ಡಾ. ಮಂಜುನಾಥ್ ರಾಜಕೀಯಕ್ಕೆ; ಗೌಡರ ಅಚ್ಚರಿಯ ಹೇಳಿಕೆ!
ಬೆಂಗಳೂರು, ಮಾರ್ಚ್ 04: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ರಾಜಕೀಯಕ್ಕೆ ಬರುತ್ತಾರೆಯೇ?. 2024ರ ಲೋಕಸಭೆ ಚುನಾವಣೆಗೆ ಅವರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಗಳು ಹಬ್ಬಿವೆ.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೋಮವಾರ ಜೆ. ಪಿ. ಭವನದಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಸಭೆಯನ್ನು ನಡೆಸಿದರು. ಸಭೆಯ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ಡಾ. ಸಿ. ಎನ್. ಮಂಜುನಾಥ್ ರಾಜಕೀಯಕ್ಕೆ ಬರುವ ಕುರಿತು ಸಹ ಹೇಳಿಕೆ ನೀಡಿದರು.

ಅಳಿಯ ಡಾ. ಸಿ. ಎನ್. ಮಂಜುನಾಥ್ ರಾಜಕೀಯಕ್ಕೆ ಬರುವ ಕುರಿತು ಮಾತನಾಡಿದ ದೇವೇಗೌಡರು, "ಡಾ. ಸಿ. ಎನ್. ಮಂಜುನಾಥ್ ರಾಜಕಾರಣಕ್ಕೆ ಬರುವುದಕ್ಕೆ ಸಮ್ಮತಿ ಸೂಚಿಸುವುದಿಲ್ಲ" ಎಂದು ಹೇಳಿದರು.
"ಮಂಜುನಾಥ್ ಅವರು ದೇಶ, ವಿದೇಶಗಳಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಮುಗಿಲೆತ್ತರಕ್ಕೆ ಹೆಸರು ಮಾಡಿರುವ ಅವರು ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಬರುವುದು ಸರಿಯಲ್ಲ. ಅವರಿಗೆ ಈಗ ಒಂದು ಒಳ್ಳೆಯ ಸ್ಥಾನವಿದೆ" ಎಂದರು.
ಅವರು ಸಹ ಸಮ್ಮತಿ ಸೂಚಿಸುವುದಿಲ್ಲ: "ಡಾ. ಸಿ. ಎನ್. ಮಂಜುನಾಥ್ ಅವರು ಸಹ ರಾಜಕೀಯಕ್ಕೆ ಬರುವುದಕ್ಕೆ ಒಪ್ಪಿಗೆ ನೀಡುವುದಿಲ್ಲ ಅಂದು ಕೊಂಡಿದ್ದೇನೆ. ಈ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿ ಎಂದು ನಾನು ಸಹ ಒತ್ತಾಯಿಸುತ್ತಿಲ್ಲ. ವ್ಯಕ್ತಿತ್ವಕ್ಕೆ ಕಳಂಕ ತರುವ ತೀರ್ಮಾನವನ್ನು ನಾನು ಮಾಡುವುದಿಲ್ಲ" ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ. ಸಿ. ಎನ್. ಮಂಜುನಾಥ್ ಅವಧಿ ಜನವರಿ 31ಕ್ಕೆ ಮುಕ್ತಾಯವಾಗಿತ್ತು. ಅವರು ನಿರ್ದೇಶಕ ಸ್ಥಾನದಿಂದ ನಿವೃತ್ತರಾಗಿದ್ದರು. ಆ ಬಳಿಕ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಗಳು ಎಲ್ಲಾ ಕಡೆ ಹಬ್ಬಿದ್ದವು. ಆದರೆ ಡಾ. ಮಂಜುನಾಥ್ ಇದನ್ನು ನಿರಾಕರಿಸುತ್ತಲೇ ಬಂದಿದ್ದರು.
ಡಾ. ಸಿ. ಎನ್. ಮಂಜುನಾಥ್ 2007ರಿಂದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. 2023ರ ಜುಲೈನಲ್ಲಿಯೇ ಅವರ ಸೇವಾವಧಿ ಮುಕ್ತಾಯಗೊಂಡಿತ್ತು. ಆಸ್ಪತ್ರೆಯ ಸಿಬ್ಬಂದಿ ಮತ್ತು ಹಲವಾರು ಗಣ್ಯರ ಒತ್ತಾಯದ ಮೇರೆಗೆ ಅವರ ಸೇವೆಯನ್ನು ವಿಸ್ತರಣೆ ಮಾಡಲಾಗಿತ್ತು.
ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಆದ್ದರಿಂದ ಡಾ. ಸಿ. ಎನ್. ಮಂಜುನಾಥ್ ಬೆಂಗಳೂರು ನಗರದ ಕ್ಷೇತ್ರವೊಂದರಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಡಾ. ಸಿ. ಎನ್. ಮಂಜುನಾಥ್ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ ವಿವಿಧ ಮಾಧ್ಯಮಗಳಲ್ಲಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಬರುತ್ತಲೇ ಇದೆ.
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಡಾ. ಸಿ. ಎನ್. ಮಂಜುನಾಥ್, "ರಾಜಕೀಯಕ್ಕೆ ಬರುವ ವಿಚಾರದಲ್ಲಿ ನನ್ನಲ್ಲಿ ಇನ್ನೂ ಗೊಂದಲವಿದೆ. ಪತ್ನಿ, ಮಕ್ಕಳು ಹಾಗೂ ಕುಟುಂಬದ ಎಲ್ಲರೊಂದಿಗೆ ಇನ್ನೂ ಚರ್ಚಿಸಬೇಕಿದೆ. ಸದ್ಯಕ್ಕೆ ಯಾವುದೇ ತೀರ್ಮಾನವನ್ನೂ ಮಾಡಿಲ್ಲ" ಎಂದು ಹೇಳಿದ್ದರು.
"ಜನರು ಮತ್ತು ಮಾಧ್ಯಮದವರು ನನ್ನ ಮೇಲಿನ ಅಭಿಮಾನದಿಂದ ನನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತುಗಳನ್ನು ಆಡುತ್ತಿದ್ದಾರೆ. ಅಭಿವೃದ್ಧಿಯ ರಾಜಕೀಯದಲ್ಲಿ ನನಗೆ ಆಸಕ್ತಿ ಇದೆ. ಆದರೆ ರಾಜಕೀಯಕ್ಕೆ ಬರಬೇಕೋ ಅಥವ ಬೇಡವೋ ಎಂಬ ಬಗ್ಗೆ ಗೊಂದಲವಿದೆ. ಹಾಗೆಂದು ನಾನು ಭಯಪಡುತ್ತಿದ್ದೇನೆ ಎಂದರ್ಥವಲ್ಲ" ಎಂದು ಸ್ಪಷ್ಟಪಡಿಸಿದ್ದರು.












Click it and Unblock the Notifications