ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟೀಕೆ

ಬೆಂಗಳೂರು, ಡಿಸೆಂಬರ್ 5: "ಇಲ್ಲಿ ನನ್ನ ವಿರುದ್ದ ಸೋತ್ನಲ್ಲಾ.. ಅವನೇ ಕಣಯ್ಯಾ.. ನಮ್ ಹೆಲ್ತ್ ಮಿನಿಸ್ಟರ್.. ಏನ್ ಹೇಳು.. ಹೆಲ್ತು.. ಮಿನಿಸ್ಟ್ರು" ಎಂದು ಬಾದಾಮಿಯ ಕೆರೂರು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ದೂರನ್ನಿತ್ತ ಗ್ರಾಮಸ್ಥರ ಬಳಿ ವ್ಯಂಗ್ಯವಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಅವರೇ ಬದಾಮಿ ಕ್ಷೇತ್ರದ ಕೆರೂರು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ ಎಂಬ ಕಾರಣಕ್ಕೆ ನನ್ನ ಬಗ್ಗೆ ರಾಜಕೀಯ ಟೀಕೆ ಮಾಡಿದ್ದೀರಿ. ಆ ಆಸ್ಪತ್ರೆ ನಿಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎಂಬುದು ಗೊತ್ತಿರಲಿಲ್ಲವೇ ಯಾವತ್ತಾದರೂ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತಂದಿದ್ದೀರಾ? ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ.

ನಿಮ್ಮ ವಿರುದ್ಧ ಬದಾಮಿಯಲ್ಲಿ ಸೋತಿರಬಹುದು, ಚಾಮುಂಡೇಶ್ವರಿಯಲ್ಲಿ ನೀವು ಸೋತಷ್ಟು ಹೀನಾಯವಾಗಿ ಸೋತಿಲ್ಲ. ಚಾಮುಂಡೇಶ್ವರಿ ಜನರನ್ನು ನೀವು ಮರೆತಂತೆ ನಾನು ಬದಾಮಿಯ ಜನರನ್ನು ನಾನು ಮರೆತಿಲ್ಲ. ಪ್ರವಾಹ ಬಂದಾಗ ನಿಮಗಿಂತ ಮೊದಲು ಹೋಗಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ.

ನಿಮ್ಮ ಸರ್ಕಾರದ 5 ವರ್ಷ ಮತ್ತು ಮೈತ್ರಿ ಸರ್ಕಾರದ ಒಂದೂಕಾಲು ವರ್ಷದಲ್ಲಿ ನೀವೇನು ಸಾಧನೆ ಮಾಡಿದ್ದೀರಿ, ನಾನು ಸಚಿವನಾಗಿ 100 ದಿನ ಕಳೆದಿದೆ ಅಷ್ಟೆ. ವೈದ್ಯರು, ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭಿಸಿದ್ದೇನೆ ಎಂದು ಶ್ರೀರಾಮುಲು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ದುರಹಂಕಾರ ಮಾತೇ?

ದುರಹಂಕಾರ ಮಾತೇ?

ಸಿದ್ದರಾಮಯ್ಯನವರೇ ನನ್ನ ಮೇಲೆ ನಿಂತಿದ್ನಲಾ ಯಾರವ? ಎಂದು ಕೇಳುತ್ತೀರಲ್ಲಾ, ನಿಮ್ಮ ವಿರುದ್ಧ ಬದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದವರು ಯಾರು ಎಂಬುದೂ ನಿಮಗೆ ಗೊತ್ತಿಲ್ಲವೇ? ಅಷ್ಟೊಂದು ಮರೆಗುಳಿಯಾಗಿದ್ದೀರಾ ಅಥವಾ ದುರಹಂಕಾರದ ಮಾತೇ?

ನಾನು ಹೇಳಿದ್ರೆ ಕೇಳಲ್ಲ. ನನ್ನ ಜತೆ ಮಾತಾಡೋದೇ ಇಲ್ಲ ಎನ್ನುತ್ತೀರಲ್ಲಾ. ನಿಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಯಾವತ್ತಾದರೂ ನನ್ನ ಬಳಿ ಮಾತನಾಡಿದ್ದೀರಾ. ಮಾತು ಬಿಡಿ ಒಂದು ಪತ್ರವನ್ನಾದರೂ ಬರೆದಿದ್ದೀರಾ?

ನೀವು ಸಿಎಂ ಆಗಿದ್ದಾಗ ಕೆಲಸ ಮಾಡಿದ್ದರೆ...

ನೀವು ಸಿಎಂ ಆಗಿದ್ದಾಗ ಕೆಲಸ ಮಾಡಿದ್ದರೆ...

ಕೆರೂರು ಆಸ್ಪತ್ರೆ ನೀವು ಪ್ರತಿನಿಧಿಸುವ ಬದಾಮಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲ ಎಂದು ಯಾರೋ ದೂರು ಕೊಟ್ಟರು ಎಂದಾಕ್ಷಣ ನಾನು ಕೆಲಸವನ್ನೇ ಮಾಡುತ್ತಿಲ್ಲ ಎಂಬಂತೆ ಮಾತನಾಡುತ್ತೀರಲ್ಲಾ. ಯಾವತ್ತಾದರೂ ಈ ಕುರಿತು ನನ್ನ ಗಮನಕ್ಕೆ ತಂದಿದ್ದೀರಾ?

