ಕರ್ನಾಟಕದಲ್ಲಿ ಕೊರೊನಾ ಪತ್ತೆಗೆ ಎರಡು ಲ್ಯಾಬ್ಗಳು ಆರಂಭ
ಬೆಂಗಳೂರು, ಮಾರ್ಚ್ 4: ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಉದ್ಯೋಗ ನಿರತರಾಗಿದ್ದ ಟೆಕ್ಕಿಯೊಬ್ಬರು ತೆಲಂಗಾಣಕ್ಕೆ ತೆರಳಿದ ನಂತರ ಕೊರಾನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
ಕರ್ನಾಟಕದಲ್ಲಿ ಇದುವರೆಗೂ 245 ಮಂದಿಗೆ ಈ ವೈರಸ್ ಬಗ್ಗೆ ಪರೀಕ್ಷೆ ಮಾಡಿದ್ದು, ಇದರಲ್ಲಿ ಯಾರಿಗೂ ವೈರಸ್ ರೋಗಾಣುಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ.
ಕರ್ನಾಟಕದಲ್ಲಿ ಕೊರಾನಾ ಸೋಂಕಿತರು ಯಾರು ಇಲ್ಲ, ಈ ಬಗ್ಗೆ ರಾಜ್ಯದ ಜನತೆ ಯಾವುದೇ ರೀತಿ ಆತಂಕ ಮತ್ತು ಉದ್ವೇಗಕ್ಕೆ ಒಳಗಾಗುವುದು ಬೇಡ ಎಂದು ಹೇಳಿದ್ದಾರೆ.
ಹೊಸ ಲ್ಯಾಬ್: ಕರ್ನಾಟಕ ಸರ್ಕಾರ ತಕ್ಷಣದಿಂದಲೇ ಕೊರೊನಾ ಪತ್ತೆಗೆ ಎರಡು ಲ್ಯಾಬ್ ಗಳನ್ನು ಪ್ರಾರಂಭಿಸಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 2 ಸಾವಿರಕ್ಕೂ ಅಧಿಕ ವಿಶೇಷ ಕೊಠಡಿಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.
ಈ ಹಿಂದೆ ಡೆಂಗ್ಯೂ, ಚಿಕೂನ್ ಗುನ್ಯಾ ಮಾದರಿಯ ರೋಗಗಳನ್ನು ರಾಜ್ಯದ ಆರೋಗ್ಯ ಇಲಾಖೆ ಎದುರಿಸಿ ಅಭ್ಯಾಸವಿದೆ. ಕೊರೊನಾ ದೊಡ್ಡ ಸಂಕಷ್ಟ ತರಲಾರದು ಎಂದು ಶ್ರೀರಾಮುಲು ಹೇಳಿದರು.

ನಲವತ್ತು ಸಾವಿರ ಮಂದಿಯನ್ನು ಪರೀಕ್ಷಿಸಲಾಗಿದೆ
ರಾಜ್ಯದ ವಿಮಾನ ನಿಲ್ದಾಣ, ಬಂದರುಗಳಲ್ಲಿ ಕೊರೊನಾ ಪತ್ತೆಗಾಗಿ ಪರೀಕ್ಷೆಗಳನ್ನು ನಡೆಸಿದ್ದು ಈಗಾಗಲೇ ನಲವತ್ತು ಸಾವಿರ ಮಂದಿಯನ್ನು ಪರೀಕ್ಷಿಸಲಾಗಿದೆ. 240 ಮಂದಿಯ ರಕ್ತದ ಮಾದರಿಗಳನ್ನು ಪಡೆಯಲಾಗಿದ್ದು ಈ ಪೈಕಿ ಎರಡನ್ನು ಹೊರತುಪಡಿಸಿದರೆ, ಉಳಿದಂತೆ 238 ಮಂದಿಯ ರಕ್ತ ಪರೀಕ್ಷೆ ವರದಿ ಬಂದಿದ್ದು, ಯಾರಲ್ಲೂ ಕೊರೊನಾ ವೈರಾಣು ಪತ್ತೆಯಾಗಿಲ್ಲ ಎಂದು ಅಂಕಿ ಅಂಶ ನೀಡಿದರು. ಉಳಿದಂತೆ ಎರಡು ಮಂದಿಯ ರಕ್ತ ಪರೀಕ್ಷೆ ವರದಿ ಬರಬೇಕಾಗಿದ್ದು ಪ್ರಾಥಮಿಕ ಮಾಹಿತಿಯಂತೆ ಈ ಇಬ್ಬರೂ ಮಂದಿಯಲ್ಲೂ ಕೊರೊನಾ ರೋಗಾಣು ಪತ್ತೆಯಾಗಿಲ್ಲ. ಹೀಗಾಗಿ ಯಾವ ಕಾರಣಕ್ಕೂ ಆತಂಕಪಡಲು ಕಾರಣವಿಲ್ಲ.

