್ರತಿ ಒಂದು ಲಕ್ಷ ಜನರಿಗೆ ಒಬ್ಬರು ನೇತ್ರತಜ್ಞರು ಲಭ್ಯವಿದ್ದಾರೆ. ನಮ್ಮಲ್ಲಿ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಉತ್ತಮಪಡಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ, ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ತೀರಾ ಮೂಲಭೂತವಾದ ಕಣ್ಣಿನ ಆರೋಗ್ಯ ಸೇವೆಗಳು ಕೂಡ ಸಿಗುತ್ತಿಲ್ಲ. ಪಾವಗಡವು (ತುಮಕೂರು ಜಿಲ್ಲೆ) ಹೆಚ್ಚು ಗ್ರಾಮೀಣ ಪ್ರದೇಶಗಳು ಇರುವ ಪಟ್ಟಣವಾಗಿದೆ. ಆರೋಗ್ಯ ಸೇವೆಗಳು ಇಲ್ಲಿ ಹೆಚ್ಚು ಲಭ್ಯವಿಲ್ಲ. ಕರ್ನಾಟಕದ ಮೊದಲ ಅತ್ಯಾಧುನಿಕ ಸಂಚಾರಿ ಕಣ್ಣಿನ ಆಸ್ಪತ್ರೆಯು ಪಾವಗಡದ ಸಹಸ್ರಾರು ಮಂದಿಗೆ ನೆರವಾಗಲಿದೆ ಎಂದರು.

ದುರ್ಗಮ ಪ್ರದೇಶದ ಜನರಿಗೆ ಸೇವೆ ನೀಡಲಾಗುವುದು
ಈ ಆಸ್ಪತ್ರೆಗೆ ನೆರವು ಒದಗಿಸಿದ್ದಕ್ಕೆ ನಾವು ಇನ್ಫೊಸಿಸ್ ಪ್ರತಿಷ್ಠಾನಕ್ಕೆ ಧನ್ಯವಾದ ಅರ್ಪಿಸುತ್ತಿದ್ದೇವೆ. ಇನ್ಫೋಸಿಸ್ ಪ್ರತಿಷ್ಠಾನದ ಈ ಉದಾರ ಹಾಗೂ ಅಮೂಲ್ಯ ನೆರವಿನ ಕಾರಣದಿಂದಾಗಿ ನಮಗೆ, ರಾಜ್ಯದ ಇತರ ದುರ್ಗಮ ಪ್ರದೇಶಗಳಲ್ಲಿ ಸೇವೆಗಳ ಅಗತ್ಯ ಇರುವವರನ್ನು ತಲುಪಲು ಸಾಧ್ಯವಾಗುತ್ತಿದೆ ಎಂದು ಪಾವಗಡದ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಸ್ವಾಮಿ ಜಪಾನಂದ ಅವರು ಹೇಳಿದರು.












Click it and Unblock the Notifications