Breaking: ಕರ್ನಾಟಕದಲ್ಲಿ ಆ.23, 24ಕ್ಕೆ ಮತ್ತೆ ಭಾರಿ ಮಳೆ ನಿರೀಕ್ಷೆ
ಬೆಂಗಳೂರು ಆಗಸ್ಟ್ 19: ಹವಾಮಾನ ವೈಪರಿತ್ಯ ಕಾರಣದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳಲಿದೆ. ಈ ಕಾರಣಕ್ಕೆ ಆಗಸ್ಟ್ 23 ಮತ್ತು 24ರಂದು ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಎಚ್ಚರಿಕೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿ ವಾಯುಭಾರ ಕುಸಿತವು ತಮಿಳುನಾಡಿನತ್ತ ಬಾರದ ಒಡಿಶಾ ಭಾಗದತ್ತ ಸಾಗಿದೆ. ಈ ಹಿನ್ನೆಲೆಯಲ್ಲಿ ಇದರಿಂದ ಕರ್ನಾಟಕಕ್ಕೆ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ. ಆದರೆ ಆಂಧ್ರ ಪ್ರದೇಶದ ರಾಯಲ್ಸೀಮಾದಿಂದ ಕನ್ಯಾಕುಮಾರಿವರೆಗೆ ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪ್ರಭಾವದಿಂದ ಕರ್ನಾಟಕದ ಒಂದೆರಡು ಕಡೆ ಸಾಧಾರಣದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಮತ್ತು ವಿಜ್ಞಾನಿ ಪ್ರಸಾದ್ ಅವರು ತಿಳಿಸಿದ್ದಾರೆ.
ಆಗಸ್ಟ್ 23 ಮತ್ತು 24ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಾಗೂ ಆ.24 ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯಲಿದೆ. ಹೀಗಾಗಿ ಆ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.
11.5ಸೆಂ.ಮೀ.ವರೆಗೆ ಮಳೆ ಸಾಧ್ಯತೆ
ಈ ಮಳೆ ಉದ್ದೇಶಿತ ಪ್ರದೇಶಗಳಲ್ಲಿ ನಿತ್ಯ ಸುಮಾರು ಆರು ಸೆಂಟಿ ಮೀಟರ್ನಿಂದ 11.5ಸೆಂ.ಮೀ.ವರೆಗೆ ಗುಡುಗು, ಮಿಂಚು ಸಹಿತ ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ. ಕಡಲ ತೀರದಲ್ಲಿ ಗಾಳಿಯ ವೇಗವು ತುಸು ಹೆಚ್ಚಾಗಲಿದೆ. ವಾತಾವರಣದಲ್ಲಿ ತಾಪಮಾನ ಕಡಿಮೆ ಆಗುವ ಕಾರಣಕ್ಕೆ ಚಳಿಯ ಆನುಭವ ಹೆಚ್ಚಾಗಿ ಬಾಧಿಸಲಿದೆ ಎಂದು ಅಧಿಕಾರಿಗಳು ತಿಳಿಸಿದೆ.
ನಿಗದಿತ ಎರಡು ದಿನವಷ್ಟೇ ರಾಜ್ಯದಲ್ಲಿ ಅಲ್ಲಲ್ಲಿ ಮಳೆ ಆರ್ಭಟ ಕಂಡು ಬರಲಿದೆ. ನಂತರ ಹವಾಮಾನ ಸಹಜ ಸ್ಥಿತಿಗೆ ಬರುವ ಕಾರಣಕ್ಕೆ ಮಳೆ ಮತ್ತೆ ದುರ್ಬಲಗೊಳ್ಳಲಿದೆ.