ಎಸ್ಐ ಜಗದೀಶ್ ಹಂತಕರ ಬಂಧನ : ನಾಗ್ಪುರ ಪೊಲೀಸರು ಹೇಳುವುದೇನು?
ಬೆಂಗಳೂರು, ಅಕ್ಟೋಬರ್ 20 : ದೊಡ್ಡಬಳ್ಳಾಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಗದೀಶ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಮಧು ಮತ್ತು ಹರೀಶ್ ಬಾಬು ಅವರನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ಇಬ್ಬರು ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತದೆ.
ಮಧು ಮತ್ತು ಹರೀಶ್ ಬಾಬು ಅವರನ್ನು ಹಿಡಿದ ಕಾರ್ಯಾಚರಣೆ ಬಗ್ಗೆ ನಾಗ್ಪುರ ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಪಿಎಸ್ಐ ಕೊಲೆ ಆರೋಪಿಗಳನ್ನು ಬಂಧಿಸಿರುವುದು ನಮಗೂ ಹೆಮ್ಮೆಯ ವಿಷಯ ಎಂದು ಪೊಲೀಸರು ಹೇಳಿದ್ದಾರೆ. [ನಾಗ್ಪುರದಲ್ಲಿ ಸಿಕ್ಕಿಬಿದ್ದ ಮಧು, ಹರೀಶ್ ಬಾಬು]

ಕಾರ್ಯಾಚರಣೆ ನಡೆದದ್ದು ಹೇಗೆ? : ಅಕ್ಟೋಬರ್ 19ರ ಸೋಮವಾರ ಮಧ್ಯಾಹ್ನ 2.45ಕ್ಕೆ ನಾಗ್ಪುರ ಡಿಸಿಪಿ ನಿರ್ಮಲಾ ದೇವಿ ಅವರಿಗೆ ಅವರ ಬ್ಯಾಚ್ಮೇಟ್ ಮತ್ತು ಬೆಂಗಳೂರು ಗ್ರಾಮಾಂತರ ಎಸ್ಪಿ ರಮೇಶ್ ದೂರವಾಣಿ ಕರೆ ಮಾಡಿದ್ದರು. [ಪೊಲೀಸರ ದುಗುಡ-ದುಮ್ಮಾನ ತೆರೆದಿಡುವ ಪೇದೆಯ ಪತ್ರ]
ಪಿಎಸ್ಐ ಜಗದೀಶ್ ಅವರ ಹತ್ಯೆಯ ಬಗ್ಗೆ ಮಾಹಿತಿ ನೀಡಿ ಆರೋಪಿಗಳಾದ ಹರೀಶ್ ಬಾಬು ಹಾಗೂ ಮಧುವಿನ ಕೃತ್ಯದ ಬಗ್ಗೆ ವಿವರಣೆ ನೀಡಿದ್ದರು. ತಕ್ಷಣ ನಿರ್ಮಲಾ ದೇವಿ ಅವರು ಕ್ರೈಂ ವಿಭಾಗದ ಡಿಸಿಪಿ ರಂಜನ್ ಕುಮಾರ್ ಶರ್ಮಾ ಅವರಿಗೆ ಈ ಕುರಿತು ಮಾಹಿತಿ ನೀಡಿದರು. [ಜಗದೀಶ್ ಹತ್ಯೆಯಾದದ್ದು ಹೇಗೆ?]
ನಂತರ ಅವರು ಕ್ರೈಂ ಬ್ರ್ಯಾಂಚ್ನ ಐದು ಪ್ರತ್ಯೇಕ ತನಿಖಾ ತಂಡಗಳನ್ನು ರಚನೆ ಮಾಡಿ ನಾಗ್ಪುರ ರೈಲು ನಿಲ್ದಾಣಕ್ಕೆ ಕಳಿಸಿದರು. ರೈಲ್ವೆ, ಭಯೋತ್ಪಾದಕ ನಿಗ್ರಹ ದಳ, ನಾಗ್ಪುರ ಪೊಲೀಸರು ಈ ತಂಡದಲ್ಲಿದ್ದರು. ರೈಲು ಬರುವ ಮೊದಲೇ ನಿಲ್ದಾಣ ತಲುಪಿದ್ದ ತಂಡ ಅಲ್ಲಿ ಆರೋಪಿಗಳನ್ನು ಬಂಧಿಸಿತು.
ನಂತರ ಆರೋಪಿಗಳನ್ನು ಕ್ರೈಂ ಬ್ರ್ಯಾಂಚ್ ಕಚೇರಿಗೆ ಕರೆ ತರಲಾಯಿತು. ಅಲ್ಲಿ ವಿಚಾರಣೆ ನಡೆಸಿದಾಗ ಇಬ್ಬರು ಆರೋಪಿಗಳು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ತಪ್ಪೊಪ್ಪಿಕೊಂಡರು. ಅಕ್ಟೋಬರ್ 20ರಂದು ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಯಿತು. ಕಾನೂನು ಪ್ರಕ್ರಿಯೆ ಬಳಿಕ ಆರೋಪಿಗಳನ್ನು ಕರ್ನಾಟಕ ಪೊಲೀಸರ ವಶಕ್ಕೆ ನೀಡಲಾಯಿತು.
ಆದರೆ, ಮಂಗಳವಾರ ಆರೋಪಿಗಳ ವಿಮಾನಯಾನಕ್ಕೆ ಅನುಮತಿ ದೊರೆಯದ ಕಾರಣ. ಕರ್ನಾಟಕ ಪೊಲೀಸರ ತಂಡ ನಾಗ್ಪುರದಲ್ಲೇ ಉಳಿಯಿತು. ಬುಧವಾರ ಸಂಜೆ ಆರೋಪಿಗಳನ್ನು ಪೊಲೀಸರು ಕರ್ನಾಟಕ್ಕೆ ಕರೆದುಕೊಂಡು ಹೋಗಲಿದ್ದಾರೆ.
ಕರ್ನಾಟಕ ಸರ್ಕಾರ ಆರೋಪಿಗಳ ಬಂಧನದಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರ ಹಾಗೂ ಕರ್ನಾಟಕ ಪೊಲೀಸರ ತಂಡಕ್ಕೆ 5 ಲಕ್ಷ ರೂ.ಗಳ ಬಹುಮಾನ ಘೋಷಿಸಿದೆ. ಪಿಎಸ್ಐ ಕೊಲೆ ಆರೋಪಿಗಳನ್ನು ಬಂಧಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ನಾಗ್ಪುರ ಪೊಲೀಸರು ಹೇಳಿದ್ದಾರೆ.











Click it and Unblock the Notifications