ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹೈಕೋರ್ಟ್ ಹೊಸ ಆದೇಶ
ಬೆಂಗಳೂರು, ಜನವರಿ 18: ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸುವ ಪ್ರಮಾಣಪತ್ರದಲ್ಲಿ ತಮ್ಮ ವಿರುದ್ಧ ರದ್ದಾದ ಅಥವಾ ಖುಲಾಸೆಯಾದ ಕ್ರಿಮಿನಲ್ ಕೇಸುಗಳ ವಿವರವನ್ನೂ ಸಹ ನೀಡಬೇಕು. ಹೌದು ಕರ್ನಾಟಕ ಹೈಕೋರ್ಟ್ ಈ ಕುರಿತು ಮಹತ್ವದ ಆದೇಶ ನೀಡಿದೆ.
ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ತಮ್ಮ ಸದಸ್ಯತ್ವ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಬಾಗಲಕೋಟೆ ಜಿಲ್ಲೆಯ ಬೇವೂರು ಗ್ರಾಮ ಪಂಚಾಯಿತಿ ಸದಸ್ಯ ಮುದಿಯಪ್ಪ ಹೈಕೋರ್ಟ್ ಮೊರೆ ಹೋಗಿದ್ದದರು.

ಈ ಅರ್ಜಿಯನ್ನು ಧಾರವಾಡ ಪೀಠದಲ್ಲಿ ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಖುಲಾಸೆಯಾದ, ರದ್ದಾದ ಪ್ರಕರಣಗಳ ಮಾಹಿತಿಯನ್ನೂ ಸಹ ಸಲ್ಲಿಸಲೇಬೇಕು ಎಂದು ಆದೇಶಿಸಿದೆ.
ಏಕೆ ವಿವರ ನೀಡಬೇಕು?: ಸುಪ್ರೀಂಕೋರ್ಟ್ ಡೆಮಾಕ್ರಟಿಕ್ ಯೂನಿಯನ್ ಆಫ್ ಇಂಡಿಯಾ ವರ್ಸಸ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತಿತರರು ಪ್ರಕರಣದಲ್ಲಿ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಫೈಲ್ ಮಾಡುವ ಪ್ರಮಾಣಪತ್ರದಲ್ಲಿ ಎಲ್ಲ ಕ್ರಿಮಿನಲ್ ಪ್ರಕರಣಗಳ, ಅಂದರೆ ರದ್ದಾದ, ಬಿಡುಗಡೆ ಅಥವಾ ಖುಲಾಸೆಯಾದ ಕೇಸ್ಗಳ ಮಾಹಿತಿಯನ್ನೂ ಕಡ್ಡಾಯವಾಗಿ ಇರಲೇಬೇಕೆಂದು ಆದೇಶ ನೀಡಿದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅಭ್ಯರ್ಥಿಗಳು ಬಾಕಿ ಇರುವ ಕ್ರಿಮಿನಲ್ ಕೇಸುಗಳ ವಿವರ ಸಲ್ಲಿಸಿದರೆ ಸಾಲದು, ಅದರ ಜತೆ ಖುಲಾಸೆ ಅಥವಾ ರದ್ದಾದ ಪ್ರಕರಣಗಳ ಮಾಹಿತಿಯನ್ನೂ ನೀಡಬೇಕು. ಏಕೆಂದರೆ ಅದರಿಂದ ಮತದಾರರು ಯಾವ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ?, ಅವರ ಹಿನ್ನೆಲೆ ಏನು? ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಚುನಾಯಿತ ಅಭ್ಯರ್ಥಿಗಳ ಅನರ್ಹತೆಗೆ ಶಿಕ್ಷೆ ಅಥವಾ ಆರೋಪಿ ಎಂಬುದು ಸಾಬೀತಾಗಿರುವುದು ಅತ್ಯಗತ್ಯವಾಗಿದರೂ ಸಹ ನಾಮಪತ್ರದ ನಮೂನೆಯಲ್ಲಿ ಮಾಹಿತಿ ಬಹಿರಂಗಪಡಿಸುವಾಗ ಕೇವಲ ಶಿಕ್ಷೆ ಆಗಿರುವುದು ಅಥವಾ ಬಾಕಿ ಇರುವುದು ಅಥವಾ ಖುಲಾಸೆಗೊಂಡಿರುವುದು ಎಂದು ಪ್ರತ್ಯೇಕಿಸಲಾಗದು. ಎಲ್ಲಾ ಮಾಹಿತಿಯನ್ನು ಒದಗಿಸಲೇಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ. ಖುಲಾಸೆಗೊಂಡಿರುವ ಪ್ರಕರಣದ ವಿವರ ನೀಡದ್ದಕ್ಕಾಗಿ ತಮ್ಮ ಆಯ್ಕೆ ಅನರ್ಹಗೊಳಿಸಿರುವುದು ಕಾನೂನು ಬಾಹಿರವೆಂದು ಅರ್ಜಿದಾರರು ವಾದ ಮಂಡಿಸಿದ್ದನ್ನು ನ್ಯಾಯಾಲಯ ತಳ್ಳಿಹಾಕಿದೆ.
