ಲೋಕಾಯುಕ್ತದಲ್ಲಿ ಎಸಿಬಿ ವಿಲೀನ: ಎಷ್ಟು ಶಾಸಕರ ವಿರುದ್ಧ ಎಸಿಬಿ ಕೇಸು ದಾಖಲಿಸಿತ್ತು ?
ಸಾಕಷ್ಟು ದೂರುಗಳು ಇದ್ದರೂ ಸಹ ಸರ್ಕಾರದ ಅಧೀನದಲ್ಲಿರುವ ಎಸಿಬಿ ಒಂದು ಪ್ರಕರಣವೂ ದಾಖಲಿಸದೇ ಸರ್ಕಾರದ ಮರ್ಜಿನಲ್ಲಿ ಕೆಲಸ ಮಾಡಿತ್ತು. ಎಸಿಬಿ ರದ್ದು ಪಡಿಸಿ ಲೋಕಾಯುಕ್ತಕ್ಕೆ ವಿಲೀನಗೊಳಿಸಿ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪಿನಿಂದಾಗಿ ಮತ್ತೆ ಲೋಕಾಯುಕ್ತ ಸಂಸ್ಥೆಗೆ ಆನೆ ಬಲ ಬಂದಂತಾಗಿದೆ.
ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತ ಸಂಸ್ಥೆಯೊಳಗೆ ವಿಲೀನ ಮಾಡುವಂತೆ ಹೈಕೋರ್ಟ್ ನೀಡಿರುವ ತೀರ್ಪು ಮಹತ್ವ ಮೂರು ಪಕ್ಷಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ ಜನ ಪ್ರತಿನಿಧಿಗಳ ಭ್ರಷ್ಟಾಚಾರದಿಂದ ರೋಸಿ ಹೋಗಿರುವ ಸರ್ಕಾರಿ ಅಧಿಕಾರಿಗಳಲ್ಲಿ ಸಂತಸ ಮನೆ ಮಾಡಿದೆ. ಇನ್ನು ಮೇಲಾದರೂ ಜನ ಪ್ರತಿನಿಧಿಗಳ ರೋದನೆಯಿಂದ ಮುಕ್ತಿ ಸಿಗಲಿದೆ ಎಂಬ ಸಂತಸದಲ್ಲಿ ತೇಲಾಡುತ್ತಿದ್ದಾರೆ.
ಲೋಕಾಯುಕ್ತ ಸಂಸ್ಥೆಯಲ್ಲಿ ಬೆಳಕಿಗೆ ಬಂದ ಭ್ರಷ್ಟಾಚಾರ ಪ್ರಕರಣ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಯ ಭಾಗವಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಬೇರ್ಪಡಿಸಿದ್ದರು. ಸರ್ಕಾರದ ಗೃಹ ಇಲಾಖೆಯ ಅಧೀನಕ್ಕೆ ಒಳಪಡುವ ಪ್ರತ್ಯೇಕ ಎಸಿಬಿ ರಚನೆ ಮಾಡಿದ್ದರು. 2016 ರಲ್ಲಿ ಎಸಿಬಿ ರಚನೆ ಮಾಡಿ ಅಧಿಸೂಚನೆ ಹೊರಡಿಸಲಾಗಿತ್ತು. ದೇಶಕ್ಕೆ ಮಾದರಿಯಾಗಿದ್ದ ಲೋಕಾಯುಕ್ತ ಸಂಸ್ಥೆಗೆ ಶಕ್ತಿ ನೀಡುವ ಬದಲಿಗೆ ಹಲ್ಲು ಕಿತ್ತ ಹಾವಿನಂತೆ ಮಾಡುಲಾಗಿತ್ತು.

ಒಂದು ಹೈ ಪ್ರೊಫೈಲ್ ಕೇಸು ಮಾಡಲಿಲ್ಲ: ಎಸಿಬಿ ರಚನೆಯಾಗಿದ್ದು ಬಿಟ್ಟರೆ ಮಹತ್ವದ ಒಂದು ಕೇಸು ದಾಖಲಿಸಲಿಲ್ಲ. ಶಾಸಕರು, ಸಚಿವರ ಮೇಲೆ ದೂರುಗಳು ಬಂದರೂ ಅವು ಯಾವುವೂ ತನಿಖೆ ಸ್ವರೂಪ ಪಡೆದುಕೊಳ್ಳಲಿಲ್ಲ. ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಸುಮಾರು 11 ಕ್ಕೂ ಹೆಚ್ಚು ಶಾಸಕ, ಸಚಿವರ ಮೇಲೆ ದೂರುಗಳು ಬಂದಿವೆ.
