ರಾಜ್ಯಾಧ್ಯಕ್ಷರಾಗಿ ಮುಂದುವರೆಯುವಂತೆ ವಿಜಯೇಂದ್ರಗೆ ಹೈಕಮಾಂಡ್ ಗ್ರೀನ್ ಸಿಗ್ನಲ್: ಷರತ್ತುಗಳು ಅನ್ವಯ
ಬೆಂಗಳೂರು, ಫೆಬ್ರವರಿ 11: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರೋ ಆಂತರಿಕ ಗುದ್ದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಸಜ್ಜಾಗಿದೆ. ಒಂದು ವರ್ಷದಿಂದ ಯತ್ನಾಳ್ ಹಾಗೂ ವಿ ವೈ ವಿಜಯೇಂದ್ರ ಬಣದ ನಡುವೆನಡೆಯುತ್ತಿರೋ ಈ ಆಂತರಿಕ ಕಲಹಕ್ಕೆ ಇತಿಶ್ರೀ ಹಾಡಲು ಎರಡು ಬಣಗಳನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದ್ದು, ಇದೀಗ ಕರ್ನಾಟಕ ಬಿಜೆಪಿಯ ಬಣ ಬಡಿದಾಟ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ.
ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆಗೆ ಒಂದು ಬಣ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ರೆ, ಇನ್ನೊಂದು ಬಣ ವಿಜಯೇಂದ್ರ ಪರವಾಗಿ ಧ್ವನಿ ಎತ್ತಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಂದಿವ ರಾಜ್ಯಾಧ್ಯಕ್ಷರು ಯಾರಾಗುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದ್ದು, ಹಲವು ಸಮುದಾಯದ ನಾಯಕರು ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ನಿರಂತರವಾಗಿ ಟೀಕೆ ಮಾಡುತ್ತಿರುವ ಯತ್ನಾಳ್ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡುವ ಮೂಲಕ ಮೊದಲ ಹಂತದ ಶಾಕ್ ಕೊಟ್ಟಿದೆ.

ಬಿಜೆಪಿ ಹೈಕಮಾಂಡ್ ಬಸವನಗೌಡ ಪಾಟೀಲ್ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡುವ ಮೂಲಕ ಭಿನ್ನರ ಬಾಯಿಗೆ ಬೀಗ ಹಾಕುವ ಕೆಲಸಕ್ಕೆ ಕೇಸರಿ ಪಡೆ ಮುಂದಾಗಿದೆ. ಈ ಮೂಲಕ ವಿಜಯೇಂದ್ರ ನೇತೃತ್ವದಲ್ಲಿ ಕರ್ನಾಟಕ ಬಿಜೆಪಿ ಸಂಘಟನೆಗೆ ಗ್ರೀನ್ ಸಿಗ್ನಲ್ ನೀಡಿರುವ ರೀತಿ ಕಾಣುತ್ತಿದೆ. ಆದರೆ, ಇದರ ನಡುವೆ ಚಿಕ್ಕಬಳ್ಳಾಪುರ ಬಿಜೆಪಿ ಅಧ್ಯಕ್ಷರ ನೇಮಕ ತಡೆಹಿಡಿದಿರುವುದು ಕೂಡ ಕುತೂಹಲ ಹೆಚ್ಚುವಂತೆ ಮಾಡಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಿ 72 ಗಂಟೆಗಳ ಒಳೆಗೆ ಉತ್ತರ ನೀಡುವಂತೆ ಡೆಡ್ಲೈನ್ ನೀಡಲಾಗಿದೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬದಲಾವಣೆಗೆ ಒತ್ತಾಯಿಸುವವರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿದ್ದು, ವಿಜಯೇಂದ್ರ ವಿರುದ್ಧದ ದೂರುಗಳಿಗೆ ಮಹತ್ವವನ್ನು ನೀಡಿಲ್ಲ. ಇದು ಮತ್ತೊಂದು ಅವಧಿಗೆ ಬಿವೈ ವಿಜಯೇಂದ್ರ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸುವ ಲಕ್ಷಣಗಳು ಕಾಣಿಸುತ್ತಿವೆ. ಅಲ್ಲದೇ ಚುನಾವಣೆ ಇಲ್ಲದೇ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.
