#SaveNandini ಅಭಿಯಾನ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎಂಟ್ರಿ!
ಬೆಂಗಳೂರು: ಒಂದೆಡೆ ಕನ್ನಡಿಗರ ಕೆಎಂಎಫ್ (KMF) ಹಾಗೂ ಗುಜರಾತ್ನ ಅಮುಲ್ (Amul) ನಡುವೆ ವಾರ್ ಶುರುವಾಗಿದ್ದರೆ, ಇನ್ನೊಂದು ಕಡೆ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸೇವೆ ನೆನಪು ಮಾಡಿಕೊಳ್ಳುತ್ತಿದ್ದಾರೆ ಕನ್ನಡಿಗರು. ಕೆಎಂಎಫ್ ಉತ್ಪನ್ನಕ್ಕೆ ರಾಯಭಾರಿಯಾಗಿ ಜಾಹೀರಾತುಗಳಲ್ಲಿ ಕಾಣಿಸಿದ್ದ ಪವರ್ ಸ್ಟಾರ್ ಪುನೀತ್ (Appu), ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ಗೆ ಬೆಂಬಲವಾಗಿದ್ದರು.
1974ರಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಕರ್ನಾಟಕ ಡೈರಿ ಡೆವಲಪ್ಮೆಂಟ್ ಪ್ರೋಗ್ರಾಮ್ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಭಾರತದಲ್ಲಿ ಹಾಲಿನ ಕೊರತೆಯನ್ನು ನಿವಾರಿಸಿ, ಜಗತ್ತಿಗೇ ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವ ರಾಷ್ಟ್ರವನ್ನಾಗಿ ದೇಶ ಮುನ್ನಡೆಸಲು ಕೈಗೊಂಡ ಕಾರ್ಯಕ್ರಮದ ಅಡಿಯಲ್ಲಿ ಕೆಎಂಎಫ್ ಬೆಳೆದು ನಿಂತಿತು. ಈಗ ಪ್ರತಿನಿತ್ಯ ಲಕ್ಷಾಂತರ ಲೀಟರ್ ಹಾಲು ಕೆಎಂಎಫ್ನಿಂದ ಸರಬರಾಜು ಮಾಡಲಾಗುತ್ತಿದೆ. ಆದರೆ ಅಮುಲ್ ಎಂಟ್ರಿಯ ಹಿನ್ನೆಲೆಯಲ್ಲಿ ಕನ್ನಡಿಗರ ಸಹನೆಯ ಕಟ್ಟೆ ಒಡೆದಿದ್ದು, ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಜೊತೆಗೆ ಅಪ್ಪು ಕನ್ನಡ ನಾಡಿಗೆ ಮಾಡಿದ್ದ ಸೇವೆಯನ್ನು ನೆನೆಯುತ್ತಿದ್ದಾರೆ.

ಡಾ.ರಾಜ್ಕುಮಾರ್ ಬೆಂಬಲ
1994ರ ತನಕ ಯಾವುದೇ ಜಾಹೀರಾತುಗಳಲ್ಲಿ ನಟಿಸದ ವರನಟ ಡಾ.ರಾಜ್ಕುಮಾರ್ ಕನ್ನಡಿಗರ ಬ್ರ್ಯಾಂಡ್ಗೆ ರಾಯಭಾರಿಯಾಗಿ ನಿಂತರು. ಈ ಮೂಲಕ ಕೆಎಂಎಫ್ ಜಗತ್ತಿನಾದ್ಯಂತ ಸದ್ದು ಮಾಡಲು ಕಾರಣರಾದರು. 1994 ರಲ್ಲೇ ಒಂದೇ ಒಂದು ರೂಪಾಯಿ ಸಂಭಾವನೆ ಪಡೆಯದೇ ರಾಯಭಾರಿಯಾದರು. ಅಂದು ಜಾಹೀರಾತು ವಿಚಾರವಾಗಿ ಡಾ.ರಾಜ್ ಅನುಮತಿ ಕೇಳಿದಾಗ, ಒಂದು ಕ್ಷಣವೂ ಯೋಚಿಸದೆ ಕನ್ನಡಿಗರ ಕೆಎಂಎಫ್ ಜಾಹೀರಾತಿನಲ್ಲಿ ನಟಿಸಲು ಒಪ್ಪಿದರು. ಹೈನುಗಾರಿಕೆ ಉತ್ತೇಜಿಸಲು ಬಲಿಷ್ಠ ಹಾಲು ಒಕ್ಕೂಟ ರಚನೆಗಾಗಿ ನಯಾಪೈಸೆ ಸಂಭಾವನೆ ಪಡೆಯದೆ ಡಾ.ರಾಜ್ ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಕಾಣಿಸಿಕೊಂಡರು.
ತಂದೆಯ ಹಾದಿಯಲ್ಲಿ ಅಪ್ಪು
ಹೀಗೆ ಹಲವು ವರ್ಷಗಳ ಕಾಲ ಡಾ.ರಾಜ್ ನಂದಿನಿಗೆ ಬೆಂಬಲವಾಗಿ ನಿಂತರು. 2006ರಲ್ಲಿ ಡಾ. ರಾಜ್ಕುಮಾರ್ ನಿಧನರಾದ ನಂತರ ಕೆಲವರ್ಷ ಕೆಎಂಎಫ್ ಯಾವುದೇ ರಾಯಭಾರಿ ಹೊಂದಿರಲಿಲ್ಲ. 2003 ರಲ್ಲಿ ನಟ ಉಪೇಂದ್ರ ಸಹ ಸಂಭಾವನೆ ಪಡೆಯದೇ ನಂದಿನಿ ಹಾಲು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿದ್ದರು. ಇದಾದ ಬಳಿಕ 2009 ರಲ್ಲಿ ಡಾ.ರಾಜ್ ಕುಮಾರ್ ಪುತ್ರ ದಿ. ಪುನೀತ್ ಕೂಡ ತಂದೆ ಹಾದಿಯಲ್ಲೇ ಸಾಗಿದ್ದರು. ಗೌರವಧನ ಪಡೆಯದೇ 10 ವರ್ಷ ಕೆಎಂಎಫ್ ಉತ್ಪನ್ನ ನಂದಿನಿಯ ಪ್ರಾಡಕ್ಟ್ಗಳಿಗೆ ರಾಯಭಾರಿಯಾಗಿ ಕೆಲಸ ಮಾಡಿದ್ದರು.

