ಶೋಭಾ ಕರಂದ್ಲಾಜೆ ಕರ್ನಾಟಕದ ಜಯಲಲಿತಾ ಆಗುವರೆ?
ಬೆಂಗಳೂರು: ಜೂನ್, 16: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇರುವುದು 2018ರಲ್ಲಿ. ಆದರೆ ಎಲ್ಲಾ ಪಕ್ಷಗಳಲ್ಲೂ ಸಿದ್ಧತೆ ಈಗಿನಿಂದಲೇ ಆರಂಭವಾಗಿದೆ.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎದ್ದಿರುವ ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆದುಕೊಳ್ಳಲು ವಿರೋಧ ಪಕ್ಷ ಬಿಜೆಪಿ ಶ್ರಮಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.[ವೈರಲ್ ವಿಡಿಯೋ: ವಿವಾದದ ಸುಳಿಯಲ್ಲಿ ಯಡಿಯೂರಪ್ಪ]
ಬಿಜೆಪಿಯ ನೊಗ ಹೊತ್ತಿರುವ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ. ಇದರೊಂದಿಗೆ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಬಿಜೆಪಿ ಶೋಭಾ ಕರಂದ್ಲಾಜೆ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಸಾಧ್ಯತೆ ಇದೆ ಎನ್ನುವುದು ಹೊಸ ಸುದ್ದಿ.[ಕೇದಾರನಾಥದಲ್ಲಿ ಯಡಿಯೂರಪ್ಪ, ಶೋಭಾ, ಸೋಮಣ್ಣ]
2018ರಲ್ಲಿ ಬಿಜೆಪಿ ಅಧಿಕಾರದ ಹಾದಿಗೆ ಮರಳಬೇಕು ಎಂದಾದರೆ ಮಹಿಳಾ ನಾಯಕರ ಸಹಕಾರ ಬೇಕೆ ಬೇಕು. ಈ ಕಾರಣದಿಂದ ಉಡುಪಿ ಮತ್ತು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಉಪಮುಖ್ಯಮಂತ್ರಿ ಎಂದು ಬಿಜೆಪಿ ಬಿಂಬಿಸಿದರೆ ಆಶ್ಚರ್ಯವಿಲ್ಲ.

ಹೊಸ ಸೈನ್ಯ
ಯುಗಾದಿಗೆ ಬಿಜೆಪಿ ಅಧ್ಯಕ್ಷ ಗಾದಿ ಪಡೆದ ಬಿಎಸ್ ವೈ ಉಪಾಧ್ಯಕ್ಷರು ಮತ್ತು ಜಿಲ್ಲಾ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಆದರೆ ಈ ನೇಮಕಕ್ಕೂ ಮುನ್ನ ಬಿಎಸ್ ವೈ ಮತ್ತು ಶೋಭಾ ಪರಸ್ಪರ ಚರ್ಚೆ ನಡೆಸಿಯೇ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದು ಅಷ್ಟೆ ಮುಖ್ಯವಾದ ಅಂಶ.

ಇತಿಹಾಸ
ಬಿಜೆಪಿ ಹಿಂದೆ ಅಧಿಕಾರ ಪಡೆದಾಗ, ಅಧಿಕಾರ ಕಳೆದುಕೊಂಡು ಬಿಎಸ್ ವೈ ಕರ್ನಾಟಕ ಜನತಾ ಪಕ್ಷ ಸ್ಥಾಪನೆ ಮಾಡಿದಾಗ ಎಲ್ಲ ಸಮಯದಲ್ಲೂ ಶೋಭಾ ಬಿಎಸ್ ವೈ ಅವರನ್ನು ಹಿಂಬಾಲಿಸಿದ್ದರು.

ಅರ್ಧಕ್ಕಿಂತ ಹೆಚ್ಚು ಜಿಲ್ಲೆಗೆ ಶೋಭಾ ಉಸ್ತುವಾರಿ
ಜಿಲ್ಲಾ ಘಟಕಕ್ಕೆ ಹೊಸಬರ ನೇಮಕ ಮಾಡಿಕೊಳ್ಳಬೇಕಾದಾಗ ಅತೀವ ಆಸಕ್ತಿ ತೋರಿಸಿದ್ದು ಶೋಭಾ ಕರಂದ್ಲಾಜೆ. ಅರ್ಧಕ್ಕಿಂತ ಹೆಚ್ಚು ನೇಮಕ ಶೋಭಾ ಅವರ ಹೇಳಿಕೆಯಂತೆ ಆಗಿದೆ.

ಬಿಎಸ್ ವೈ VS ಅನಂತ್
ಬಿಜೆಪಿ ಅಧ್ಯಕ್ಷಗಿರಿ ಸಿಕ್ಕ ನಂತರ ಬಿಎಸ್ ವೈ ಮೊದಲು ಮಾಡಿದ ಕೆಲಸ ಕೇಂದ್ರ ಸಚಿವ ಅನಂತ್ ಕುಮಾರ್ ಬಣದ ಬಿ ಎಲ್ ಸಂತೋಷ್ ಅಧಿಕಾರ ಮೊಟಕು ಮಾಡಿದ್ದು.

ಕರ್ನಾಟಕದ ಜಯಲಲಿತಾ
ಒಂದು ವೇಳೆ ಬಿಜೆಪಿ ಅಧಿಕಾರದ ಹಾದಿಗೆ ಮರಳಿದರೆ ಮೊದಲ ಎರಡು ವರ್ಷ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ಮಾಡುವುದು ಪಕ್ಕಾ. ಒಂದು ಕಡೆ ಬಿಎಸ್ ವೈ ಮುಖ್ಯಮಂತ್ರಿ ಆಗಿದ್ದರೆ ಇನ್ನೊಂದು ಕಡೆ ಶೋಭಾ ಉಪಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ಎರಡು ವರ್ಷದ ನಂತರ ಮುಖ್ಯಮಂತ್ರಿ ಗಾದಿಗೆ ಏರಿದರೆ ಆಶ್ಚರ್ಯವಿಲ್ಲ.












Click it and Unblock the Notifications