ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದರೆ 10 ಸೀಟು ಗೆಲ್ಲುತ್ತಿತ್ತು : ಚಲುವರಾಯಸ್ವಾಮಿ
ಮಂಡ್ಯ, ಜೂನ್ 09 : 'ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ 8 ರಿಂದ 10 ಸೀಟು ನಾವು ಗೆಲ್ಲಬಹುದಿತ್ತು' ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಭಾನುವಾರ ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಅವರು, 'ಕಾಂಗ್ರೆಸ್-ಜೆಡಿಎಸ್ ಹಾರ್ಟ್ ಟು ಹಾರ್ಟ್ ಸೇರಿ ಜನಪರವಾದ ಕೆಲಸ ಮಾಡಿಕೊಂಡು ಹೋಗಿದ್ದರೆ ಸರಿ ಆಗುತ್ತಿತ್ತು. ಸರ್ಕಾರ ಒಂದು ವರ್ಷ ಬಹಳಷ್ಟು ಡ್ಯಾಮೇಜ್ ಮಾಡಿಕೊಂಡಿದೆ' ಎಂದರು.
'ರಾಜ್ಯ ಸರ್ಕಾರದ ಪರಿಸ್ಥಿತಿ ಚೆನ್ನಾಗಿಲ್ಲ ಅಂತ ನಿಮಗೂ ಗೊತ್ತು. ನಮಗೂ ಗೊತ್ತು. ಚೆನ್ನಾಗಿಲ್ಲ ಎಂಬುದನ್ನ ಚರ್ಚೆ ಮಾಡುವುದಿಲ್ಲ. ವಾಸ್ತವವಾಗಿ ಗೊತ್ತಿರುವ ವಿಚಾರ' ಎಂದು ಚಲುವರಾಯಸ್ವಾಮಿ ಅವರು ತಿಳಿಸಿದರು.

'ಚುನಾವಣೆಗೆ ಹೋಗಬೇಕು ಎಂಬುದು ಒಬ್ಬರಿಬ್ಬರ ತೀರ್ಮಾನವಲ್ಲ. ಯಾರೊಬ್ಬರಿಗೂ ಚುನಾವಣೆಗೆ ಹೋಗಬೇಕು ಎಂದಿಲ್ಲ. ಸರ್ಕಾರ ನಾಲ್ಕು ವರ್ಷ ಪೂರೈಸಬೇಕು ಎಂಬ ಆಸೆ ಇದೆ. ಸರ್ಕಾರ ಮಾಡಲು ಅವಕಾಶ ಸಿಕ್ಕಿದವರು ಗೌರವಯುತವಾಗಿ ಕೆಲಸ ಮಾಡಬೇಕು' ಎಂದು ಚಲುವರಾಯಸ್ವಾಮಿ ಸಲಹೆ ನೀಡಿದರು.
'ಲೋಕಸಭಾ ಚುನಾವಣೆ ತೀರ್ಮಾನ ಜನರಿಗೆ ಬಿಟ್ಟಿದ್ದು, ಜನರು ನಮ್ಮನ್ನ ಕೇಳಿಕೊಂಡು ತೀರ್ಮಾನ ತೆಗೆದುಕೊಳ್ಳನಬೇಕು ಅಂತ ಹೇಳುವುದಕ್ಕೆ ಆಗಲ್ಲ. ದೇವೇಗೌಡ್ರು ಸೋತಿಲ್ವಾ, ದೇವೇಗೌಡರಿಗಿಂತ ಇವರು ಪ್ರಭಾವಿನಾ?' ಎಂದು ಚಲುವರಾಯಸ್ವಾಮಿ ಅವರು ಸಚಿವ ಡಿ.ಸಿ.ತಮ್ಮಣ್ಣ ಅವರ ಹೇಳಿಕೆಯನ್ನು ಪ್ರಶ್ನಿಸಿದರು.
'ಸೋತ ತಕ್ಷಣ ಹತಾಶರಾಗಿ ಮಾತನಾಡುವುದು ಸರಿಯಲ್ಲ. ಅವರನ್ನು ಜನರು ಗೆಲ್ಲಿಸಿದ್ದಾರೆ, ಮಂತ್ರಿಯಾಗಿದ್ದಾರೆ. ಅದಕ್ಕೆ ಕೆಲಸ ಮಾಡಬೇಕು' ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಕಾಂಗ್ರೆಸ್ ಕಣಕ್ಕಿಳಿದಿದ್ದ 22 ಕ್ಷೇತ್ರಗಳ ಪೈಕಿ 1 ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿತ್ತು.












Click it and Unblock the Notifications