ಹಿಜಾಬ್ ಬಗ್ಗೆ ಜಮೀರ್ ಅಹ್ಮದ್ ಹೇಳಿಕೆ ಖಂಡಿಸಿದ ಆರಗ ಜ್ಞಾನೇಂದ್ರ
ಬೆಂಗಳೂರು, ಫೆಬ್ರವರಿ 14: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ತಿಳಿಸಿದರು.
ಇದೇ ವೇಳೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ನಿನ್ನೆ ಹುಬ್ಬಳ್ಳಿಯಲ್ಲಿ ಹಿಜಾಬ್ ಏಕೆ ಧರಿಸಬೇಕು ಎಂಬುದರ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ''ಅವರದು ಕೆಟ್ಟ ಹೇಳಿಕೆ, ಹಿಜಾಬ್ ಹಾಕಿದರೆ ಮಾತ್ರ ರೇಪ್ ಆಗೋದಿಲ್ಲವೇ, ಬೇರೆ ಬಟ್ಟೆ ಧರಿಸಿದರೆ ರೇಪ್ ಆಗುತ್ತಾ? ಬ್ಯೂಟಿ ಹೇಗೆ ಕಾಣಬಾರದು ಎಂದು ಹೇಗೆ ಹೇಳುತ್ತಾರೆ,'' ಎಂದು ಪ್ರಶ್ನೆಗಳ ಸುರಿಮಳೆಗೈದರು.
ಹಿಜಾಬ್ ಧರಿಸದಿದ್ದರೆ ಅತ್ಯಾಚಾರ ಎದುರಿಸಬೇಕಾಗುತ್ತೆ: ಜಮೀರ್ ಅಹ್ಮದ್ ಖಾನ್
ಜಮೀರ್ ಮನಸಿಗೆ ಬಂದ ಹಾಗೆ ಮಾತನಾಡುತ್ತಾರೆ ವಿಶಾಲವಾಗಿ ಯೋಚಿಸಿ ಮಾತನಾಡಬೇಕು. ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಎಲ್ಲರ ಗಮನದಲ್ಲಿದೆ. ಕೋವಿಡ್ನಿಂದಾಗಿ ಸರಿಯಾಗಿ ಶಾಲಾಕಾಲೇಜುಗಳು ನಡೆದಿಲ್ಲ. ಶೇ.80ರಷ್ಟು ಪಠ್ಯಗಳು ಮುಗಿದಿಲ್ಲ.
ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರದವರೆಗೆ ಕಾಲೇಜಿಗೆ ರಜೆ ನೀಡಲಾಗಿದೆ. ಮುಖ್ಯಮಂತ್ರಿಯವರು ಸಭೆ ನಡೆಸಿ ಕಾಲೇಜುಗಳನ್ನು ಮರು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.
ಈ ವಿಚಾರದಲ್ಲಿ ತುಂಬ ವಿಳಂಬ ಮಾಡುವುದಿಲ್ಲ. ಇಂದಿನಿಂದ ಪ್ರೌಢಶಾಲೆಗಳು ಆರಂಭವಾಗಿದ್ದು, ಶಾಲೆಗಳ ಬಳಿ ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲಾ ಆಡಳಿತ ಮಂಡಳಿಗಳು ತೆಗೆದುಕೊಳ್ಳುವ ಕ್ರಮಗಳಿಗೆ ಪೊಲೀಸರು ಬೆಂಬಲವಾಗಿ ಇರುತ್ತಾರೆ. ಮಕ್ಕಳ ಪೋಷಕರು ಭಯಪಡುವುದು ಬೇಡ, ನಿನ್ನೆ ಉಡುಪಿಯಲ್ಲಿ ಶಾಂತಿ ಸಭೆ ನಡೆಸಿರುವುದು ಸಂತಸ ತಂದಿದೆ. ಆಸಭೆಯಲ್ಲಿ ಕೋರ್ಟ್ ಆದೇಶ ಪಾಲನೆ ಮಾಡುವುದಾಗಿ ಹೇಳಿದ್ದಾರೆ. ಇದೇ ರೀತಿ ಎಲ್ಲ ಕಡೆಯೂ ಕೋರ್ಟ್ ಆದೇಶ ಪಾಲನೆ ಮಾಡಿ ಸಾಮರಸ್ಯದಿಂದ ಎಲ್ಲರೂ ಬದುಕಬೇಕು ಎಂದರು.
