ಹಿಜಾಬ್ ವಿವಾದ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ವಸ್ತ್ರ ಸಂಹಿತೆ ಜಾರಿ- ಸರ್ಕಾರದ ಸಮರ್ಥನೆ
ಬೆಂಗಳೂರು.ಫೆ.18; ಶಿಕ್ಷಣ ಕಾಯ್ದೆ ಅನ್ವಯ ಸರ್ಕಾರದ ಹಿತದೃಷ್ಟಿಯಿಂದಲೇ ವಸ್ತ್ರ ಸಂಹಿತೆ ತರಲಾಗಿದೆ. ಇದರಿಂದ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗದು, ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣಲಿದೆ. ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಬಯಕೆ ಇಲ್ಲ, ಹಾಗಾಗಿ ಸ್ಥಳೀಯ ಸಿಡಿಸಿಗಳಿಗೆ ವಸ್ತ್ರ ಸಂಹಿತೆ ನಿಗದಿ ಅಧಿಕಾರ ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೈಕೋರ್ಟ್ ನಲ್ಲಿ ಬಲವಾಗಿ ಸಮರ್ಥಿಸಿಕೊಂಡರು.
ಹಿಜಾಬ್ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನು ಒಳಗೊಂಡ ಪೂರ್ಣಪೀಠ ಶುಕ್ರವಾರ ವಿಚಾರಣೆ ನಡೆಸಿತು. ಸುಮಾರು 2 ಗಂಟೆ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಸೋಮವಾರ(ಫೆ.21) ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಹೈಕೋರ್ಟ್ ಆದೇಶ ತಪ್ಪಾಗಿ ಅರ್ಥ:
ವಿಚಾರಣೆ ಕೊನೆಯಲ್ಲಿ ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್, ಹೈಕೋರ್ಟ್ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಒಬ್ಬರು ಒಂದೊಂದು ರೀತಿ ಅದನ್ನು ಜಾರಿಗೊಳಿಸುತ್ತಿರುವುದು ಸಮಾಜದಲ್ಲಿ ಕ್ಷೋಭೆ ಉಂಟಾಗುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಉರ್ದು ಶಾಲೆಗಳಲ್ಲೂ ತೊಂದರೆ ಆಗುತ್ತಿದೆ ಎಂದರು.

ಆಗ ಸಿಜೆ, ನಿರ್ದಿಷ್ಟ ಪ್ರಕರಣಗಳಿದ್ದರೆ ತಿಳಿಸಿ, ಪ್ರಮಾಣಪತ್ರ ಸಲ್ಲಿಸಿ ಆ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗುವುದು ಎಂದರು.
ಎಜಿ, ನ್ಯಾಯಾಲಯದ ಮಧ್ಯಂತರ ಆದೇಶವನ್ನು ಸರ್ಕಾರ ಯಥಾವತ್ತಾಗಿ ಪಾಲಿಸುತ್ತಿದೆ. ಆದೇಶ ಹೊರಗೆ ಯಾರೊಬ್ಬರೂ ಕಾರ್ಯನಿರ್ವಹಿಸುತ್ತಿಲ್ಲ. ಮತ್ತೊಮ್ಮೆ ಸರ್ಕಾರದ ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶ ಚಾಚೂತಪ್ಪದೆ ಪಾಲನೆಗೆ ಸೂಚಿಸಲಾಗುವುದೆಂದರು.
ಶಿಸ್ತು ಸಮಾನತೆಗಾಗಿ ವಸ್ತ್ರ ಸಂಹಿತೆ:
ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಎರಡು ಗಂಟೆ ವಾದ ಮಂಡಿಸಿ ಫೆ.5, 2022ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಬಲವಾಗಿ ಸಮರ್ಥಿಸಿಕೊಂಡರು.
ಉಡುಪಿಯ ಕಾಲೇಜಿನಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಯಿತು ಎಂದು ವಿವರಿಸಿದ ಅವರು, ಕಾಲೇಜಿನಲ್ಲಿ ಶಿಸ್ತು, ಸಮಾನತೆ ಇರಲೆಂದು ಸಮವಸ್ತ್ರ ಸಂಹಿತೆ ಮಾಡಲಾಗಿದೆ. ಶಾಲಾ ಅಭಿವೃದ್ದಿ ಸಮಿತಿ ನಡಾವಳಿಯಲ್ಲಿ ಇದು ಉಲ್ಲೇಖವಾಗಿದೆ. 1985 ರಿಂದಲೂ ಸಮವಸ್ತ್ರ ಸಂಹಿತೆ ಪಾಲಿಸುತ್ತಿರುವ ಹಿನ್ನೆಲೆ, ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಮಾತ್ರ ಧರಿಸುವಂತೆ ಸೂಚಿಸಲಾಯಿತು. ಇದಕ್ಕೆ ವಿದ್ಯಾರ್ಥಿನಿಯರು, ಅವರ ಪೋಷಕರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಬೇಕಾಯಿತು ಎಂದರು.
