ಕುಮಾರಸ್ವಾಮಿಗೆ ಮಮತಾ ಬ್ಯಾನರ್ಜಿ ಸ್ಪೂರ್ತಿಯಾಗಿದ್ದು ಯಾವ ಕಾರಣಕ್ಕೆ?
ಮುಂಬರುವ ರಾಜ್ಯ ಅಸೆಂಬ್ಲಿ ಚುನಾವಣೆಗೆ ಪೂರ್ವತಯಾರಿ ಆರಂಭಿಸಿರುವ ಜೆಡಿಎಸ್, ಪ್ರಮುಖವಾಗಿ ಕಾವೇರಿ ಜಲಾಯನ ಪ್ರದೇಶದ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯ ಕೆಲಸಕ್ಕೆ ಮುಂದಾಗಿದೆ. ಈ ಸಂಬಂಧ, ದೇವೇಗೌಡ್ರು ಮತ್ತು ಕುಮಾರಸ್ವಾಮಿ ಸತತ ಸಭೆಗಳನ್ನು ನಡೆಸುತ್ತಿದ್ದಾರೆ.
ಮೈಸೂರಿನ ಪ್ರಭಾವೀ ಮುಖಂಡ ಜಿ.ಟಿ.ದೇವೇಗೌಡ ಮತ್ತು ಅವರ ಪುತ್ರ ಪಕ್ಷ ತೊರೆಯುವ ವಿಚಾರದ ಬಗ್ಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, "ಪಕ್ಷ ಯಾರನ್ನೂ ನಂಬಿಕೊಂಡಿಲ್ಲ, ನಂಬಿಕೊಳ್ಳುವುದೂ ಇಲ್ಲ, ನನಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಸ್ಪೂರ್ತಿ ಎಂದು ಹೇಳಿದ್ದಾರೆ.
3 ಪಾಲಿಕೆ ಚುನಾವಣೆ: ಎಚ್ಡಿಕೆ ಇಚ್ಚಾಶಕ್ತಿ ಕೊರತೆಯೇ ಜೆಡಿಎಸ್ ಲೆಕ್ಕಕ್ಕಿಲ್ಲ ಎನ್ನುವುದಕ್ಕೆ ಕಾರಣ?
ಪಕ್ಷದ ಇಬ್ಬರು ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷ ಸಂಘಟನೆಗೆ ಹೆಚ್ಚಾಗಿ ಬಳಸುವ ಸುಳಿವನ್ನು ನೀಡಿದ ಕುಮಾರಸ್ವಾಮಿ, ಸ್ವಲ್ಪ ಟ್ರೈನಿಂಗ್ ಆಗಬೇಕಲ್ವಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ನಿರ್ಲಿಪ್ತರಾಗಿರುವ ಪಕ್ಷದ ಕಾರ್ಯಕರ್ತರ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ನಾನೇ ಆಖಾಡಕ್ಕೆ ಇಳಿಯಲಿದ್ದೇನೆ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಪಾದಯಾತ್ರೆ ಮಾಡುವ ಚಿಂತನೆಯಲ್ಲಿರುವ, ಬಿಜೆಪಿಯ ಪ್ರಬಲ ಪೈಪೋಟಿಯ ನಡುವೆಯೂ ಮಮತಾ ಬ್ಯಾನರ್ಜಿ ನನಗೆ ಸ್ಪೂರ್ತಿ ಎಂದು ಹೇಳಿದ್ದಾರೆ.
ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ: ಮಾಜಿ ಸಿಎಂ ಎಚ್ಡಿಕೆ ವ್ಯಂಗ್ಯ
ಇದ್ಯಾವುದಕ್ಕೂ ಮಮತಾ ಬ್ಯಾನರ್ಜಿ ಜಗ್ಗಲಿಲ್ಲ, ಹೆದರಲಿಲ್ಲ ಎಂದ ಕುಮಾರಸ್ವಾಮಿ
ಈ ಬಗ್ಗೆ ಮಾತನಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿ, "ಕಳೆದ ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಯನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ. ಬಿಜೆಪಿ ತನಗಿರುವ ಎಲ್ಲಾ ಶಕ್ತಿಯನ್ನು ಪ್ರದರ್ಶಿಸಿತು. ಎಲ್ಲಾ ತನಿಖೆ ಸಂಸ್ಥೆಗಳ ಲಾಭವನ್ನು ಪಡೆದುಕೊಂಡಿತು. ಏನಾದರೂ ಮಾಡಿ, ಮಮತಾ ಬ್ಯಾನರ್ಜಿಯವರನ್ನು ಸೋಲಿಸುವ ಪಣತೊಟ್ಟಿತ್ತು. ಆದರೆ, ಇದ್ಯಾವುದಕ್ಕೂ ಮಮತಾ ಜಗ್ಗಲಿಲ್ಲ, ಹೆದರಲಿಲ್ಲ"ಎಂದು ಎಚ್ಡಿಕೆ ಹೇಳಿದರು.
