ಶಕ್ತಿ ಇರುವ ಪತಿಗೆ ಜೀವನಾಂಶ ನೀಡಿದರೆ ಸೋಂಬೇರಿತನಕ್ಕೆ ಕಾರಣವಾಗುತ್ತದೆ
ಕೋವಿಡ್ನಿಂದ ಉದ್ಯೋಗ ಕಳೆದುಕೊಂಡು ಯಾವುದೇ ಆದಾಯವಿಲ್ಲದ ಕಾರಣ ಜೀವನ ನಿರ್ವವಣೆ ಮಾಡಲು ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ವ್ಯಕ್ತಿಯೊಬ್ಬ ಮಾಡಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಬೆಂಗಳೂರು, ಜನವರಿ 25; ದುಡಿಯಲು ಸಾಮರ್ಥ್ಯ ಹೊಂದಿರುವ ಪತಿಗೆ ಜೀವನಾಂಶ ನೀಡಲು ಪತ್ನಿಗೆ ಆದೇಶಿಸಿದರೆ ಸೋಮಾರಿತನವನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಕೋವಿಡ್ನಿಂದ ಉದ್ಯೋಗ ಕಳೆದುಕೊಂಡು ಯಾವುದೇ ಆದಾಯವಿಲ್ಲದ ಕಾರಣ ಜೀವನ ನಿರ್ವವಣೆ ಮಾಡಲು ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ವ್ಯಕ್ತಿಯೊಬ್ಬ ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಬೆಂಗಳೂರಿನ ಕನಕಪುರ ರಸ್ತೆಯ ವ್ಯಕ್ತಿಯೊಬ್ಬರು ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಪತ್ನಿಯಿಂದ ಜೀವನಾಂಶ ಪಡೆದು ತುಂಬಾ ಆರಾಮಾಗಿ ಜೀವನ ನಡೆಸಲು ಪತಿ ನಿರ್ಧರಿಸಿದ್ದಾನೆ ಎಂಬುದಾಗಿ ನಿಸ್ಸಂದೇಹವಾಗಿ ತೀರ್ಮಾನಿಸಬಹುದಾಗಿದೆ. ಹಾಗಾಗಿ, ಪತ್ನಿಯಿಂದ ಜೀವನಾಂಶ ಕೋರಿದ ಪತಿಯ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಹೈಕೋರ್ಟ್ ಹೇಳಿದೆ. ತನ್ನ ಮತ್ತು ಪತ್ನಿ ಮಗುವಿನ ಜೀವನ ನಿರ್ವಹಣೆ ಮಾಡುವುದು ದುಡಿಯಲು ಸಾಮರ್ಥ್ಯವಿರುವ ವ್ಯಕ್ತಿಯ ಆದ್ಯ ಕರ್ತವ್ಯ ಎಂದು ಸಲಹೆ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಉದ್ಯೋಗ ಹಾಗೂ ಆದಾಯವಿಲ್ಲದ ಕಾರಣ ಪತ್ನಿಗೆ ಜೀವನಾಂಶ ನೀಡಲಾಗದ ಸ್ಥಿತಿಯಲ್ಲಿದ್ದೇನೆ. ಆದ್ದರಿಂದ ಪತಿಯೇ ಜೀವನಾಂಶ ನೀಡಬೇಕು ಎಂಬ ಪತಿಯ ವಾದ ಒಪ್ಪಲು ಸಾಧ್ಯವಿಲ್ಲ.
ಅರ್ಜಿದಾರ ಪತಿ ದುಡಿಯಲು ಸಾಮರ್ಥ್ಯವಿರುವ ವ್ಯಕ್ತಿ. ಯಾವುದೇ ಅಂಗವೈಕಲ್ಯ ಅಥವ ದೌರ್ಬಲ್ಯದಿಂದ ನರಳುತ್ತಿಲ್ಲ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಜೀವನಾಂಶ ಪಡೆಯಲು ಯಾವುದೇ ಲಿಂಗ ಭೇದವಿಲ್ಲ ಎಂಬ ಕಾರಣಕ್ಕೆ ದುಡಿಯಲು ಸಾಮರ್ಥ್ಯವಿರುವ ಪತಿಗೆ ಪತ್ನಿಯಿಂದ ಜೀವನಾಂಶ ವಿತರಣೆಗೆ ಆದೇಶಿಸಿದರೆ, ಸೋಮಾರಿತನಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದೆ.
