ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲ ರಚನೆ ರಹಸ್ಯ ಬಯಲು
ಬೆಂಗಳೂರು, ಜುಲೈ 24: ಸುಖ ಸಂಸಾರಕ್ಕೆ 12 ಸೂತ್ರಗಳಿದ್ದಂತೆ, ಕರ್ನಾಟಕದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು 23 ಸೂತ್ರಗಳನ್ನು ಹೆಣೆದಿದ್ದರು. ಈ ಸೂತ್ರಗಳ ಬಲದಿಂದ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆ 105 ಸ್ಥಾನ ಗೆಲ್ಲಲು ಸಾಧ್ಯವಾದರೂ ಅಧಿಕಾರ ಸರಿಯಾಗಿ ಕೈ ದಕ್ಕಲಿಲ್ಲ. ದಕ್ಕಿದ ಅಧಿಕಾರ 55 ಗಂಟೆಗಳ ನಂತರ ಪರರ ಪಾಲಾಯಿತು. ಕೈ-ತೆನೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳು ಅಧಿಕಾರ ನಡೆಸಿದ್ದು ಈಗ ಇತಿಹಾಸ. ಈಗ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ, ಸಂಪುಟ ವಿಸ್ತರಣೆಯ ಜವಾಬ್ದಾರಿಯನ್ನು ಹೊತ್ತು ಬಿ.ಎಸ್ ಯಡಿಯೂರಪ್ಪ ಅವರು ಮುನ್ನಡೆಯುತ್ತಿದ್ದಾರೆ.
ಕರ್ನಾಟಕದಲ್ಲಿ ಜಯಭೇರಿ ಬಾರಿಸಲು ಅಮಿತ್ ಶಾ 23 ಸೂತ್ರ
ನೂತನ ಸರ್ಕಾರ ರಚನೆ ಅಗತ್ಯವಿರುವ ಸಂಖ್ಯಾಬಲ ಸದ್ಯಕ್ಕೆ ಸಿಕ್ಕಿದ್ದರೂ, ಕಾಂಗ್ರೆಸ್ -ಜೆಡಿಎಸ್ ಅತೃಪ್ತ ಶಾಸಕರು ಬಿಜೆಪಿ ಕಡೆಗೆ ಬಂದರೆ, ತೊಂದರೆ ತಪ್ಪಿದ್ದಲ್ಲ, 2008ರಲ್ಲಿ ಸರ್ಕಾರ ರಚನೆಗೆ ಆತುರ, ಸಂಪುಟ ರಚನೆ ತಂತ್ರಗಾರಿಕೆಯಲ್ಲಿ ಆದ ವ್ಯತ್ಯಾಸದಿಂದ ಯಡಿಯೂರಪ್ಪ ಹಿನ್ನಡೆ ಅನುಭವಿಸಿದ್ದರು. ಆದರೆ, ಈಗ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಬಿಜೆಪಿ ಹೈಕಮಾಂಡ್ ನಿಂದ ಆದೇಶ ಬಂದಿದೆ.
"ಸಿಎಂ ಪಟ್ಟಕ್ಕೇರುವ ಮೊದಲೇ ರೈತರ ಹಿತ ಕಾಯುವ ಆಶ್ವಾಸನೆ"
ಸಂಪುಟ ಹೇಗಿರಲಿದೆ?: ಯಡಿಯೂರಪ್ಪ ನೇತೃತ್ವದಲ್ಲಿ 23:11 ಸೂತ್ರದಡಿ ಮಂತ್ರಿ ಮಂಡಲ ರಚಿಸುವಂತೆ ಸೂಚಿಸಲಾಗಿದೆ. ನೂತನ ಸಚಿವ ಸಂಪುಟದಲ್ಲಿ ಇಬ್ಬರನ್ನು ಉಪಮುಖ್ಯಮಂತ್ರಿಯಾಗಿ ನೇಮಕಮಾಡುವ ನಿರ್ಧಾರವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿರುವವರ ಭವಿಷ್ಯ ನಿರ್ಧಾರ ನೋಡಿಕೊಂಡು, 15 ಜನರ ಪೈಕಿ 11 ಮಂದಿಗೆ ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆ ಹೆಚ್ಚಿದೆ.
ಒಟ್ಟಾರೆ, 1 ಮುಖ್ಯಮಂತ್ರಿ, 2 ಉಪ ಮುಖ್ಯಮಂತ್ರಿ, 20 ಮಂದಿ ಬಿಜೆಪಿ ಸಚಿವರು ಪ್ಲಸ್ 11 ವಲಸಿಗರನ್ನು ಸೇರಿಸಿಕೊಂಡು 23:11 ರ ಸೂತ್ರದಡಿಯಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಕಂಡು ಬಂದಿದೆ. ಆದರೆ, ಈ ಸೂತ್ರದಲ್ಲಿ ಅಂತಿಮ ಕ್ಷಣದಲ್ಲಿ ಕೊಂಚ ಬದಲಾವಣೆಯಾಗಬಹುದು. ಮುಖ್ಯವಾಗಿ ಪ್ರದೇಶವಾರು, ಜಾತಿ ಲೆಕ್ಕಾಚಾರ, ಅನುಭವದ ಆಧಾರದ ಮೇಲೆ ಡಿಸಿಎಂಗಳ ಸಂಖ್ಯೆಯನ್ನು ಹೆಚ್ಚಿಸಲೂ ಬಹುದು. ಡಿಸಿಎಂ ಸ್ಥಾನಕ್ಕೆ ಕನಿಷ್ಠ 6 ಮಂದಿ ರೇಸಿನಲ್ಲಿದ್ದಾರೆ.
ಸಿಎಂ ಆಗುವ ಉತ್ಸಾಹದ ಬೆನ್ನಲ್ಲೇ ಮತ್ತೆ ಹೆಸರು ಬದಲಿಸಿಕೊಂಡ ಯಡಿಯೂರಪ್ಪ?
ಈ ಹಿಂದೆ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕರ್ನಾಟಕ ರಾಜ್ಯ, ಬಿಜೆಪಿ ಕಾಲದಲ್ಲೇ ಕಂಡಿದೆ. ಸದ್ಯಕ್ಕೆ ಬಿ ಶ್ರೀರಾಮುಲು, ಆರ್ ಅಶೋಕ, ಜಗದೀಶ್ ಶೆಟ್ಟರ್(ಸ್ಪೀಕರ್ ಸ್ಥಾನಕ್ಕೇರದಿದ್ದರೆ), ಅರವಿಂದ ಲಿಂಬಾವಳಿ/ ಗೋವಿಂದ ಕಾರಜೋಳ, ಕೆ.ಎಸ್ ಈಶ್ವರಪ್ಪ ಅವರು ಡಿಸಿಎಂ ಸ್ಥಾನಕ್ಕೆ ಅರ್ಹರಾಗಿದ್ದಾರೆ.