ಭಾರತ-ಪಾಕ್ ಗಡಿಸಮಸ್ಯೆ ಗಂಭೀರ: ಕೋಡಿಶ್ರೀಗಳ ಭವಿಷ್ಯ
ಬಾಗಲಕೋಟೆ/ಹುಬ್ಬಳ್ಳಿ, ಅ 21: ರಾಜಕೀಯ ಸ್ಥಿರತೆ, ಅಸ್ಥಿರತೆ, ಅತಿವೃಷ್ಟಿ, ಅನಾವೃಷ್ಟಿಯ ಬಗ್ಗೆ ಭವಿಷ್ಯ ನುಡಿಯುತ್ತಿದ್ದ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ, ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿವರು ಈಗ ಭಾರತ ಮತ್ತು ಪಾಕಿಸ್ತಾನದ ಗಡಿ ಸಮಸ್ಯೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯ ಗೋಪನಕುಪ್ಪದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಶ್ರೀಗಳು, ಎರಡು ರಾಷ್ಟ್ರಗಳ ನಡುವೆ ಗಡಿ ಸಮಸ್ಯೆ ಉಲ್ಭಣಿಸುತ್ತಿದೆ. ಮುಂದಿನ ದಿನಗಳಲ್ಲಿ ಅಂದರೆ ಬರುವ ಯುಗಾದಿಯೊಳಗೆ ಎರಡು ದೇಶಗಳ ನಡುವೆ ಯುದ್ಧ ನಡೆಯುವ ಸಂಭವವಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ 'ನಡೆಯುವ ಹಾದಿ ಮೂರು ಕವಲಾಯಿತು, ಮುತ್ತಿನಗಿಣಿ ಮುಪ್ಪಾಯಿತು, ನಡೆಯುವ ಹಾದಿ ಮೂರು ಕವಲಾಯಿತು, ಮುದುಕನ ಕೋಲ ಮೇಲೆ ಕಾಗಿ ಕುಳಿತಿತೋ' ಎಂದು ನುಡಿದಿದ್ದೆ ಅದರಂತೆ ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿತು ಎಂದಿದ್ದಾರೆ. (ವಾರಭವಿಷ್ಯ : ರಾಶಿಬಲ ಅ.19ರಿಂದ 25ರವರೆಗೆ)
'ಮುತ್ತು ಉದರ್ಯಾವ, ಮೂಗುತಿ ಭಾರವಾದೀತಯ್ಯ' ಎಂದು ಒಗಟಿನ ಮೂಲಕ ಶ್ರೀಗಳು ಮತ್ತೊಂದು ಭವಿಷ್ಯವನ್ನು ನುಡಿದಿದ್ದಾರೆ. ಒಗಟಿನ ಅರ್ಥವನ್ನು ವಿವರಿಸಿದ ಶ್ರೀಗಳು, ಮಳೆ ಹೆಚ್ಚಾಗಲಿದೆ, ಮಳೆಯಿಂದ ಸಮಸ್ಯೆಯೂ ಹೆಚ್ಚಾಗಲಿದೆ ಎಂದಿದ್ದಾರೆ.
ಗಡಿ ಸಮಸ್ಯೆ ಅಲ್ಲದೇ, ಮುಂಬರುವ ಸಂಕ್ರಾತಿಯವರೆಗೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಪ್ಪಿದ್ದಲ್ಲ. ಸಂವಿಧಾನದ ಮೂರು ಅಂಗಗಳಲ್ಲಿನ ಪ್ರಮುಖ ವ್ಯಕ್ತಿಗಳಿಗೆ ಆಪತ್ತು ತಪ್ಪಿದ್ದಲ್ಲ ಎಂದು ಕೋಡಿಶ್ರೀಗಳು ಎಚ್ಚರಿಸಿದ್ದಾರೆ.
ನಾನು ಹೇಳುವ ಸತ್ಯ ಕೆಲವರಿಗೆ ಪ್ರಿಯವಾಗುವುದಿಲ್ಲ ಎನ್ನುವ ಮಾತನ್ನು ಪುನರುಚ್ಚಿಸಿದ ಶ್ರೀಗಳು, ನನ್ನ ಒಗಟಿನ ಭವಿಷ್ಯದ ಸತ್ಯಾಸತ್ಯತೆಯನ್ನು ನಂಬುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ, ನನ್ನ ಭವಿಷ್ಯವನ್ನು ನಂಬಿ ಎನ್ನುವುದು ನನ್ನ ಕೆಲಸವಲ್ಲ ಎಂದಿದ್ದಾರೆ. (ಭಾರತ ದುರ್ಬಲಗೊಳಿಸಲು ಪಾಕ್ ಹೊಸ ಅಸ್ತ್ರ)
ಆದರೆ, ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುನಾವಣೆಗೆ ಮುನ್ನ ಭವಿಷ್ಯ ನುಡಿದಿದ್ದ ಶ್ರೀಗಳು ಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಸಂಸತ್ತು ನಿರ್ಮಾಣವಾಗಲಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಹಾಗೆಯೇ, 'ಮುತ್ತಿನಗಿಳಿ ಮುಪ್ಪಾಗಿ ಮುತ್ತಾಯಿತು' ಎಂದು ಒಗಟು ಭಾಷೆಯಲ್ಲಿ ಹೇಳುವ ಮೂಲಕ ವಯೋವೃದ್ದ ನಾಯಕರೊಬ್ಬರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆನ್ನುವ ಭವಿಷ್ಯವನ್ನೂ ಶ್ರೀಗಳು ಈ ಹಿಂದೆ ನುಡಿದಿದ್ದರು.
ಧಾರವಾಡದಲ್ಲಿ ಇದೇ ವರ್ಷ ಜೂನ್ ತಿಂಗಳಲ್ಲಿ ಭವಿಷ್ಯ ನುಡಿದಿದ್ದ ಶ್ರೀಗಳು, ರಾಜ್ಯದಲ್ಲಿ ಸರಕಾರಕ್ಕೆ ಬಹುಮತವಿದ್ದರೂ ಅಸ್ಥಿರತೆ ಕಾಡುತ್ತಿದೆ. ಆದರೂ, ಸಿದ್ದು ಸರಕಾರಕ್ಕೆ ಸದ್ಯದ ಮಟ್ಟಿಗೆ ತೊಂದರೆಯಿಲ್ಲ ಎಂದಿದ್ದರು.