ಸದನದಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ ಕುಮಾರಸ್ವಾಮಿ?
ಬೆಂಗಳೂರು, ಜುಲೈ 09 : 10 ಕಾಂಗ್ರೆಸ್, 3 ಜೆಡಿಎಸ್ ಶಾಸಕರ ರಾಜೀನಾಮೆ ಬಳಿಕ ಕರ್ನಾಟಕದ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡುವ ಸಾಧ್ಯತೆ ಇದೆ.
ರಾಜೀನಾಮೆ ನೀಡಿರುವ ಶಾಸಕರಿಗೆ ಹಿನ್ನಡೆ ಉಂಟು ಮಾಡಲು ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡಲು ಚಿಂತನೆ ನಡೆಸಿದ್ದಾರೆ. ಜುಲೈ 12ರಂದು ವಿಧಾನಸಭೆ ಅಧಿವೇಶನ ಆರಂಭವಾಗಲಿದೆ.
ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ರಾಜೀನಾಮೆ ನೀಡಿರುವ ಶಾಸಕರಿಗೂ ವಿಪ್ ಜಾರಿ ಮಾಡಲಾಗುತ್ತದೆ. ವಿಪ್ ಜಾರಿಮಾಡಿದಾಗ ಶಾಸಕರು ಸರ್ಕಾರದ ಪರವಾಗಿ ಮತ ಹಾಕದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಲು ಅವಕಾಶವಿದೆ.

ರಾಜೀನಾಮೆ ನೀಡಿರುವ ಶಾಸಕರಿಗೆ ಹಿನ್ನಡೆ ಉಂಟು ಮಾಡಲು ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಕಾನೂನು ತಜ್ಞರ ಸಲಹೆಯನ್ನು ಅವರು ಪಡೆದಿದ್ದು, ಎಚ್.ಡಿ.ದೇವೇಗೌಡರ ಜೊತೆಗೂ ಈ ಕುರಿತು ಮಾತುಕತೆ ನಡೆಸಿದ್ದಾರೆ.
ವಿಪ್ ಜಾರಿಗೊಳಿಸಿದ ವೇಳೆ ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಮತ ಹಾಕುವಂತಿಲ್ಲ. ಸದನಕ್ಕೆ ಗೈರು ಹಾಜರಾಗುವಂತಿಲ್ಲ. ಆದ್ದರಿಂದ, ರಾಜೀನಾಮೆ ನೀಡಿರುವ ಶಾಸಕರು ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಸರ್ಕಾರ ಉರುಳಿದರೂ ಶಾಸಕರಿಗೆ ತಕ್ಕ ಪಾಠ ಕಲಿಸಲು ಉಭಯ ಪಕ್ಷಗಳು ಮುಂದಾಗಿವೆ.
ಜುಲೈ 12ರಂದು ಅಧಿವೇಶನ ಆರಂಭವಾದಾಗ ಪ್ರತಿಪಕ್ಷ ಬಿಜೆಪಿ ವಿಶ್ವಾಸಮತ ಯಾಚನೆ ಮಾಡಲು ಒತ್ತಾಯ ಮಾಡಬಹುದು. ಅದಕ್ಕೂ ಮೊದಲು ಕುಮಾರಸ್ವಾಮಿ ಅವರೇ ವಿಶ್ವಾಸಮತ ಯಾಚನೆಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications