ಮಣಿಪುರದಲ್ಲಿ ಆಗಿರುವುದು ಕರ್ನಾಟಕದಲ್ಲೂ ಆಗಬಹುದಾ?
ಕರ್ನಾಟಕ ರಾಜ್ಯ ರಾಜಕೀಯ ಯಾವ ಹಂತ ತಲುಪಿದೆ ಎಂದರೆ ಇಲ್ಲಿ ಎಲ್ಲವೂ ಸಾಧ್ಯ ಎನ್ನುವಂತಿದೆ ಪ್ರಸ್ತುತ ಪರಿಸ್ಥಿತಿ. ಯಾವ ಪಕ್ಷದ ಶಾಸಕ ಯಾರ ಪಾಲಾಗುತ್ತಾನೊ, ಯಾರಿಗೆ ಬೆಂಬಲ ಘೋಷಿಸುತ್ತಾನೋ ಹೇಳಲಾಗದ ಸ್ಥಿತಿ.
ಈಗಿನ ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನೇ ಹೋಲುವಂತಹಾ ಸ್ಥಿತಿ ಮಣಿಪುರದಲ್ಲಿ ನಿರ್ಮಾಣವಾಗಿತ್ತು. ಅಲ್ಲಿ ಬಿಜೆಪಿ ತನ್ನೆಲ್ಲಾ ತಂತ್ರಗಳನ್ನು ಬಳಸಿ ಅಧಿಕಾರ ಹಿಡಿಯಲು ಯಶಸ್ವಿಯಾಗಿತ್ತು. ಆದರೆ ಅಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು ಹೇಗೆ ಎಂಬುದು ಮಾತ್ರ ಹೆಚ್ಚು ಚರ್ಚೆ ಆಗಲಿಲ್ಲ.
60 ಸ್ಥಾನ ಹೊಂದಿರುವ ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷ 28 ಗೆದ್ದು ಬಹುಮತಕ್ಕೆ ಮೂರು ಸ್ಥಾನದಿಂದ ಹಿಂದುಳಿಯಿತು. 21 ಸ್ಥಾನ ಗೆದ್ದಿದ್ದ ಬಿಜೆಪಿ ಸ್ಥಳೀಯ ಪಕ್ಷಗಳಾದ ಎನ್ಪಿಎಫ್ ಮತ್ತು ಎನ್ಪಿಪಿ ಹಾಗೂ ಒಬ್ಬ ಪಕ್ಷೇತರ ಶಾಸಕ (ಬಹುಮತ ಸಾಬೀತಿನವರೆಗೆ ಈತ ಕಾಣೆಯಾಗಿದ್ದ) ಜತೆ ಸೇರಿಸಿಕೊಂಡವು ಆದರೂ ಬಿಜೆಪಿಗೆ ಬಹುಮತಕ್ಕೆ ಒಂದು ಸಂಖ್ಯೆ ಕಡಿಮೆ ಇತ್ತು.

ಆ ಒಂದು ಸ್ಥಾನ ತುಂಬಲು ಬಿಜೆಪಿಯು ಮಣಿಪುರದಲ್ಲಿ ತನ್ನದೇ ರೀತಿಯ ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್ನ ಶಾಸಕ ಒಬ್ಬರನ್ನು ತಮ್ಮ ಬಲೆಗೆ ಬೀಳಿಸಿಕೊಂಡಿತು. ಸರ್ಕಾರ ರಚನೆ ನಂತರ ಆತನಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಪದವಿ ನೀಡಿತು ಬಿಜೆಪಿ. ಆ ಹೈಜಾಕ್ ಆದ ಶಾಸಕ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಹ ನೀಡದೆ ಬಿಜೆಪಿಗೆ ಬೆಂಬಲ ಸೂಚಿಸಿದ. ಈಗಲೂ ಆತ ಕಾಂಗ್ರೆಸ್ ಪಕ್ಷದ ಶಾಸಕನೇ.