ಅವುಗಳಲ್ಲಿ ಬಹುತೇಕ ದೂರುಗಳಿಗೆ ಸಂಬಂಧಿಸಿದಂತೆ ಸರ್ಕಾರ ಪೂರ್ವಾನುಮತಿ ಸಹ ನೀಡಿಲ್ಲ. ಇನ್ನೂ ಆ ದೂರುಗಳ ಮಾಹಿತಿ ಆಧರಿಸಿ ಎಸಿಬಿ ಅಧಿಕಾರಿಗಳು ಕೇಸು ದಾಖಲಿಸಿದ ಒಂದೇ ಒಂದು ಉದಾಹರಣೆ ಕೂಡ ಇಲ್ಲ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಪ್ರಕರಣ ಹೊರತು ಪಡಿಸಿದರೆ ಒಂದೇ ಒಂದು ಹೈ ಪ್ರೊಫೈಲ್ ಭ್ರಷ್ಟಾಚಾರ ಕೇಸು ಸಹ ಎಸಿಬಿ ದಾಖಲಿಸಿಲ್ಲ. ಕಳೆದ ಆರು ವರ್ಷಗಳ ಕಾಲ ಎಸಿಬಿ ಕೇವಲ ಬಿಡಿಗಾಸಿನ ಭ್ರಷ್ಟರಿಗೆ ಬಲೆ ಬೀಸಿ ಕೇಸುಗಳನ್ನು ದಾಖಲಿಸಿತ್ತು. ಎಸಿಬಿಯ ಕಾರ್ಯಾ ಶೈಲಿ ಜನರಲ್ಲಿ ಬೇಸರ ಮೂಡಿಸಿತ್ತು.

ಲೋಕ ಬಲೆಗೆ ಬಿದ್ದ ಸರಣಿ ರಾಜಕರಣಿಗಳು: ಕೆಜಿಎಫ್ ಶಾಸಕ ವೈ. ಸಂಪಂಗಿಯನ್ನು ಶಾಸಕರ ಭವನದಲ್ಲಿಯೇ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಆ ಬಳಿಕ ಕೆಐಎಡಿಬಿ ಭೂ ಅಕ್ರಮದಲ್ಲಿ ಬೃಹತ್ ಕೈಗಾರಿಕೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಹೀಗೆ ಮೊದಲಗೊಂಡ ಲೋಕಾಯುಕ್ತ ಪೊಲೀಸರ ರಣ ಬೇಟೆ ಕರ್ನಾಟಕದ ಸಿಎಂ ಅವರನ್ನೇ ಬಿಟ್ಟಿರಲಿಲ್ಲ.
ಭೂ ಅಕ್ರಮದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಅವರನ್ನೇ ಬಂಧಿಸಲಾಗಿತ್ತು. ಗಣಿ ಅಕ್ರಮ ಕುರಿತ ಲೋಕಾಯುಕ್ತ ತನಿಖಾ ವರದಿ ರೆಡ್ಡಿ ಪಟಾಲಂಗೆ ಬುದ್ಧಿ ಕಲಿಸಿತ್ತು. ಸಿಬಿಐ ತನಿಖೆಗೆ ಲೋಕಾಯುಕ್ತ ವರದಿಯೇ ಮೂಲಾಧಾರವಾಗಿತ್ತು.
ಆರ್. ಅಶೋಕ್, ಡಿ. ಕೆ. ಶಿವಕುಮಾರ್, ಎಚ್. ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಬಾಬುರಾವ್ ಚುಂಚನಸೂರ್, ಎಸ್. ಆರ್. ವಿಶ್ವನಾಥ್, ಸೇರಿದಂತೆ ರಾಜ್ಯದ ಪ್ರಭಾವಿ ರಾಜಕಾರಣಿಗಳ ಅಕ್ರಮಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಇಡೀ ದೇಶಕ್ಕೆ ಮಾದರಿ ಲೋಕಾಯುಕ್ತ ಎಂಬ ಖ್ಯಾತಿಗೆ ಪಾತ್ರವಾಗಿತ್ತು.