ಈಗಾಗಲೇ ರಾಜ್ಯ ಬಿಜೆಪಿ ರಾಧಾ ಮೋಹನ್ ಅಗರ್ವಾಲ್ ಅವರು ಶೀಘ್ರದಲ್ಲಿ ಚುನಾವಣೆ ನಡೆಯಲಿದೆ ಎಂದು ಈ ಹಿಂದೆ ರಾಜ್ಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಹೇಳಿದ್ರು. ಆದರೆ, ಸದ್ಯದ ಬೆಳವಣಿಗೆಯನ್ನ ಗಮನಿಸಿದ್ರೆ, ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಹುದ್ದೆಯಲ್ಲಿ ಮುಂದುವರಿಸಲು ಹೈಕಮಾಂಡ್ ಮುಂದಾಗಿರುವಂತೆ ಕಾಣುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ಇರುವ ಅಡೆತಡೆಗಳನ್ನು ತೆರವುಗೊಳಿಸೋ ಪ್ರಕ್ರಿಯೆಯ ಭಾಗವಾಗಿ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಂದು ವೇಳೆ ಚುನಾವಣೆ ನಡೆದರೆ, ಆ ಚುನಾವಣೆಗೆ ಬಸವನಗೌಡ ಪಾಟೀಲ್ ಯತ್ನಾಳ್ ಸ್ಪರ್ಧಿಸಿದರೆ ಅಥವಾ ವಿಜಯೇಂದ್ರ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಪಕ್ಷಕ್ಕೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಹೈಕಮಾಂಡ್ ಶೋಕಾಸ್ ನೋಟಿಸ್ ಮೂಲಕ ಯತ್ನಾಳ್ಗೆ ಚಾಟಿ ಬೀಸಿದೆ ಎನ್ನಲಾಗಿದೆ. ಚುನಾವಣೆ ನಡೆದರು ಕೂಡ ಈಗಾಗಲೇ 23 ಬಿಜೆಪಿ ಸಂಘಟನಾ ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕವಾಗಿರುವುದು ವಿಜಯೇಂದ್ರಗೆ ಅನುಕೂಲ ಆಗಲಿದೆ ಎನ್ನಲಾಗಿದ್ದು, ಚುನಾವಣೆ ನಡೆಸಿದರೂ ಅರ್ಥವಿಲ್ಲ. ಆದ್ದರಿಂದ ಅವಿರೋಧವಾಗಿ ರಾಜ್ಯಾಧ್ಯಕ್ಷರ ಆಯ್ಕೆಗೆ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ.
ವಿಜಯೇಂದ್ರಗೂ ಲಗಾಮು ಹಾಕುವ ಕೆಲಸಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಜಿಲ್ಲಾಧ್ಯಕ್ಷರ ನೇಮಕಾತಿ ವಿಚಾರವಾಗಿಯೂ ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂದೀಪ್ ರೆಡ್ಡಿ ನೇಮಕಾತಿಯನ್ನು ತಡೆಹಿಡಿದು ವಿಜಯೇಂದ್ರಗೆ ಶಾಕ್ ನೀಡಲಾಗಿದೆ.
ಇತ್ತ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸುವ ಮೂಲಕ ಪಕ್ಷ ಸಂಘಟನೆ, ನಿರ್ಧಾರದ ವಿಚಾರದಲ್ಲಿ ವಿಜಯೇಂದ್ರಗೆ ಸಂಪೂರ್ಣ ಅಧಿಕಾರ ನೀಡದಿರಲು ಬಿಜೆಪಿ ಹೈಕಮಾಂಡ್ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಮೂಲಕ ವಿಜಯೇಂದ್ರಗೆ ಹೈಕಮಾಂಡ್ ಷರತ್ತು ಸಹಿತ ಬೆಂಬಲ ನೀಡಿರುವುದು ಕೂಡ ಸ್ಪಷ್ಟವಾಗಿದೆ.












Click it and Unblock the Notifications