Kichcha Sudeep : ಬಿಜೆಪಿ ಸೇರುವ ಸುದ್ದಿಗಳು; ಮೌನ ಮುರಿದ ನಟ ಕಿಚ್ಚ ಸುದೀಪ್
ಬೆಂಗಳೂರು, ಏಪ್ರಿಲ್ 05; ಬಹುಭಾಷಾ ನಟ, ಅಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸುದ್ದಿಗಳ ಬಗ್ಗೆ ಕಿಚ್ಚ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಮೇ 10ರಂದು ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಬುಧವಾರ ಬೆಂಗಳೂರಿನ ಜೆ. ಪಿ. ನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಕಿಚ್ಚ ಸುದೀಪ್, "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಪತ್ರಿಕಾಗೋಷ್ಠಿ ನಡೆಸುವುದು ನಿಜ. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ" ಎಂದು ಸ್ಪಷ್ಟಪಡಿಸಿದರು. ಮಧ್ಯಾಹ್ನ 1.30ಕ್ಕೆ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ಇದರಲ್ಲಿ ಪಾಲ್ಗೊಳ್ಳಲು ಸುದೀಪ್ ಜೆ. ಪಿ. ನಗರದಿಂದ ತೆರಳಿದರು.

"ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನು ನಾನು ಮಾತನಾಡುತ್ತೇನೆ. ನಾನು ಯಾರ ಪರವಾಗಿಯೂ ಟಿಕೆಟ್ ಕೇಳಿಲ್ಲ. ಪಕ್ಷದಿಂದ ಟಿಕೆಟ್ ಕೊಡಿಸುವಷ್ಟು ನಾನು ದೊಡ್ಡವನಲ್ಲ" ಎಂದು ಸುದೀಪ್ ಹೇಳಿದರು.
"ನನ್ನ ಮ್ಯಾನೇಜರ್ ಜಾಕ್ ಮಂಜುಗೆ ಟಿಕೆಟ್ ಕೇಳಿಲ್ಲ. ಒಂದು ಪಕ್ಷದಿಂದ ಟಿಕೆಟ್ ಕೊಡಿಸುವಷ್ಟು ನಾನು ದೊಡ್ಡವನಲ್ಲ. ಕೆಲವೊಂದು ವಿಚಾರಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ಪ್ರಚಾರ ಮಾಡುವ ವಿಚಾರದಲ್ಲಿ ನನಗೆ ಸಹಾಯ ಮಾಡಿದವರು ಅನೇಕರು ಇದ್ದಾರೆ. ನಾನು ಚಿತ್ರರಂಗಕ್ಕೆ ಬಂದಾಗ ಸಹಕಾರ ನೀಡಿದವರು ಇದ್ದಾರೆ. ಅವರ ಪರವಾಗಿ ನಾನು ಈ ಸಮಯದಲ್ಲಿ ನಿಲ್ಲಬೇಕು" ಎಂದರು.
"ನಾನೊಬ್ಬ ನಟ ನನ್ನ ಕೆಲ ನಿಲುವು ಕೆಲವರ ಪರ ತೆಗೆದುಕೊಂಡಿದ್ದೇನೆ. ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನು ಮಾತನಾಡುತ್ತೇನೆ. ಎಲ್ಲಾ ಪಕ್ಷದಲ್ಲೂ ನನಗೆ ಆತ್ಮೀಯರು ಇದ್ದಾರೆ. ನನ್ನ ಪರವಾಗಿ ಯಾರು ನಿಂತಿದ್ದರೋ ಅವರ ಪರವಾಗಿ ಈಗ ನಾನು ನಿಲ್ಲುತ್ತೇನೆ" ಎಂದು ಸುದೀಪ್ ಸ್ಪಷ್ಟಪಡಿಸಿದರು.
"ನಾನು ಯಾವುದೇ ಪಕ್ಷದಿಂದ ಚುನಾವಣೆಗೆ ನಿಲ್ಲುವುದಿಲ್ಲ. ಕಷ್ಟ ಕಾಲದಲ್ಲಿ ನನ್ನ ಜೊತೆ ನಿಂತವರ ಪರವಾಗಿ ನಾನು ಈಗ ನಿಲ್ಲುತ್ತೇನೆ. ನನ್ನದೇ ಆದ ಕೆಲವು ನಿಲುವು ತೆಗೆದುಕೊಂಡಿದ್ದೇನೆ. ಅದರ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೇನೆ " ಎಂದು ಸುದೀಪ್ ಹೇಳಿದರು.
ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ; ನಟ ಕಿಚ್ಚ ಸುದೀಪ್ ಬಿಜೆಪಿ ಸೇರುವ ಸುದ್ದಿಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. "ಬಿಜೆಪಿ ಸಿನಿಮಾ ಸ್ಟಾರ್ಗಳನ್ನು ಕರೆಸಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಈ ಬಾರಿ ಗೆಲುವು ಕಷ್ಟ ಎನ್ನುವುದು ಗೊತ್ತಾಗಿದೆ. ನಟರ ಮುಖ ತೋರಿಸಿ ಮತ ಪಡೆಯಲು ಪಕ್ಷ ಹೊರಟಿದೆ. ನಮಗೆ ನಮ್ಮ ಕಾರ್ಯಕರ್ತರು, ನನ್ನ ಜನರೇ ಸ್ಟಾರ್ ಪ್ರಚಾರಕರು. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗಲ್ಲ" ಎಂದರು.
ಹೋಟೆಲ್ಗೆ ಆಗಮನ; ನಟ ಕಿಚ್ಚ ಸುದೀಪ್ ಜೆ. ಪಿ. ನಗರದ ನಿವಾಸದಿಂದ ಅಶೋಕ ಹೋಟೆಲ್ಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಸುದೀಪ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ಚುನಾವಣಾ ಆಯೋಗದ ಅಧಿಕಾರಿಗಳು ಸಹ ಪತ್ರಿಕಾಗೋಷ್ಠಿಗೆ ಆಗಮಿಸಿದ್ದಾರೆ. ಪತ್ರಿಕಾಗೋಷ್ಠಿಯ ಸಂಪೂರ್ಣ ವಿಡಿಯೋ ಚಿತ್ರೀಕರಣವನ್ನು ಮಾಡಿಕೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಬಿಜೆಪಿ ಬೆಂಬಲಿಸುವ, ಪ್ರಚಾರ ನಡೆಸುವ ಕುರಿತು ಮಾತನಾಡುವ ನಿರೀಕ್ಷೆ ಇದೆ. ಈಗಾಗಲೇ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷದಿಂದ ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅವರು ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ನಿರೀಕ್ಷೆ ಇದೆ.












Click it and Unblock the Notifications