KRS Dam: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಮುನ್ಸೂಚನೆ; ಜಲಾಶಯಗಳ ಒಳಹರಿವು ಎಷ್ಟಿದೆ?
ರಾಜ್ಯಕ್ಕೆ ಮುಂಗಾರು ಆರಂಭಕ್ಕೆ ದಿನಗಣನೆ ಶುರುವಾಗಿದೆ. ಪೂರ್ವ ಮುಂಗಾರು ಉತ್ತಮವಾಗಿದ್ದ ಕಾರಣ ಕಾವೇರಿ ನದಿ ಮರುಜೀವ ಪಡೆದುಕೊಂಡಿದೆ. ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳಿಗೆ ಒಳಹರಿವು ಆರಂಭವಾಗಿದ್ದು, ನೀರಿನ ಮಟ್ಟ ನಿಧಾನವಾಗಿ ಹೆಚ್ಚುತ್ತಿದೆ.
ಮೇ 31 ರಿಂದ ಜೂನ್ 8ರವರೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ಜಲಾಶಯಗಳಲ್ಲಿ ಒಳಹರಿವು ಹೆಚ್ಚುವ ವಿಶ್ವಾಸ ಇದೆ.

ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಕಾರಣ ಸದ್ಯ ಜಲಾಶಯಗಳ ಒಳಹರಿವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೂ ಕೂಡ ಜಲಾಶಯಗಳಿಗೆ ನೀರಿನ ಹರಿವು ನಿರಂತರವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ, ಒಳಹರಿವು ಕೂಡ ಹೆಚ್ಚಲಿದೆ.
ಇಂದಿನ ಜಲಾಶಯಗಳ ಮಟ್ಟ
ಶುಕ್ರವಾರ ಹಾರಂಗಿ ಜಲಾಶಯದ ಒಳಹರಿವು 230 ಕ್ಯೂಸೆಕ್ಸ್ ದಾಖಲಾಗಿದೆ. 200 ಕ್ಯೂಸೆಕ್ಸ್ ಹೊರಹರಿವು ಇದೆ. 8.50 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 3.04 ಟಿಎಂಸಿ ನೀರು ಸಂಗ್ರಹವಾಗಿದೆ.
ಹೇಮಾವತಿ ಜಲಾಶಯದ ಒಳಹರಿವು 295 ಕ್ಯೂಸೆಕ್ಸ್ ಇದ್ದರೆ, ಹೊರಹರಿವು 250 ಕ್ಯೂಸೆಕ್ಸ್ ದಾಖಲಾಗಿದೆ. 37.10 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 9.90 ಟಿಎಂಸಿ ನೀರು ಸಂಗ್ರಹವಾಗಿದೆ.
ಕೆಆರ್ ಎಸ್ ಜಲಾಶಯದ ಒಳಹರಿವು ಕೂಡ ಕಡಿಮೆಯಾಗಿದೆ. ಶುಕ್ರವಾರ 949 ಕ್ಯೂಸೆಕ್ಸ್ ಒಳಹರಿವು ಇದ್ದರೆ, 545 ಕ್ಯೂಸೆಕ್ಸ್ ಹೊರಹರಿವು ದಾಖಲಾಗಿದೆ. 49.45 ಟಿಎಂಎಸಿ ಒಟ್ಟು ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ 12.61 ಟಿಎಂಸಿ ನೀರು ಸಂಗ್ರಹವಾಗಿದೆ.
ಕಬಿನಿ ಜಲಾಶಯದ ಒಳಹರಿವು 198 ಕ್ಯೂಸೆಕ್ಸ್ ಇದ್ದರೆ, ಹೊರ ಹರಿವು 300 ಕ್ಯೂಸೆಕ್ಸ್ ಇದೆ, 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 7.53 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಜೂನ್ 1 ಮತ್ತು ಜೂನ್ 2ರಂದು ಕಾವೇರಿ ಜಲಾನಯನದ ಪ್ರದೇಶದಲ್ಲಿ ಭಾರಿ ಮಳೆ ನಿರೀಕ್ಷೆ ಮಾಡಲಾಗಿದೆ. ಎರಡು ದಿನ ವ್ಯಾಪಕ ಮಳೆಯಾಗಲಿದ್ದು, ಬಳಿಕ ಜೂನ್ 3 ಮತ್ತು 4 ರಂದು ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಜೂನ್ 5 ಮತ್ತು 6 ರಂದು ಮಳೆ ಮತ್ತೆ ಹೆಚ್ಚಲಿದ್ದು, ಬಳಿಕ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.












Click it and Unblock the Notifications