ನೀವು ಐದು ವರ್ಷ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ನಂತರದ ನಿಮ್ಮ ಪಕ್ಷವೂ ಇದ್ದ ಮೈತ್ರಿ ಸರ್ಕಾರ ಒಂದೂಕಾಲು ವರ್ಷ ಇತ್ತು. ಆಗೆಲ್ಲಾ ನೀವು ಸರಿಯಾಗಿ ಕೆಲಸ ಮಾಡಿದ್ದರೆ ಈ ಸಮಸ್ಯೆ ಇರುತ್ತಿತ್ತೇ?

ರಾಜಕೀಯ ಟೀಕೆಗಳು ಇಲ್ಲಿ ಬೇಡ

ರಾಜಕೀಯ ಟೀಕೆಗಳು ಇಲ್ಲಿ ಬೇಡ

ನಾನು ಸಚಿವನಾಗಿ ನೂರು ದಿನ ಕಳೆದಿದೆಯಷ್ಟೇ. ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ವೈದ್ಯರು ಸಿಬ್ಬಂದಿ ನೇಮಕ ಪ್ರಕ್ರಿಯೆ ಪ್ರಾರಂಭಿಸಿದ್ದೇನೆ. ನಿಮ್ಮ ಕ್ಷೇತ್ರದಲ್ಲಿ ಎಷ್ಟು ಆಸ್ಪತ್ರೆಗಳಿವೆ, ಎಷ್ಟು ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ ಎಂದು ಪತ್ರ ಕಳುಹಿಸಿಕೊಡಿ. ಹುದ್ದೆಗಳನ್ನು ಭರ್ತಿ ಮಾಡೋಣ.

ಅದನ್ನು ಬಿಟ್ಟು ರಾಜಕೀಯ ಟೀಕೆಗಳನ್ನು ಮಾಡುವುದು ಬೇಡ. ರಾಜಕೀಯವನ್ನು ಚುನಾವಣೆಗೆ ಸೀಮಿತವಾಗಿಡೋಣ. ಬಳಿಕ ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಅದನ್ನು ಬಿಟ್ಟು ಟೀಕೆ, ವ್ಯಂಗ್ಯಗಳಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಜನರಿಗೆ ನ್ಯಾಯ ಸಿಗುವುದಿಲ್ಲ. ಇನ್ನಾದರೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸಿ.

ನಿಮಗಿಂತ ಮೊದಲು ಸ್ಪಂದಿಸಿದ್ದೇನೆ

ನಿಮಗಿಂತ ಮೊದಲು ಸ್ಪಂದಿಸಿದ್ದೇನೆ

ಇನ್ನು ನಾನು ಸೋತವ, ಬಳ್ಳಾರಿ ಜನ ನನಗೆ ಮತ ನೀಡಿದ್ದಾರೆ ಎಂದೆಲ್ಲಾ ಹೇಳುತ್ತೀರಲ್ಲಾ? ಅದೆಲ್ಲ ನೀವು ನನಗೆ ನೆನಪಿಸಬೇಕಾದ ಅಗತ್ಯವಿಲ್ಲ. ಬದಾಮಿ ಕ್ಷೇತ್ರದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವವಾದಾಗ ನಿಮಗಿಂತ ಮೊದಲು ಕ್ಷೇತ್ರಕ್ಕೆ ತೆರಳಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದವನು ನಾನು.

ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ

ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ

ಸೋಲಿನ ಬಗ್ಗೆ ಸೋತ ಕ್ಷೇತ್ರ ಬಗ್ಗೆ ನನ್ನ ಬಗ್ಗೆ ಮಾತಾಡುವ ಮೊದಲು ನಿಮ್ಮ ಬಗ್ಗೆ ಮೊದಲು ಯೋಚಿಸಿಕೊಳ್ಳಿ. ನಾನೇನು ನಿಮ್ಮ ಹಣಬಲದ ಮುಂದೆ ಸ್ವಲ್ಪ ಮತದ ಅಂತರದಲ್ಲಿ ಸೋತಿರಬಹುದು. ಆದರೆ ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿ ದೇವೇಗೌಡ ವಿರುದ್ಧ ಹೀನಾಯ ಸೋತಿದ್ದೀರಿ.

ಸೋತ ಬಳಿಕ ಒಮ್ಮೆಯಾದರೂ ನಿಮ್ಮನ್ನು ಈ ಹಿಂದೆ ಗೆಲ್ಲಿಸಿ ಆಧರಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜನರ ಸಮಸ್ಯೆ, ಅಹವಾಲು ಆಲಿಸಿದ್ದೀರಾ?

ನಿಮ್ಮ ತಟ್ಟೆಯಲ್ಲಿ ಹೆಗ್ಗಣವೇ ಸತ್ತುಬಿದ್ದಿದೆ. ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದ ನೊಣವನ್ನೇ ದೊಡ್ಡ ವಿಚಾರ ಮಾಡಿ ಹೇಳುವುದು ನಿಮ್ಮಂತಹ ಮಾಜಿ ಮುಖ್ಯಮಂತ್ರಿಗೆ ಭೂಷಣವೇ? ಎಂದು ಶ್ರೀರಾಮುಲು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+