ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಎಚ್.ಡಿ. ಕುಮಾರಸ್ವಾಮಿ ಚರ್ಚೆ | HD Kumaraswamy
ಕೇಂದ್ರ ಬಜೆಟ್-2026 ಮಂಡನೆ ಆಗಿ 3 ದಿನ ಕಳೆದಿದ್ದು, ಈಗಲೂ ಬಜೆಟ್ ಬಗ್ಗೆ ಬಿಸಿಬಿಸಿ ಚರ್ಚೆ ಕಡಿಮೆ ಆಗಿಲ್ಲ. ಅದರಲ್ಲೂ 50 ಲಕ್ಷ ಕೋಟಿ ರೂಪಾಯಿ ದಾಟಿರುವ ಭಾರತದ ಬಜೆಟ್ ಕುರಿತು ಇಡೀ ಜಗತ್ತು ಈಗ ಮಾತನಾಡುತ್ತಿದೆ. ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ರೀತಿ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದೆ ಎಂಬ ಚರ್ಚೆ ನಡೆಯುತ್ತಿದೆ. ಈಗಾಗಲೇ ಬಜೆಟ್ ಮೇಲೆ ಸಂಸತ್ನಲ್ಲಿ ಚರ್ಚೆ ಕೂಡ ಶುರುವಾಗಿದೆ. ಇದೇ ಸಮಯದಲ್ಲೇ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಅಂದಹಾಗೆ ಉಕ್ಕು ಸಚಿವಾಲಯದಲ್ಲಿ ಹಲವು ಹೊಸ ಯೋಜನೆಗಳು ಸಿದ್ಧವಾಗಿವೆ. ಮತ್ತೊಂದು ಕಡೆ ಹೊಸ ಆರ್ಥಿಕ ವರ್ಷದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೂಡ ಕೈಗೊಳ್ಳಲಾಗುತ್ತಿದೆ. ಹೀಗಿದ್ದಾಗ ವಿವಿಧ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ. ಕೇಂದ್ರದ ಬೃಹತ್ ಕೈಗಾರಿಕೆ, ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ಚರ್ಚೆ ನಡೆಸಿದರು. ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಕೂಡ ಈ ಮಹತ್ವದ ಚರ್ಚೆಯ ಸಮಯದಲ್ಲಿ ಹಾಜರಿದ್ದರು.

ಉಕ್ಕು ವಲಯದ ಅಭಿವೃದ್ಧಿಗೆ ಯೋಜನೆಗಳು
ಕೇಂದ್ರ ಹಣಕಾಸು ಸಚಿವರ ಕಚೇರಿಯಲ್ಲಿ, ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಮುಖ ಅಭಿವೃದ್ಧಿ ಆದ್ಯತೆಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾರೆ. ಉಕ್ಕು ಸಚಿವಾಲಯದ ಹೊಸ ಹೂಡಿಕೆ ಸೇರಿದಂತೆ, ಈಗಾಗಲೇ ಪ್ರಗತಿಯಲ್ಲಿ ಇರುವ ಯೋಜನೆಗಳ ಬಗ್ಗೆ ಹಾಗೂ ಉಕ್ಕು ವಲಯ ಮತ್ತಷ್ಟು ಬಲಪಡಿಸುವ ಕುರಿತು ಮಹತ್ವದ ಚರ್ಚೆ ನಡೆದಿದೆ. ಈ ಕುರಿತು ಕೇಂದ್ರದ ಬೃಹತ್ ಕೈಗಾರಿಕೆ & ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೇ ದೇಶದ ಸುಸ್ಥಿರ ಬೆಳವಣಿಗೆ ಉತ್ತೇಜಿಸುವ ಹಾಗೂ ವಿಕಸಿತ ಭಾರತ-2047 ದೃಷ್ಟಿಕೋನದಲ್ಲಿ ಮುನ್ನಡೆಸುವ ಭವಿಷ್ಯತ್ತಿನ ಕೇಂದ್ರ ಬಜೆಟ್ ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ ಎಂದು ಸಚಿವ ಎಚ್ಡಿಕೆ ಅವರು ತಿಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳ ಚುನಾವಣೆ ಜೊತೆಗೆ ಕೇಂದ್ರಾಡಳಿತ ಪ್ರದೇಶ ಪುದುಚೆರಿ ಎಲೆಕ್ಷನ್ ಕೂಡ ನಡೆಯಲಿದೆ. ಈ ಸಮಯದಲ್ಲಿ ಮಂಡನೆ ಆಗಿರುವ ಕೇಂದ್ರ ಬಜೆಟ್ ಸಾಕಷ್ಟು ಗಮನ ಕೂಡ ಸೆಳೆದಿತ್ತು.
ಯಾವ ಕ್ಷೇತ್ರಕ್ಕೆ ಹೆಚ್ಚು ಒತ್ತು?
ಜಾಗತಿಕ ಮಟ್ಟದಲ್ಲಿ ಯುದ್ಧ ಹಾಗೂ ತಿಕ್ಕಾಟ ನಡೆಯುತ್ತಿರುವ ಸಮಯದಲ್ಲಿ ಭಾರತದ ಬಜೆಟ್ ಎಲ್ಲವನ್ನೂ ಸಮತೋಲನದಲ್ಲಿ ತೂಗಿಸಿಕೊಂಡು ಹೋಗಿದೆ. ಅದರಲ್ಲೂ ಸಾರಿಗೆ ಕ್ಷೇತ್ರಕ್ಕೆ ಈ ಬಾರಿ ಬಜೆಟ್ನಲ್ಲಿ ಅತಿಹೆಚ್ಚು ಎಂದರೆ ಸುಮಾರು 6 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆಯನ್ನ ಮಾಡಲಾಗಿದೆ. ಹಾಗೇ 5 ಲಕ್ಷ 94 ಸಾವಿರ ಕೋಟಿ ರೂಪಾಯಿ ಪಡೆದ ರಕ್ಷಣಾ ಕ್ಷೇತ್ರವು ಪಟ್ಟಿಯ 2ನೇ ಸ್ಥಾನದಲ್ಲಿ ಇದೆ.
ಇನ್ನುಳಿದಂತೆ ಗ್ರಾಮೀಣ ಅಭಿವೃದ್ಧಿಗಾಗಿ 2,73,108 ಕೋಟಿ ರೂಪಾಯಿ & ಗೃಹ ಸಚಿವಾಲಯಕ್ಕೆ 2,55,234 ಕೋಟಿ ರೂಪಾಯಿ ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ. ಇದೇ ಸಮಯದಲ್ಲೇ ಸೆಮಿಕಂಡಕ್ಟರ್ ವಲಯಕ್ಕೆ ಇನ್ನಷ್ಟು ಬಲ ತುಂಬಲು ಬರೋಬ್ಬರಿ 40,000 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿರುವುದು ಭವಿಷ್ಯದ ದೃಷ್ಟಿಯಿಂದ ದೊಡ್ಡ ಸಾಧನೆ ಆಗಲಿದೆ. ಈ ವಲಯ ಜಗತ್ತಿನಲ್ಲಿ ಸಾಕಷ್ಟು ಸಂಪತ್ತು ವೃದ್ಧಿಸುವ ಸಾಮರ್ಥ್ಯ ಹೊಂದಿದೆ ಎಂಬುದು ತುಂಬಾ ಮುಖ್ಯವಾದ ವಿಚಾರ.












Click it and Unblock the Notifications