ಐಟಿ ಸಂಸ್ಥೆಯ ಉದ್ಯೋಗಿ ಪ್ರಕರಣ
ಟೆಕ್ಕಿಗೆ ಕೊರೊನಾ: ಐಟಿ ಸಂಸ್ಥೆಯ ಉದ್ಯೋಗಿಯೊಬ್ಬರಲ್ಲಿ ಕಂಡ ಕೊರೊನಾ ರೋಗಾಣು ಕೂಡಾ ಇಲ್ಲಿದ್ದಾಗ ಪತ್ತೆಯಾಗಿದ್ದಲ್ಲ. ಅವರು ತೆಲಂಗಾಣಕ್ಕೆ ಹೋದಾಗ ಕಂಡು ಬಂದಿದೆ. ಹೀಗಾಗಿ ನಾವು ಮತ್ತು ತೆಲಂಗಾಣ ಸರ್ಕಾರ ಅವರು ಪ್ರಯಾಣಿಸಿದ ಬಸ್ಸಿನಲ್ಲಿದ್ದ ಒಟ್ಟು 24 ಮಂದಿಯನ್ನು ತಪಾಸಣೆಗೊಳಪಡಿಸಿದ್ದೇವೆ. ಕೊರೊನಾ ರೋಗಾಣು ಪತ್ತೆಯಾದ ವ್ಯಕ್ತಿ ಕೆಲಸ ಮಾಡುತ್ತಿದ್ದ ಐಟಿ ಸಂಸ್ಥೆಯ ಬಾಗಿಲು ಮುಚ್ಚಲಾಗಿದ್ದು ಸದರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಇಪ್ಪತ್ತೈದು ಮಂದಿ ತಮ್ಮ ತಮ್ಮ ಮನೆಗಳಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಕೊರೊನಾ ಕಾಯಿಲೆಯ ಚಿಹ್ನೆಗಳು ಸಾಮಾನ್ಯವಾಗಿ ಕೆಮ್ಮು, ಜ್ವರದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ರೋಗಾಣುವಿನ ಪತ್ತೆಗಾಗಿ ಮತ್ತು ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗಳ ಎಲ್ಲ ವೈದ್ಯರಿಗೆ ವಿಶೇಷ ಕಿಟ್ಗಳನ್ನು ನೀಡಲಾಗಿದೆ.

ಎರಡು ಲ್ಯಾಬ್ ಸ್ಥಾಪನೆ
ರಾಜ್ಯದಲ್ಲಿರುವ 1689 ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಸಂಬಂಧ ಸೂಚನೆ ನೀಡಲಾಗಿದ್ದು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರೂ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಇದುವರೆಗೆ ಕೊರೋನಾ ವೈರಸ್ ಪತ್ತೆಗಾಗಿ ರಾಜ್ಯದಲ್ಲಿ ಲ್ಯಾಬ್ ಗಳಿರಲಿಲ್ಲ. ಬದಲಿಗೆ ಅಂಥ ಚಿಹ್ನೆಗಳು ಕಾಣಿಸಿಕೊಂಡಾಗ ರೋಗಿಯ ರಕ್ತದ ಮಾದರಿಯನ್ನು ಪುಣೆಗೆ ಕಳಿಸಿಕೊಡಲಾಗುತ್ತಿತ್ತು. ಆದರೆ, ಈಗ ತಕ್ಷಣದಿಂದಲೇ ಜಾರಿಗೆ ಬರುವಂತೆ ಬೆಂಗಳೂರಿನ ರಾಜೀವ್ ಗಾಂಧಿ ಕ್ಷಯ ಹಾಗೂ ಎದೆಗೂಡುಗಳ ಆಸ್ಪತ್ರೆ ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಲ್ಯಾಬ್ ಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಮುನ್ನೆಚ್ಚರಿಕೆ ಕ್ರಮಗಳೇನು? ಸಹಾಯವಾಣಿ?
* ಕೈಕಾಲುಗಳನ್ನು ಸೋಪು, ನೀರಿನಿಂದ ಕೈತೊಳೆದುಕೊಳ್ಳಬೇಕು.
* ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು.
* ಈಗಾಗಲೇ ಸೋಂಕಿನ ಲಕ್ಷಣಗಳು ಕಂಡು ಬಂದಿರುವವರಿಂದ ದೂರವಿರಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ.
* ಸಾರ್ವಜನಿಕ ಸ್ಥಳಗಳಲ್ಲಿ ವೈರಾಣು ಕೆಲವು ಗಂಟೆಗಳ ಕಾಲ ಜೀವಂತ ಇರಲಿದೆ. ಸ್ವಚ್ಛತೆಗೆ ಆದ್ಯತೆ ನೀಡುವುದು ಅಗತ್ಯ. ಗಾಳಿಯ ಮೂಲಕ ವೈರಾಣು ಹರಡುವುದಿಲ್ಲ. ಬದಲಿಗೆ ಸೋಂಕಿತ ವ್ಯಕ್ತಿಯು ಸೀನುವಾಗ, ಕೆಮ್ಮಿದಾಗ ಹೊರ ಬರುವ ವೈರಾಣು ಸಂಪರ್ಕಕ್ಕೆ ತಗುಲುವವರಿಗೆ ಸೋಂಕು ಬರಲಿದೆ.
* ಆಗಾಗ ಸೋಪ್, ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಳ್ಳಿ.
* ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸಿ.
ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವಾ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.












Click it and Unblock the Notifications