"ದೇವೇಗೌಡರು ವಿಷ ಕುಡಿಯುವುದನ್ನು ಕಾಯುತ್ತಿದ್ದೇನೆ"
ಬೆಂಗಳೂರು, ಏ. 2 : ಲೋಕಸಭೆ ಚುನಾವಣೆ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ "ದೇವೇಗೌಡರು ವಿಷ ಕುಡಿಯುವುದನ್ನೇ ಕಾಯುತ್ತಿದ್ದೇನೆ" ಎಂದು ನೀಡಿರುವ ಹೇಳಿಕೆಗೆ ಬಗ್ಗೆ ಗುಡುಗಿರುವ ದೇವೇಗೌಡರು "ನಾನ್ ಸೆನ್ಸ್, ರಬ್ಬಿಶ್" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಉಭಯ ನಾಯಕರ ಮಧ್ಯೆ ಮಾತಿನ ಮಲ್ಲಯುದ್ಧ ಆರಂಭವಾಗಿದೆ.
ಬುಧವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, "ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ, ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸದಿದ್ದರೆ ವಿಷ ಕುಡಿಯುತ್ತೇನೆ ಎಂದು ಕಳೆದ ಚುನಾವಣೆಯಲ್ಲಿ ದೇವೇಗೌಡರು ಹೇಳಿಕೆ ನೀಡಿದ್ದರು. ಆದರೆ ಈ ವರೆಗೂ ಕುಡಿದಿಲ್ಲ. ದೇವೇಗೌಡರು ವಿಷ ಕುಡಿಯುವುದನ್ನೇ ಕಾಯುತ್ತಿದ್ದೇನೆ" ಎಂದು ಹೇಳಿದ್ದರು.

ಇದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ದೇವೇಗೌಡರು ಇಂತಹ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಇದು "ನಾನ್ ಸೆನ್ಸ್, ರಬ್ಬಿಶ್" ಯಾರ್ರೀ ಅವ್ರು ನನ್ನ ಬಗ್ಗೆ ಮಾತನಾಡೋಕೆ ಎಂದು ಖರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದಲ್ಲಿದ್ದಾಗ ನಾನು ಈ ಹೇಳಿಕೆ ನೀಡಿದ್ದೆ. ಅದನ್ನು ಯಾಕೆ ಕೆದಕುತ್ತಾರೆ ಎಂದು ಪರವೇಶ್ವರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]
ಪರಮೇಶ್ವರ್ ಹೇಳಿದ್ದೇನು ? : * "ಜೆಡಿಎಸ್ ಈ ಬಾರಿ ಅಧಿಕಾರಕ್ಕೆ ಬರುತ್ತದೆ. ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸದಿದ್ದರೆ ವಿಷ ಕುಡಿಯುತ್ತೇನೆ ಎಂದು ದೇವೇಗೌಡರು ಹೇಳಿದ್ದರು". ಆದರೆ, "ಈ ವರೆಗೂ ಕುಡಿದಿಲ್ಲ ಅವರು ವಿಷ ಕುಡಿಯುವುದನ್ನೇ ನಾನು ಕಾಯುತ್ತಿದ್ದೇನೆ" ಎಂದು ಪರಮೇಶ್ವರ್ ಹೇಳಿದ್ದರು.
* "ಮುಸ್ಲಿಂಮರನ್ನು ಓಲೈಸುವ ಸಲುವಾಗಿ ಮುಂದಿನ ಜನ್ಮದಲ್ಲಿ ತಾವು ಮುಸ್ಲಿಂಮರಾಗಿ ಹುಟ್ಟುತ್ತೇನೆ ಎಂದು ಗೌಡರು ಹೇಳಿದ್ದರು. ಈ ಜನ್ಮದಲ್ಲೇ ಅವರು ಮುಸ್ಲಿಂ ಆಗಿ ಮತಾಂತರಗೊಳ್ಳಲಿ. ನಮ್ಮ ರೋಷನ್ ಬೇಗ್ ಅವರೇ ಅವರನ್ನು ಸಮುದಾಯಕ್ಕೆ ಬರಮಾಡಿಕೊಳ್ಳುತ್ತಾರೆ" ಎಂದು ಪರವೇಶ್ವರ್ ವ್ಯಂಗ್ಯವಾಡಿದ್ದರು.
* "ದೇವೇಗೌಡರು ತಮ್ಮ ಮಗ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಳುವ ಆಸ್ತಿ ನೀಡಿದ್ದಾರೆ. ಆದ್ದರಿಂದ ದೇವೇಗೌಡರು ಮತ್ತು ಕುಮಾರಸ್ವಾಮಿ ಹೋದಲ್ಲೆಲ್ಲ ಕಣ್ಣೀರು ಹಾಕುತ್ತಾರೆ. ಹೀಗೆ ಕಣ್ಣೀರಿನ ರಾಜಕಾರಣಕ್ಕೆ ಜನರು ಮತ ಹಾಕುವುದಿಲ್ಲ ಎಂದು ಕುಟುಕಿದ್ದರು."
ದೇವೇಗೌಡರ ತಿರುಗೇಟು : ಪರಮೇಶ್ವರ್ ಹೇಳಿಕೆಗೆ ದೇವೇಗೌಡರು ತಮ್ಮ ಎಂದಿನ ಶೈಲಿಯಲ್ಲೇ ತಿರುಗೇಟು ನೀಡಿದ್ದಾರೆ. "ಪರಮೇಶ್ವರ್ ಹೇಳಿಕೆ ನಾನ್ ಸೆನ್ಸ್, ರಬ್ಬೀಶ್" ಎಂದು ಹೇಳಿರುವ ದೇವೇಗೌಡರು. ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ನಾನು ಈ ಹೇಳಿಕೆ ನೀಡಿದ್ದೆ. ಪರಮೇಶ್ವರ್ ಈ ಹೇಳಿಕೆಯನ್ನು ಈಗ ಏಕೆ ಕೆದಕುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.











Click it and Unblock the Notifications