ಮಂಡ್ಯ: ಶಿವರಾತ್ರಿಯಂದೇ ಪತ್ನಿ, ಮಗುವನ್ನು ಕೊಚ್ಚಿದ ಪತಿರಾಯ
ಮಂಡ್ಯ,ಮಾರ್ಚ್,09: ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆರು ತಿಂಗಳ ಮಗನ ಕುತ್ತಿಗೆಯಿಂದ ಸೀಳಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಲೋಕೇಶ್(35) ಪುತ್ರ ರಂಗ್ಪಪ್ಪ(6ತಿಂಗಳು) ಮೃತಪಟ್ಟಿದ್ದರೆ ಪತ್ನಿ ರಮ್ಯ(24) ಸಾವು ಬದುಕಿನ ನಡುವೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾಳೆ. ಲೋಕೇಶ್ ಕೆಲವು ವರ್ಷಗಳ ಹಿಂದೆ ಪ್ರೇಮವಿವಾಹವಾಗಿದ್ದನು.[ಕುಟುಂಬದ 14 ಜನರನ್ನು ಕೊಂದು ನೇಣಿಗೆ ಶರಣಾದ ವ್ಯಕ್ತಿ]

ಘಟನೆಯ ವಿವರ:
ಹೊನಗಾನಹಳ್ಳಿ ಗ್ರಾಮದ ಲೋಕೇಶ್ ಮದ್ದೂರಿನ ಅಡಿಗಾಸ್ ಹೋಟೆಲಿನಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದನು. ಮದ್ದೂರು ತೈಲೂರಿನ ರಮ್ಯ ಎಂಬಾಕೆಯ ಪರಿಚಯವಾಗಿ ಅವರನ್ನು ಪ್ರೀತಿಸಿ ಕಳೆದ ಎರಡು ವರ್ಷದ ಹಿಂದೆ ಮದುವೆಯಾಗಿದ್ದನು. ಮದುವೆ ಬಳಿಕ ತನ್ನ ಸ್ವಗ್ರಾಮ ಹೊನಗಾನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಈತ ಪತ್ನಿ ಹಾಗೂ ಮಗು ರಂಗಪ್ಪನೊಂದಿಗೆ ಸಂತೋಷವಾಗಿಯೇ ಇದ್ದನು.[ಜೋಡಿ ಕೊಲೆ : ಜೆಡಿಎಸ್ ನಗರಸಭಾ ಸದಸ್ಯನಿಗೆ ಜೀವಾವಧಿ ಶಿಕ್ಷೆ]
ಶಿವರಾತ್ರಿ ಹಬ್ಬದದಂದು ಶ್ರೀರಂಗಪಟ್ಟಣದ ದೇವಸ್ಥಾನಕ್ಕೆ ಹೋಗಿ ಸಂಜೆ ಮನೆಗೆ ಹಿಂತಿರುಗಿ ಬಂದ ದಂಪತಿ ಸಂಜೆ 7ರ ಸಮಯದಲ್ಲಿ ಜಗಳ ಆರಂಭಿಸಿದ್ದಾರೆ. ಈ ಸಂದರ್ಭ ಕೋಪಗೊಂಡ ಲೋಕೇಶ ಪತ್ನಿ ಹಾಗೂ ಪುತ್ರನ ಕತ್ತನ್ನು ಮಚ್ಚಿನಿಂದ ಕೊಯ್ದು ಬಳಿಕ ತಾನು ಕತ್ತುಕೊಯ್ದು ಕೊಂಡಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದ ಮೂವರನ್ನು ಕಂಡ ಅಕ್ಕಪಕ್ಕದವರು ಬಾಗಿಲು ಬಡಿದಿದ್ದಾರೆ. ಆಗ ಸಂಪೂರ್ಣ ನಿತ್ರಾಣಳಾಗಿದ್ದ ಹೆಂಡತಿ ರಮ್ಯ ಬಾಗಿಲು ತೆಗೆದಿದ್ದಾಳೆ. ಆ ನಂತರ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮಗು ರಂಗಪ್ಪ ಮತ್ತು ಲೋಕೇಶ್ ಮೃತಪಟ್ಟಿದ್ದಾರೆ. ಪತ್ನಿ ರಮ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.[ಮಕ್ಕಳನ್ನು ಕೊಂದು ಮೋರಿಗೆ ಶವ ಎಸೆದ ಪಾಪಿ ತಂದೆ]
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಪಿಐ ಲೋಕೇಶ್, ಪಿಎಸ್ಐ ಆನಂದ್ ತೆರಳಿ ಪರಿಶೀಲನೆ ನಡೆಸಿದ್ದು, ಕೆರೆಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಲೋಕೇಶ್ ಕೋಪ ಕೊಲೆಯಲ್ಲಿ ಅಂತ್ಯವಾಗಲು ಏನು ಕಾರಣ ಎಂದು ತಿಳಿದು ಬಂದಿಲ್ಲ.












Click it and Unblock the Notifications