ಲೋಕಾಯುಕ್ತ ಒಂದು ಅಕ್ರಮ ನೆಪದಿಂದ ಎಸಿಬಿ ರಚನೆ: ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ಮತ್ತು ಲೋಕಾಯುಕ್ತ ಸಿಬ್ಬಂದಿ ಶಾಮೀಲಾಗಿ ಲೋಕಾಯುಕ್ತ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡಿದ್ದರು. ಈ ಪ್ರಕರಣವನ್ನು ಸಹ ಲೋಕಾಯುಕ್ತ ಪೊಲೀಸರೇ ಬಯಲಿಗೆ ಎಳೆದಿದ್ದು ವಿಪರ್ಯಾಸ.
ಈ ಪ್ರಕರಣವನ್ನೇ ಮುಂದಿಟ್ಟುಕೊಂಡು 2016 ರಲ್ಲಿ ಲೋಕಾಯುಕ್ತ ಸಂಸ್ಥೆಯ ಭಾಗವಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದು ಪಡಿಸಿ ಪ್ರತ್ಯೇಕ ಎಸಿಬಿ ರಚನೆ ಮಾಡಿದ್ದರು. ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ, ಸರ್ಕಾರಕ್ಕೆ ವರದಿ ಒಪ್ಪಿಸುವ ಭ್ರಷ್ಟಾಚಾರ ನಿಗ್ರಹ ದಳ ಅಂದಿನಿಂದ ಮಾಡಿದ ಸಾಧನೆ ನೋಡಿದರೆ ಅಷ್ಟಕಷ್ಟೇ.
ರಾಜಕಾರಣಿಗಳನ್ನು ಪ್ರಶ್ನೆ ಮಾಡದಂತಾಯಿತು. ಜನ ಪ್ರತಿನಿಧಿಗಳ ಭ್ರಷ್ಟಾಚಾರ ದಾಹಕ್ಕೆ ಅಧಿಕಾರಿಗಳೇ ಬೇಸತ್ತು ಹೋಗಿದ್ದರು. ಇದೀಗ ಹೈಕೋರ್ಟ್ ನೀಡಿರುವ ತೀರ್ಪಿನಿಂದ ಹೊಸ ಭರವಸೆ ಮೂಡಿದೆ. ಮತ್ತೆ ಲೋಕಾಯುಕ್ತ ಸಂಸ್ಥೆಗೆ ಜೀವ ಬಂದಂತಾಗಿದೆ. ಆದ್ರೆ, ಎಸಿಬಿಯನ್ನು ರದ್ದು ಪಡಿಸಿ ಲೋಕಾಯುಕ್ತ ಸಂಸ್ಥೆಯಲ್ಲಿ ವಿಲೀನಗೊಳಿಸಿದಲ್ಲಿ ಮಾತ್ರ ಸಾಧ್ಯವಾಗಲಿದೆ.
ಒಂದು ವೇಳೆ ಸರ್ಕಾರ ಮೇಲ್ಮನವಿ ಸಲ್ಲಿಸಿ, ಸುಪ್ರೀಂಕೋರ್ಟ್ನಲ್ಲಿ ತೀರ್ಪು ವ್ಯತಿರಿಕ್ತ ಬಂದರೆ, ಎಸಿಬಿ ರದ್ದಾಗುವುದು ಅನುಮಾನ. ಬಸವರಾಜ ಬೊಮ್ಮಾಯಿ ಸರ್ಕಾರ ಈ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಪಾಲಿಸಿ ಬದ್ಧತೆ ತೋರಿದಲ್ಲಿ ಮಾತ್ರ ಸಾಧ್ಯವಾಗಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಸರು ಕೂಡ ಲೋಕಾಯುಕ್ತ ಇತಿಹಾಸದಲ್ಲಿ ಸೇರ್ಪಡೆಯಾಗಲಿದೆ. ರಾಜಕೀಯ ಶಕ್ತಿಗಳಿಗೆ ಮಣಿದು ಸುಪ್ರೀಂಕೋರ್ಟ್ ಮೊರೆ ಹೋದರೆ ಬಿಜೆಪಿ ಸರ್ಕಾರ ನಗೆಪಾಟಲಿಗೆ ಒಳಗಾಗುವುದಲ್ಲಿ ಅನುಮಾನವೇ ಇಲ್ಲ!












Click it and Unblock the Notifications