ಕೆಎಸ್ಆರ್ಟಿಸಿ ನೌಕರರಿಗೆ ಸಿಹಿಸುದ್ದಿ ನೀಡಿದ ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 5 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ನೌಕರರಿಗೆ ಅಧಿಕ ಅವಧಿ ಭತ್ಯೆ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಅಧಿಕ ಅವಧಿ ಭತ್ಯೆ (Overtime Allowance) ನೀಡಬೇಕು ಎಂದು ಆದೇಶಿಸಿದೆ.
ಅಧಿಕ ಅವಧಿ ಭತ್ಯೆಯನ್ನು ನೀಡದೆ ಕೆಲಸ ಮಾಡಿಸಿಕೊಳ್ಳುವುದು ಕಾನೂನು ಬಾಹಿರವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಧಿಕ ಅವಧಿ ಕೆಲಸ ಮಾಡಿದರೆ ಭತ್ಯೆ ಪಡೆಯುವುದು ಉದ್ಯೋಗಿಗಳ ಹಕ್ಕು ಎಂದು ನ್ಯಾಯಾಲಯ ಹೇಳಿದೆ.

ಕೆಎಸ್ಆರ್ ಚಾಲಕ ಜಿ. ಎಂ. ಪೂವಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಈ ಆದೇಶವನ್ನು ನೀಡಿದೆ. ನ್ಯಾಯಾಲಯದ ಆದೇಶದಿಂದ 30 ಸಾವಿರಕ್ಕೂ ಅಧಿಕ ಉದ್ಯೋಗಿಗಳಿಗೆ ಲಾಭ ಸಿಗಲಿದೆ.
2011ರ ಮೇ 10ರಂದು ನ್ಯಾಯಾಲಯ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಅಧಿಕ ಅವಧಿ ಭತ್ಯೆ ನೀಡುವ ಬಗ್ಗೆ ಹೊರಡಿಸಿದ್ದ ಸುತ್ತೋಲೆಗೆ ತಡೆ ನೀಡಿತ್ತು. ಈಗ ನ್ಯಾಯಾಲಯ ಈ ತಡೆಯನ್ನು ರದ್ದುಗೊಳಿಸಿದೆ. 8 ವಾರದಲ್ಲಿ ಅಧಿಕ ಅವಧಿ ಭತ್ಯೆ ನೀಡುವಂತೆ ಸೂಚನೆ ನೀಡಿದೆ.
ಕೆಎಸ್ಆರ್ಟಿಸಿ ತನ್ನ ನೌಕರರಿಗೆ 2017-18ನೇ ಸಾಲಿನಲ್ಲಿ ಬೋನಸ್ ನೀಡಿತ್ತು. ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿಸಿ 21 ಸಾವಿರಕ್ಕೂ ಕಡಿಮೆ ವೇತನ ಪಡೆದ ಉದ್ಯೋಗಿಗಳಿಗೆ 7 ಸಾವಿರ ಬೋನಸ್ ನೀಡಲು ತೀರ್ಮನ ಕೈಗೊಳ್ಳಲಾಗಿತ್ತು.












Click it and Unblock the Notifications