ಒಂದು ಪೈಸೆಯೂ ಬೇಡ!
2009 ರಲ್ಲಿ ಪುನೀತ್ ರಾಜ್ಕುಮಾರ್ ನಂದಿನಿ ಬ್ರ್ಯಾಂಡ್ಗೆ ರಾಯಭಾರಿ ಆಗುವಾಗ, ಸೋಮಶೇಖರ್ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿದ್ದರು. ಈ ವೇಳೆ ಕೆಎಂಎಫ್ ಜಾಹೀರಾತು ಸಂಬಂಧ ಮಾತನಾಡುವಾಗ, ಪುನೀತ್ ರಾಜ್ಕುಮಾರ್ ಅವರ ಗೌರವಧನದ ಬಗ್ಗೆ ಚರ್ಚೆ ಬಂದಿತ್ತಂತೆ. ಪುನೀತ್ ಅವರ ಬಳಿ ಈ ವಿಚಾರ ಚರ್ಚಿಸಿದಾಗ ಪವರ್ ಸ್ಟಾರ್ ಪುನೀತ್, ನನ್ನ ತಂದೆಯವರೇ ಒಂದು ಪೈಸೆ ಹಣವನ್ನೂ ಪಡೆಯದೆಯೇ ನಿಮಗೆ ಪ್ರಚಾರ ನೀಡಿರುವಾಗ ನಾನು ಅದು ಹೇಗೆ ಹಣ ಕೇಳಲಿ? ಎಂದು ಪ್ರಶ್ನಿಸಿದ್ದರಂತೆ.
ಅಪ್ಪು ಶೂಟಿಂಗ್ ಶಿಸ್ತು!
ಎಲ್ಲದರಲ್ಲೂ ಪರ್ಫೆಕ್ಟ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಅದರಲ್ಲೂ ಅವರಿಗಿದ್ದ ಸಮಯ ಪ್ರಜ್ಞೆ ಇತರರಿಗೆ ಮಾದರಿ. ಹೀಗೆ ಕೆಎಂಎಫ್ ರಾಯಭಾರಿಯಾಗಲು ಒಪ್ಪಿದ ನಂತರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಶೂಟಿಂಗ್ ಟೈಂಗೆ ಪಕ್ಕಾ ಬರುತ್ತಿದ್ದರಂತೆ. ಮೊದಲ ವರ್ಷ ನಂದಿನಿ ಗುಡ್ ಲೈಫ್ ಟೆಟ್ರಾ ಪ್ಯಾಕ್ಗೆ ಜಾಹೀರಾತು ನೀಡಿದ್ದರು. ದೇವರಾಯನದುರ್ಗದ ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೂಟಿಂಗ್ ನಡೆಸಲು ತೀರ್ಮಾನವಾಗಿತ್ತು. 3 ದಿನ ನಡೆದ ಜಾಹೀರಾತು ಚಿತ್ರೀಕರಣಕ್ಕಾಗಿ ಪ್ರತಿನಿತ್ಯ ಬೆಳಗ್ಗೆ 8ಕ್ಕೆ ಶೂಟಿಂಗ್ಗಾಗಿ ಬಂದು ಸಂಜೆ 6ಕ್ಕೆ ಹೋಗುತ್ತಿದ್ದರಂತೆ ಪುನೀತ್ ರಾಜ್ಕುಮಾರ್. ಇಲ್ಲೇ ತಿಳಿಯುತ್ತದೆ ಅಪ್ಪು ಅವರಿಗೆ ಕೆಎಂಎಫ್ ಮೇಲಿದ್ದ ಪ್ರೀತಿ, ಗೌರವ ಎಂತಹದ್ದು ಎಂದು.

ಒಟ್ನಲ್ಲಿ ಅಮುಲ್ ಹಾಗೂ ಕೆಎಂಎಫ್ ಕಿತ್ತಾಟದಲ್ಲಿ ಪವರ್ ಸ್ಟಾರ್ ನೀಡಿದ್ದ ಜಾಹೀರಾತಿನ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಈ ಮೂಲಕ ಕನ್ನಡ ನಾಡಿನ ಬ್ರ್ಯಾಂಡ್ ಉಳಿಸಲು ಪುನೀತ್ ಅವರ ಅಭಿಮಾನಿಗಳು ಹಾಗೂ ಕನ್ನಡ ಪರ ಹೋರಾಟಗಾರರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಾವೇರಿದ ಚರ್ಚೆ ಶುರುವಾಗಿದೆ.












Click it and Unblock the Notifications