ಕಾಂಗ್ರೆಸ್ ಶಾಸಕನೊಬ್ಬ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಮತ್ತು ಇನ್ನೂ ಕಾಂಗ್ರೆಸ್ ಶಾಸಕನೇ ಆಗಿರುವ ಆತನಿಗೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಪದವಿ ಕೊಟ್ಟಿರುವುದು ದೇಶದ ಇತಿಹಾಸದಲ್ಲೇ ಮೊದಲು. ಹೀಗೆ ಬಿಜೆಪಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ಶಾಸಕನ ಹೆಸರು ತುನೋಜಾಮ್ ಶಾಮ್ಕುಮಾರ್ ಸಿಂಗ್.
ಆ ಶಾಸಕ ಪಕ್ಷಾಂತರ ನಿಷೇದ ಕಾಯ್ದೆಯನ್ನು ಉಲ್ಲಂಘಿಸಿದ್ದಾನೆ ಎಂದು ಗೊತ್ತಿದ್ದರೂ ಕೂಡ ಬಿಜೆಪಿ ಮುಖಂಡರು ಮಣಿಪುರದ ರಾಜ್ಯಪಾಲರು ಆಗಿರುವ ನಜ್ಮಾ ಹೆಪ್ತುಲ್ಲಾ ಅವರು ಆತನಿಗೆ ಸಚಿವನಾಗಿ ಪ್ರಮಾಣ ವಚನ ಬೋಧಿಸಿದರು.
ಮಣಿಪುರ ಕಾಂಗ್ರೆಸ್ ಪಕ್ಷ ಶಾಮ್ಕುಮಾರ್ ಸಿಂಗ್ಗೆ ಷೋಕಾಸ್ ನೋಟೀಸ್ ಜಾರಿ ಮಾಡಿತು ಅದನ್ನು ಅವರು ನಿರ್ಲಕ್ಷಿಸಿದರು, ಆ ನಂತರ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಯಿತು. ಆದರೆ ಅವರ ಸ್ಥಾನಕ್ಕೆ ರಾಜಿನಾಮೆ ನೀಡದೆ ಬಿಜೆಪಿ ಸರ್ಕಾರದಲ್ಲಿ ಅಧಿಕಾರ ಅನುಭವಿಸುತಿದ್ದಾರೆ.
ಕರ್ನಾಟಕದಲ್ಲಿ ಈಗ ಬಿಜೆಪಿಗೆ ಮಾಡು ಇಲ್ಲವೆ ಮಡಿ ಸಮಯ, ಯಾವ 'ಬೆಲೆ'ಯಾದರೂ ತೆತ್ತು ಅದು ಅಧಿಕಾರಕ್ಕೆ ಬರಲೇಬೇಕೆನ್ನುವ ಉಮೇದಿನಲ್ಲಿದೆ. ಹಾಗಾಗಿ ಮಣಿಪುರದ ಮಾದರಿಯನ್ನೇ ಬಿಜೆಪಿ ಇಲ್ಲಿಯೂ ಮಾಡಿದಲ್ಲಿ ಆಶ್ಚರ್ಯವಿಲ್ಲ.
ಬಹುಮತ ಸಾಬೀತಿಗೆ 15 ದಿನ ಸಮಯವಿದೆ ಎಂದು ನಿರುಮ್ಮಳವಿದ್ದ ಬಿಜೆಪಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿ ನಾಳೆಯೇ (ಶನಿವಾರ) ಬಹುಮತ ಸಾಬೀತು ಮಾಡಲು ಸೂಚಿಸಿರುವುದು ಅದಕ್ಕೆ ಬಹುದೊಡ್ಡ ಹಿನ್ನಡೆಯಾಗಬಹುದು ಆದರೂ ಬಿಜೆಪಿ ತನ್ನ ಆತ್ಮವಿಶ್ವಾಸ ಕಳೆದುಕೊಂಡಿಲ್ಲದಿರುವುದು ಏನು ತಂತ್ರವನ್ನು ಅದು ನಾಳೆ ಅನುಸರಿಸಬಹುದು ಎಂಬ ಅನುಮಾನ ಮೂಡಿಸಿದೆ.












Click it and Unblock the Notifications