ಹಿಜಾಬ್ ವಿವಾದ: ಮಕ್ಕಳಿಗೆ ಬುದ್ಧಿ ಹೇಳುವಂತೆ ಪೋಷಕರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ
''ಹಿಜಾಬ್ ಎಂದರೆ ಘೋಶಾ, ಪರ್ದಾ ಎಂಬ ಅರ್ಥ ಬರುತ್ತದೆ. ವಯಸ್ಸಿಗೆ ಬಂದ ಹುಡುಗಿಯರನ್ನು ಕೆಟ್ಟ ಕಣ್ಣುಗಳಿಂದ ರಕ್ಷಿಸಲು ಹಿಜಾಬ್, ಬುರ್ಕಾ ಅಗತ್ಯ, ಹಿಜಾಬ್ ಧರಿಸದಿದ್ದರೆ ರೇಪ್ ಹೆಚ್ಚಾಗುತ್ತದೆ, ಹಿಂದೂಸ್ತಾನದಲ್ಲೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳಿವೆ ಎಂಬ ವರದಿ ಬಂದಿರುವುದು ನಿಮಗೂ ಗೊತ್ತಿರಬಹುದು..'' ಎಂದು ಜಮೀರ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕದ ಹಿಜಾಬ್ ಕೇಸ್: ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ವಿಚಾರವನ್ನು ನಿರ್ಧರಿಸುವವರೆಗೆ ಹಿಜಾಬ್, ಕೇಸರಿ ಶಾಲು ಅಥವಾ ಬೇರಾವುದೇ ಧಾರ್ಮಿಕ ಬಾವುಟಗಳನ್ನು ಇಟ್ಟುಕೊಂಡು ಕಾಲೇಜಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಆದೇಶಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಮಾಡಿದೆ. ಪ್ರಕರಣದ ವಿಚಾರಣೆ ತ್ರಿಸದಸ್ಯ ಪೀಠದಲ್ಲಿ ಜಾರಿಯಲ್ಲಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಅವರಿದ್ದ ತ್ರಿಸದಸ್ಯಪೀಠ, ಸೋಮವಾರ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಾರೆ.
"ನಮ್ಮದು ಹಲವು ಸಂಸ್ಕೃತಿಗಳನ್ನು ಒಳಗೊಂಡ ಬಹುಸಂಸ್ಕೃತಿಯ ನಾಡು ಎಂದು ವಿವರಿಸುವ ಅಗತ್ಯವಿಲ್ಲ. ಜಾತ್ಯತೀತವಾದ ನಮ್ಮ ರಾಷ್ಟ್ರವು ಯಾವುದೇ ಒಂದು ನಿರ್ದಿಷ್ಟ ಧರ್ಮದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬ ಪ್ರಜೆಯು ತಮ್ಮ ಇಚ್ಛೆಯ ನಂಬಿಕೆ ಪಾಲಿಸುವ ಹಕ್ಕು ಹೊಂದಿದ್ದಾರೆ ಎಂಬುದು ಸತ್ಯ. ಅದಾಗ್ಯೂ, ಅದು ಪರಿಪೂರ್ಣವಾಗಿಲ್ಲ. ನಿರ್ದಿಷ್ಟ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಸಂವಿಧಾನದಲ್ಲಿ ಹೇಳಲಾಗಿದೆ" ಎಂದು ಪೀಠವು ವಿವರಿಸಿದೆ.
Recommended Video
ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಿ: "ತಡೆಯಿರದ ಪ್ರತಿಭಟನೆಗಳಿಂದ ಶಾಲಾ-ಕಾಲೇಜುಗಳು ಬಂದ್ ಆಗಬಾರದು. ಶಿಕ್ಷಣ ಸಂಸ್ಥೆಗಳು ಅನಿರ್ದಿಷ್ಟ ಕಾಲ ಬಂದ್ ಆಗುವುದು ಸಂತೋಷದ ವಿಷಯಲ್ಲ. ಈ ಪ್ರಕರಣದ ವಿಚಾರಣೆಯನ್ನು ತುರ್ತು ಆಧಾರದ ಮೇಲೆ ನಡೆಸಲಾಗುವುದು, ಶೈಕ್ಷಣಿಕ ವರ್ಷವನ್ನು ವಿಳಂಬಿಸುವುದರಿಂದ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾಗುತ್ತದೆ. ಪ್ರಸಕ್ತ ಶೈಕ್ಷ ಕ್ಷಣಿಕ ವರ್ಷ ಇನ್ನೇನು ಅಂತ್ಯವಾಗುತ್ತಿದೆ. ಸಂಬಂಧಪಟ್ಟವರೆಲ್ಲಾ ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕು. ಹೀಗಾಗಿ ಶಿಕ್ಷಣ ಸಂಸ್ಥೆ ತೆರೆದು ವಿದ್ಯಾರ್ಥಿಗಳು ಮರಳಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ'' ಎಂದು ನ್ಯಾಯಪೀಠ ಹೇಳಿದೆ.