ಮತದಾರರಿಗೆ ಸಂಪೂರ್ಣ ಮಾಹಿತಿ: ಒಂದು ವೇಳೆ ನಾಮಪತ್ರ ಸಲ್ಲಿಕೆ ಅರ್ಜಿ ನಮೂನೆಯಲ್ಲಿ ನಿರ್ದಿಷ್ಟ ಕಲಂ ಇಲ್ಲವಾದರೆ ಅಂತಹ ಸಂದರ್ಭಗಳಲ್ಲಿ ಅಭ್ಯರ್ಥಿಗಳು ಹೆಚ್ಚುವರಿಯಾಗಿ ಲಭ್ಯವಿರುವ ಸ್ಥಳಾವಕಾಶ ಬಳಸಿಕೊಳ್ಳಬೇಕು, ಇಲ್ಲವೇ ಅಪರಾಧ ಸಂಖ್ಯೆ, ಆರೋಪ, ಸಹ ಆರೋಪಿಗಳು, ದೂರುದಾರರು, ಪ್ರಕರಣ ಯಾವ ಹಂತದಲ್ಲಿದೆ, ಯಾವ ರೀತಿ ಅದು ವಿಲೇವಾರಿ ಆಗಿದೆ, ವಿಲೇವಾರಿ ಆದ ದಿನಾಂಕ, ಒಂದು ವೇಳೆ ರದ್ದಾಗಿದ್ದರೆ ಅಥವಾ ಖುಲಾಸೆಯಾಗಿದ್ದರೆ ಅದರ ವಿವರಗಳನ್ನೂ ಸಹ ಒದಗಿಸಲೇಬೇಕು ಎಂದು ನ್ಯಾಯಪೀಠ ಹೇಳಿದೆ.
"ಮತದಾರರಿಗೆ ಸಂಪೂರ್ಣ ಮಾಹಿತಿ ನೀಡದೆ ಹೋದರೆ ಚುನಾವಣೆಯ ಪರಿಕಲ್ಪನೆಗೆ ವಸ್ತುಶಃ ಘಾಸಿಯಾಗುತ್ತದೆ, ಅದನ್ನು ಸಂಕುಚಿತ ಮನೋಭಾವದಿಂದ ನೋಡಬಾರದು. ಪ್ರತಿಯೊಬ್ಬ ಅಭ್ಯರ್ಥಿಯ ಸಮಗ್ರ ಮಾಹಿತಿ ಮತದಾರನಿಗೆ ದೊರೆತಾಗ ಮಾತ್ರ ಆತ ಎಲ್ಲ ಅಭ್ಯರ್ಥಿಗಳ ಕುರಿತು ನಿರ್ಧಾರವನ್ನು ಕೈಗೊಳ್ಳಲು ಸಾಧ್ಯ. ಕೆಲವು ಮಾಹಿತಿಯನ್ನು ಅಭ್ಯರ್ಥಿಗಳು ಮುಚ್ಟಿಟ್ಟರೆ ಅದು ಮಾಹಿತಿ ಮರೆ ಮಾಚಿದಂತಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ಖುಲಾಸೆಯಾದ ವಿವರಗಳನ್ನು ನೀಡಬೇಕು. ಆನಂತರ ಮತದಾರರು ಯಾವುದು ಸತ್ಯ ಎಂಬುದನ್ನು ತೀರ್ಮಾನಿಸುತ್ತಾರೆ" ಎಂದು ನ್ಯಾಯಾಲಯ ಹೇಳಿದೆ.












Click it and Unblock the Notifications