ಸಮವಸ್ತ್ರದ ಬಗ್ಗೆ ಅಂತಿಮ ನಿರ್ಧಾರವಿಲ್ಲ:
ಹಾಲಿ ಇರುವ ಸಮವಸ್ತ್ರ ಸಂಹಿತೆ ಬಗ್ಗೆ ಪರಾಮರ್ಶೆಗೆ ಸಮಿತಿ. ಉನ್ನತ ಮಟ್ಟದ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿತು. ಆ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಹಾಗಾಗಿ ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿತ್ತು, ಆದರೆ ಉಡುಪಿ ಘಟನೆ ಹಿನ್ನೆಲೆಯಲ್ಲಿ ಕಾಲೇಜು ಅಭಿವೃದ್ದಿ ಸಮಿತಿಗಳಿಗೆ ಸಮವಸ್ತ್ರ ನಿಗದಿ ಹೊಣೆ ಹೊರಿಸಲಾಯಿತು ಎಂದು ಎಜಿ ಹೇಳಿದರು.
ಸರ್ಕಾರದ ಆದೇಶ ನಿಯಮ ಬದ್ಧವಾಗಿಯೇ ಇದೆ ಎಂದ ಎಜಿ, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಪದ್ಧತಿಯಲ್ಲ. ಆ ಬಗ್ಗೆ ಸೋಮವಾರ ವಿವರವಾದ ವಾದ ಮಂಡನೆ ಮಾಡಲಾಗುವುದು ಎಂದು ತಿಳಿಸಿದರು.
ಯೂಟ್ಯೂಬ್ ಲೈವ್ ನಿಲ್ಲಿಸಲು ಮನವಿ ತಿರಸ್ಕಾರ;
ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸಿಜೆ, ಹೊಸದಾಗಿ ಇನ್ನೂ ಮೂರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಹೊಸ ಅರ್ಜಿಗಳಲ್ಲಿ ವಕೀಲರಿಗೆ 10 ನಿಮಿಷವಷ್ಟೇ ಸಮಯ ನೀಡಲಾಗುವುದು, ಅಷ್ಟರಲ್ಲಿ ವಾದ ಪೂರ್ಣಗೊಳಿಸಬೇಕೆಂದು ಹೇಳಿದರು.
ಅರ್ಜಿದಾರರ ಹಿರಿಯ ವಕೀಲ ರವಿವರ್ಮಕುಮಾರ್, ದುಪಟ್ಟಾವನ್ನು ಹಿಜಾಬ್ ನಂತರ ಬಳಸಲು ಅನುಮತಿ ಕೋರಿಕೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ವಿಚಾರಣೆ ನಡೆಸಲು ಮನವಿ ಮಾಡಿದರು. ಅದಕ್ಕೆ ಎಜಿ ಪ್ರಭುಲಿಂಗ ನಾವದಗಿ, ಇಂದೇ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು, ಆನಂತರ ವಿಚಾರಣೆ ನಡೆಸಬಹುದು ಎಂದರು.
ಆಗ ರವಿವರ್ಮ ಕುಮಾರ್, ಪ್ರಕರಣದ ವಿಚಾರಣೆಯನ್ನು ಯೂಟ್ಯೂಬ್ ಲೈವ್ ಮಾಡಲಾಗುತ್ತಿದೆ. ಇದು ರಾಜ್ಯಾದ್ಯಂತ ತೀವ್ರ ಪರಿಣಾಮಗಳನ್ನು ಉಂಟು ಮಾಡುತ್ತಿದೆ, ಹಾಗಾಗಿ ತಾತ್ಕಾಲಿಕವಾಗಿ ಲೈವ್ ನಿಲ್ಲಿಸಬೇಕು ಎಂದು ಕೋರಿದರು.
ಆದರೆ ಎಜಿ ಕೂಡ ಆಕ್ಷೇಪ ಎತ್ತಿದರು. ಸಿಜೆ "ಈಗಾಗಲೇ ಅರ್ಜಿದಾರರ ವಾದ ಲೈವ್ ಆಗಿದೆ, ಸರ್ಕಾರದ ವಾದವನ್ನೂ ಜನರು ಕೇಳಲಿ ಬಿಡಿ, ಅದರಲ್ಲೇನಿದೆ'' ಎಂದು ಮನವಿಯನ್ನು ತಿರಸ್ಕರಿಸಿತು.












Click it and Unblock the Notifications