ಬೆಡ್ ಬ್ಲಾಕಿಂಗ್; ಅರ್ಹರಿಗೆ ಬೆಡ್ ಕೊಡದಿರುವುದು ಅಪಚಾರ ಎಂದ ಗೃಹ ಸಚಿವ
ಬೆಂಗಳೂರು, ಮೇ 5: ಬೆಂಗಳೂರು ನಗರದಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಬಹಿರಂಗಪಡಿಸಿದ್ದು, ಹೋಂ ಐಸೋಲೇಷನ್ನಲ್ಲಿರುವ ವ್ಯಕ್ತಿಗಳ ಹೆಸರಿನಲ್ಲಿ ಬೆಡ್ ಬುಕ್ ಆಗಿರುವ ಕುರಿತು ಪ್ರಶ್ನೆಗಳನ್ನು ಮಾಡಿದ್ದರು.
Recommended Video
ಈ ಕುರಿತು ಸಿಸಿಬಿ ತನಿಖೆ ಕೈಗೊಂಡಿದ್ದು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
"ಕರ್ನಾಟಕದಲ್ಲಿ ಕೊರೊನಾ ರೋಗಿಗೆ ನೀಡುವ ಹಾಸಿಗೆಯಲ್ಲೂ ಹಗರಣ"
"ಮಂಗಳವಾರ ನಮ್ಮ ಸಂಸದ, ಶಾಸಕರು ಬೆಡ್ ಮೀಸಲು ವಿಚಾರದಲ್ಲಿ ಆಗಿರುವ ಲೋಪ, ಅವ್ಯವಹಾರಗಳ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ. ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಸಿಸಿಬಿ ಸುಮೋಟೊ ಕೇಸ್ ಹಾಕುತ್ತಿದೆ. ಇದು ಒಂದೇ ವಲಯದಲ್ಲಿ ಅಲ್ಲ, ಎಲ್ಲಾ ವಲಯದಲ್ಲಿ ಆಗಿರಬಹುದು. ನಮ್ಮ ತನಿಖೆ ಅವಧಿಯನ್ನು ಎಲ್ಲಾ ವಲಯಕ್ಕೆ ವಿಸ್ತರಣೆ ಮಾಡುತ್ತೇವೆ. ಹಲವಾರು ಜನರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತೇವೆ. ಇನ್ನೂ ಹೆಚ್ಚು ಜನರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ" ಎಂದು ತಿಳಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಅರ್ಹರಿಗೆ ಬೆಡ್ ಕೊಡದೆ ಅಪಚಾರ ಮಾಡಿದ್ದಾರೆ. ಇಂಥ ದಂಧೆಯಲ್ಲಿ ಯಾರು ತೊಡಗಿಕೊಂಡಿದ್ದಾರೋ ಅವರೆಲ್ಲರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ಬೆಡ್ ಬುಕಿಂಗ್ ಮಾಡುತ್ತಿದ್ದ ಮಾಫಿಯಾವನ್ನು ಸ್ವತಃ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ಮಂಗಳವಾರ ಬಯಲಿಗೆಳೆದಿದ್ದರು. ಬಿಬಿಎಂಪಿ ಬೆಡ್ ಗಳು ಅಕ್ರಮವಾಗಿ ಬುಕ್ ಆಗುತ್ತಿರುವುದನ್ನು ಬಹಿರಂಗಪಡಿಸಿದ್ದರು.