ಕೋವಿಡ್-19 ಯಿಂದ ಉದ್ಯೋಗ ಕಳೆದುಕೊಂಡ ಎಂಬ ಕಾರಣಕ್ಕೆ ಪತಿ ಆದಾಯ ಗಳಿಸಲು ಸಾಮರ್ಥ್ಯವಿಲ್ಲ ಎಂದು ಹೇಳಲಾಗದು ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರವೇನು?; ಆತ ಮತ್ತು ಆಕೆ 2021ರ ಫೆ.6ರಂದು ಮದುವೆಯಾಗಿದ್ದರು. ಸಂಬಂಧ ಹಳಸಿದ ಕಾರಣ ಪತ್ನಿ ತವರು ಮನೆ ಸೇರಿದ್ದರು. ನಂತರ ಪತಿಯು ವಿಚ್ಚೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅತ್ತ ವೈವಾಹಿಕ ಸಂಬಂಧ ಪುನರ್ ಸ್ಥಾಪಿಸುವಂತೆ ಕೋರಿ ಪತ್ನಿ ಅರ್ಜಿ ಸಲ್ಲಿಸಿದ್ದರು.
ಆದರೆ ಪತಿಯಿಂದ ಮಧ್ಯಂತರ ಜೀವನಾಂಶವಾಗಿ ಮಾಸಿಕ 25 ಸಾವಿರ ರೂ. ಮತ್ತು ವ್ಯಾಜ್ಯ ವೆಚ್ಚವೆಂದು 1 ಲಕ್ಷ ರೂ. ಕೊಡಿಸುವಂತೆ ಕೋರಿ ಪತ್ನಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅದನ್ನು ಆಕ್ಷೇಪಿಸಿದ್ದ ಪತಿ, ತನ್ನ ಜೀವನ ಸಾಗಿಸುವುದಕ್ಕೆ ಯಾವುದೇ ಆದಾಯ ಇಲ್ಲವಾಗಿದೆ, ವಿಚ್ಚೇದನ ಅರ್ಜಿ ಇತ್ಯರ್ಥವಾಗುವರೆಗೆ ತನ್ನ ಮತ್ತು ಪೋಷಕರ ಜೀವನ ನಿರ್ವಹಣೆಗಾಗಿ ಪತ್ನಿಯಿಂದಲೇ ಮಧ್ಯಂತರ ಜೀವನಾಂಶವಾಗಿ ಮಾಸಿಕ 30 ಸಾವಿರ ರೂ. ಕೊಡಿಸುವಂತೆ ಕೋರಿ ಪತಿ ಮಧ್ಯಂತರ ಅರ್ಜಿ ಸಹ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ ಕೌಟುಂಬಿಕ ನ್ಯಾಯಾಲಯ, ಪತಿಯ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿತ್ತು. ಹಾಗೆಯೇ, 2021ರ ಡಿಸೆಂಬರ್ನಿಂದ ವಿಚ್ಚೇಧನ ಅರ್ಜಿ ಇತ್ಯರ್ಥವಾಗುವರೆಗೆ ಪತ್ನಿಗೆ ಮಾಸಿಕ 10 ಸಾವಿರ ರು. ಜೀವನಾಂಶ ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 25 ಸಾವಿರ ರೂ. ಪಾವತಿಸುವಂತೆ ಪತಿಗೆ ನಿರ್ದೇಶಿಸಿ 2022ರ ಅ.31ರಂದು ಆದೇಶಿಸಿತ್ತು. ಪತ್ನಿಯಿಂದ ಜೀವನಾಂಶ ಕೋರಿದಕ್ಕೆ 10 ಸಾವಿರ ರು. ದಂಡ ಸಹ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications