ಅಂತೂ ‘ಟಗರು ಪಲ್ಯ’ 7 ಸ್ಟಾರ್ ಸುಲ್ತಾನನ ಜೀವ ಉಳಿಸಿದ ಕನ್ನಡಿಗರು! ಹೇಗೆ ಗೊತ್ತಾ?
ನಟನಾಗಿ ಮಿಂಚಿದ್ದ ಡಾಲಿ ಧನಂಜಯ್ ಈಗ ಸಿನಿಮಾ ನಿರ್ಮಾಣ ಮೂಲಕವೂ ಕನ್ನಡ ಸಿನಿಪ್ರಿಯರ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ಅಡಿ ನಿರ್ಮಿಸುತ್ತಿರುವ, ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸುತ್ತಿರುವ 'ಟಗರು ಪಲ್ಯ' ಸಖತ್ ಸದ್ದು ಮಾಡುತ್ತಿದೆ. ಆದರೆ ಸಿನಿಮಾದಲ್ಲಿ ನಟಿಸಿದ್ದ ಟಗರನ್ನು ಈಗ ಬಕ್ರೀದ್ ಹಬ್ಬಕ್ಕೆ ಬಲಿ ನೀಡಲು ಅದರ ಮಾಲೀಕ ಮುಂದಾಗಿದ್ದರು!
ಹೌದು, ಉಮೇಶ್ ಕೃಪ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಟಗರು ಪಲ್ಯ' ಸಿನಿಮಾದಲ್ಲಿ ಟಗರು ಕಾಳಗದಲ್ಲಿ ಗೆದ್ದು ಬೀಗಿರುವ '7 ಸ್ಟಾರ್ ಸುಲ್ತಾನ' ಹೆಸರಿನ ಟಗರಿನ ಜೀವಕ್ಕೆ ಕಂಟಕ ಎದುರಾಗಿತ್ತು. ಬಕ್ರೀದ್ ಹಬ್ಬಕ್ಕೆ ಕುರುಬಾನಿ ಕೊಡಲು ಮಾಲೀಕ ತೀರ್ಮಾನ ನಡೆಸಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಯಾವ ಕಾರಣಕ್ಕೂ 7 ಸ್ಟಾರ್ ಸುಲ್ತಾನನ್ನು ಬಲಿ ಕೊಡಬಾರದು ಎಂಬ ದೊಡ್ಡ ಅಭಿಯಾನ ಶುರುವಾಗಿತ್ತು. ಇನ್ನು ಟಗರು ಪಲ್ಯ ಚಿತ್ರತಂಡ ಕೂಡ ಟಗರಿನ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿತ್ತು. ಈ ಬೇಡಿಕೆಗೆ, ಒತ್ತಾಯಕ್ಕೆ, ಆಗ್ರಹಕ್ಕೆ ಕೊನೆಗೂ ಗುಡ್ ರಿಸಲ್ಟ್ ಸಿಕ್ಕಿದೆ. ಟಗರಿನ ಜೀವ ಕೂಡ ಉಳಿದಿದೆ.

ಬಿರಿಯಾನಿ ಆಗಿಬಿಡುತ್ತಿದ್ದ '7 ಸ್ಟಾರ್ ಸುಲ್ತಾನ'!
ಅಂದಹಾಗೆ ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ ಮಾಲೀಕ ಯುನೀಸ್ ಗಡೇದ್ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲೆಂದೇ 7 ಸ್ಟಾರ್ ಸುಲ್ತಾನನ್ನ ಖರೀದಿಸಿದ್ದ. 2.5 ವರ್ಷದ ಹಿಂದೆ 7 ಸ್ಟಾರ್ ಸುಲ್ತಾನ್ ಟಗರನ್ನು 1 ಲಕ್ಷ 88 ಸಾವಿರ ರೂಪಾಯಿಗೆ ಖರೀದಿಸಿದ್ದರು. ಆದ್ರೆ ಕುರ್ಬಾನಿಗೂ ಮುನ್ನ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು ಟಗರು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿ ಸುಮಾರು 20 ಲಕ್ಷ ರೂ. ಬೆಲೆ ಬಾಳುವ ಹಣ, ಬೆಳ್ಳಿ, ಬಂಗಾರ, ಬೈಕ್ಗಳನ್ನ ಗೆದ್ದು ಬೀಗಿತ್ತು ಟಗರು. ಈ ಕಾರಣಕ್ಕೆ ಮಾಲೀಕ ಯುನೀಸ್ ಟಗರಿಗೆ '7 ಸ್ಟಾರ್ ಸುಲ್ತಾನ' ಎಂದು ಹೆಸರಿಟ್ಟರು. ಆದರೆ ಬಲಿಯಾಗಿ, ಇನ್ನೇನು ಬಿರಿಯಾನಿ ಆಗಬೇಕಿದ್ದ ಟಗರಿನ ಜೀವ ಅಭಿಮಾನಿಗಳಿಂದ ಉಳಿದಿದೆ.

ಕುರ್ಬಾನಿಗೆ ಫಿಕ್ಸ್ ಆಗಿತ್ತು ಮುಹೂರ್ತ
ಇನ್ನು ಮೊದಲೇ ಅಂದುಕೊಂಡಂತೆ ಈ ಬಾರಿ ಬಕ್ರೀದ್ ಹಬ್ಬಕ್ಕೆ ಟಗರನ್ನ ಕುರ್ಬಾನಿ ನೀಡಲು ನಿರ್ಧರಿಸಿದ್ದರು. ಆದರೆ ಹಲವು ಸಾಧನೆ ಮಾಡಿರುವ ಟಗರನ್ನು ಬಲಿ ಕೊಡಬೇಡಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದರು. ಹೀಗಾಗಿಯೇ ಅಭಿಮಾನಿಗಳ ಒತ್ತಾಸೆಗೆ ಮಣಿದು 7 ಸ್ಟಾರ್ ಸುಲ್ತಾನನ ಕುರ್ಬಾನಿ ಕೊಡದಿರಲು ಮಾಲೀಕರು ನಿರ್ಧರಿಸಿದ್ದಾರೆ. ಅಂತೂ ಅಭಿಮಾನಿಗಳು ಹಾಗೂ ಚಿತ್ರತಂಡದ ಮನವಿಗೆ ಪ್ರತಿಫಲ ಸಿಕ್ಕಿದ್ದು, 7 ಸ್ಟಾರ್ ಸುಲ್ತಾನ ಇನ್ನುಮುಂದೆಯು ಕೂಡ ಅಖಾಡಕ್ಕೆ ಎಂಟ್ರಿ ಕೊಟ್ಟು ಅಬ್ಬರಿಸೋದು ಬಹುತೇಕ ಪಕ್ಕಾ.
'ಟಗರು ಪಲ್ಯ' ರಿಲೀಸ್ಗೆ ಡೇಟ್ ಫಿಕ್ಸ್?
ಅಷ್ಟಕ್ಕೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಸಿನಿಮಾನ ನಿರ್ಮಿಸಲು ಡಾಲಿ ಧನಂಜಯ್ ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಡಾಲಿ ಪ್ರಾರಂಭಿಸಿರುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ 3ನೇ ಸಿನಿಮಾ 'ಟಗರು ಪಲ್ಯ' ಆಗಿದೆ. ಇನ್ನ ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಎಲ್ಲಾ ಕಾರಣಕ್ಕೆ 'ಟಗರು ಪಲ್ಯ' ಚಿತ್ರ ಸಾಕಷ್ಟು ಗಮನ ಸೆಳೆದಿದ್ದು, ಯಾವಾಗ ರಿಲೀಸ್ ಆಗುತ್ತೆ? ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು ಸಕ್ಕರೆ ನಾಡು ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗ ಇರುವ 'ಟಗರು ಪಲ್ಯ' ಸಿನಿಮಾಗೆ ಎಸ್.ಕೆ.ರಾವ್ ಕ್ಯಾಮೆರಾ ವರ್ಕ್ ಅದ್ಭುತವಾಗಿದೆ. ಸದ್ಯಕ್ಕೆ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಹೀಗಾಗಿ ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಕೂಡ ಫೈನಲ್ ಆಗುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗೇ 'ಟಗರು ಪಲ್ಯ' ಸಿನಿಮಾದ '7 ಸ್ಟಾರ್ ಸುಲ್ತಾನ'ನ ಜೀವ ಉಳಿದಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.












Click it and Unblock the Notifications