ವಿಚಿತ್ರ ತಿರುವು ಪಡೆದ ಉಸಿರುಗಟ್ಟಿ ಸತ್ತ ಮಂಡ್ಯ ಮಗು ಪ್ರಕರಣ
ಮಂಡ್ಯ, ಜನವರಿ,11: ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಮಹಿಳೆಯೊಬ್ಬಳು ಗುರುವಾರ ಹತ್ಯೆಗೈದ ಪ್ರಕರಣ ತಿರುವು ಪಡೆದಿದೆ. ಇದು ಇತ್ತೀಚೆಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಿಂದ ಅಪಹರಿಸಿದ್ದ ಮಗು ಎಂದು ಹೇಳಲಾಗುತ್ತಿದ್ದು, ಆ ಮಗುವನ್ನು ಎರಡು ಕುಟುಂಬದವರು ನಮ್ಮದು ಎನ್ನುತ್ತಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿಯ ಪ್ರೇಮಕುಮಾರಿ (21) ಸುಮಾರು 5 ತಿಂಗಳ ಗಂಡು ಮಗುವನ್ನು ಹತ್ಯೆಗೈದು ಜೈಲು ಸೇರಿದ ಆಕೆ ಮಗು ತನ್ನದೇ ಎಂದು ಹೇಳುತ್ತಿದ್ದಾಳೆ. ಆದರೆ ಈ ಮಗು ನಮ್ಮದು. ಮಗು ಜನವರಿ 1 ರಂದು ಅಪಹರಣಕ್ಕೆ ಒಳಗಾಗಿತ್ತು ಎಂದು ಮಂಡ್ಯದ ಬಿ.ಹಟ್ನ ಗ್ರಾಮದ ಅರುಣಕುಮಾರ್ ಮತ್ತು ಸೌಮ್ಯ ದಂಪತಿ ಹೇಳುತ್ತಿದ್ದಾರೆ.[ಆಟವಾಡಿಸಲು ಬಂದವಳು ಮಗು ಅಪಹರಿಸಿದಳು]
ಪ್ರೇಮಕುಮಾರಿ ಜನವರಿ 4ರಂದು ಆದಿಚುಂಚನಗಿರಿ ಆಸ್ಪತ್ರೆಗೆ 5 ತಿಂಗಳ ಗಂಡು ಮಗು ತಂದು ದಾಖಲಿಸುವಾಗ ತನ್ನದೇ ಮಗು ಎಂದು ಹೇಳಿಕೊಂಡಿದ್ದಳು. ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ವೈದ್ಯರು ಮಗುವನ್ನು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು.
ಗುರುವಾರ ಬೆಳಿಗ್ಗೆ ಮಗುವನ್ನು ವಾರ್ಡ್ ಗೆ ಸ್ಥಳಾಂತರಿಸಲಾಗಿತ್ತು. ಆಗ ವಾರ್ಡ್ ನಿಂದ ಮಗುವನ್ನು ಹೊರಗೆ ತೆಗೆದುಕೊಂಡು ಹೋದ ಪ್ರೇಮಕುಮಾರಿ ಸ್ವಲ್ಪ ಸಮಯದಲ್ಲೇ ವೈದ್ಯ ಡಾ.ಸೋಮಶೇಖರ್ ಬಳಿ ಬಂದು ಮಗು ಸತ್ತು ಹೋಗಿದೆ ಎಂದಿದ್ದಾಳೆ.[ತಾಯಿಯೇ ಹೆತ್ತ ಮಗುವನ್ನು ಕೊಂದಿದ್ದು ಯಾಕೆ?]
ಆಕೆಯನ್ನು ವೈದ್ಯರು ಕೂಲಂಕುಷವಾಗಿ ವಿಚಾರಿಸಿದಾಗ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ತಾನೇ ಕತ್ತು ಹಿಸುಕಿ ಹತ್ಯೆ ಮಾಡಿದೆ ಎಂದು ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಡಾ. ಸೋಮಶೇಖರ್ ಅವರು ಬೆಳ್ಳೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆಗ ಬೆಳ್ಳೂರು ಪೊಲೀಸರು ಆಕೆಯನ್ನು ಬಂಧಿಸಿದ್ದು, ಆಕೆಯ ಪತಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆ ಮಗುವನ್ನು ಮಹಿಳೆ ಹತ್ಯೆ ಮಾಡಿರುವ ವಿಷಯ ತಿಳಿದು ಮಂಡ್ಯ ಪೂರ್ವ ಠಾಣೆ ಪೊಲೀಸರೊಂದಿಗೆ ಬೆಳ್ಳೂರು ಠಾಣೆಗೆ ಆಗಮಿಸಿದ ಅರುಣ್ ಕುಮಾರ್ ಮತ್ತು ಸೌಂದರ್ಯ ದಂಪತಿ ಮಗುವಿನ ಫೋಟೋ ನೋಡಿ ಇದು ತಮ್ಮದೇ ಮಗು. ಈ ಮಗುವನ್ನು ಜ.1ರಂದು ಮಂಡ್ಯ ಜಿಲ್ಲಾಸ್ಪತ್ರೆಯಿಂದ ಅಪಹರಿಸಲಾಗಿತ್ತು ಎಂದು ತಿಳಿಸಿದ್ದಾರೆ.[ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!]
ಅದೇ ವೇಳೆ ಆರೋಪಿ ಮಹಿಳೆಯ ಫೋಟೋ ನೋಡಿದ ಮಂಡ್ಯ ಪೂರ್ವ ಠಾಣೆ ಪೊಲೀಸರು, ಮಗು ಅಪಹರಣವಾದ ದಿನ ಸಿಸಿ ಟಿವಿಯಲ್ಲಿ ದಾಖಲಾಗಿರುವ ಅಪಹರಣಕಾರಳ ಚಿತ್ರಕ್ಕೂ ಈ ಮಹಿಳೆಯ ಚಿತ್ರಕ್ಕೂ ಹೋಲಿಕೆ ಇದೆ. ಮಂಡ್ಯದಿಂದ ಅಪಹರಿಸಿದ್ದ ಮಗುವನ್ನು ಪ್ರೇಮಕುಮಾರಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹತ್ಯೆ ಮಾಡಿದ್ದಾಳೆ ಎನ್ನಲಾಗುತ್ತಿದೆ.
ಈ ಗೊಂದಲದ ನಿವಾರಣೆಗಾಗಿ ಬಂಧನಕ್ಕೊಳಗಾದ ಪ್ರೇಮಕುಮಾರಿಯನ್ನು ವಿಚಾರಣೆ ಮಾಡುವುದು ಹಾಗೂ ಮಗುವಿನ ಪೋಷಕರ ಪತ್ತೆಗಾಗಿ ಮೃತ ದೇಹ ಹೊರ ತೆಗೆದು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಬೆಳ್ಳೂರು ಮತ್ತು ಮಂಡ್ಯ ಪೂರ್ವ ಠಾಣೆ ಪೊಲೀಸರು ನಿರ್ಧರಿಸಿದ್ದಾರೆ.