ಪಕ್ಷ ಸಂಘಟನೆಯ ವಿಚಾರದಲ್ಲಿ ನನಗೆ ಅವರೇ ಸ್ಪೂರ್ತಿ, ಅದೇ ದಾರಿಯಲ್ಲಿ ನಾನೂ ಸಾಗುತ್ತೇನೆ
"ತೃಣಮೂಲ ಕಾಂಗ್ರೆಸ್ಸಿನ ಸುಮಾರು ಎಪ್ಪತ್ತಕ್ಕೂ ಹೆಚ್ಚು ಶಾಸಕರು ಪಕ್ಷವನ್ನು ಚುನಾವಣೆಯ ಹೊಸ್ತಿಲಲ್ಲಿ ತೊರೆದರು. ಆದರೆ ಮಮತಾ ಬ್ಯಾನರ್ಜಿಯವರು ಇದರಿಂದ ಧೃತಿಗೆಡಲಿಲ್ಲ. ಇನ್ನಷ್ಟು ಶಕ್ತಿಶಾಲಿ ಮಹಿಳೆಯಾಗಿ ಹೊರಹೊಮ್ಮಿದರು. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದು, ಬಿಜೆಪಿಗೆ ಪಾಠ ಕಲಿಸಿದರು. ಹಾಗಾಗಿ, ಪಕ್ಷ ಸಂಘಟನೆಯ ವಿಚಾರದಲ್ಲಿ ನನಗೆ ಅವರೇ ಸ್ಪೂರ್ತಿ, ಅದೇ ದಾರಿಯಲ್ಲಿ ನಾನೂ ಸಾಗುತ್ತೇನೆ"ಎಂದು ಕುಮಾರಸ್ವಾಮಿ ಹೇಳಿದರು.
ಜಿ.ಟಿ.ದೇವೇಗೌಡ ಪಕ್ಷ ತೊರೆಯಲು ಸಜ್ಜಾಗುತ್ತಿರುವುದನ್ನು ಪ್ರಸ್ತಾವಿಸಿದ ಕುಮಾರಸ್ವಾಮಿ
ಪರೋಕ್ಷವಾಗಿ ಜಿ.ಟಿ.ದೇವೇಗೌಡ ಪಕ್ಷ ತೊರೆಯಲು ಸಜ್ಜಾಗುತ್ತಿರುವುದನ್ನು ಪ್ರಸ್ತಾವಿಸಿದ ಕುಮಾರಸ್ವಾಮಿ, "ಪಕ್ಷದಿಂದ ಹೊರ ಹೋಗಲು ಬಯಸುವವರು ಹೋಗಲಿ. ನಾನು ಹೆದರುವುದಿಲ್ಲ. ಹೊಸಬರನ್ನು ಕರೆತಂದು ಪಕ್ಷ ಕಟ್ಟುತ್ತೇನೆ. ಮಮತಾ ಬ್ಯಾನರ್ಜಿ ಮಾಡಿದ್ದನ್ನು ನಾನು ಇಲ್ಲೂ ಪ್ರಯೋಗಿಸುತ್ತೇನೆ"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Recommended Video
ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತ ಪಡಿಸಿದ ಕುಮಾರಸ್ವಾಮಿ
ಪಕ್ಷದ ಸಂಘಟನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡುವ ಬಗ್ಗೆ ಮುನ್ಸೂಚನೆ ನೀಡಿರುವ ಕುಮಾರಸ್ವಾಮಿ, "ಪಕ್ಷಕ್ಕಾಗಿ ಕೆಲಸ ಮಾಡದ ಕಾರ್ಯಕರ್ತರನ್ನು ಹೊರಗೆ ಕಳುಹಿಸಿ, ಹೊಸಬರನ್ನು ನೇಮಿಸುತ್ತೇನೆ. ಇವರಿಗಾಗಿ ಎರಡು ತಿಂಗಳ ಕಾರ್ಯಾಗಾರವನ್ನು ನಡೆಸಲಾಗುವುದು. 120ಸ್ಥಾನವನ್ನು ಗೆಲ್ಲುವ ಟಾರ್ಗೆಟ್ ಅನ್ನು ಇಟ್ಟುಕೊಂಡಿದ್ದೇವೆ"ಎಂದು ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಕುಮಾರಸ್ವಾಮಿ ವ್ಯಕ್ತ ಪಡಿಸಿದ್ದಾರೆ.
ಆ ಮೂಲಕ ಪಕ್ಷ ತೊರೆಯುವವರನ್ನು ತಡೆಯಲು ಹೋಗುವುದಿಲ್ಲ ಎನ್ನುವುದನ್ನು ಸಾರಿರುವ ಎಚ್.ಡಿ. ಕುಮಾರಸ್ವಾಮಿ, ಚುನಾವಣೆಯ ವೇಳೆ ಮತ್ತಷ್ಟು ಮುಖಂಡರು ಪಾರ್ಟಿ ತೊರೆದರೂ, ಅದಕ್ಕೆ ಹೆಚ್ಚಿನ ಮಹತ್ವವನ್ನು ಕೊಡುವುದಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.