ಬಿಎಸ್ವೈ ವಿರುದ್ಧದ ಎಫ್ಐಆರ್ ರದ್ದು : ಯಾರು, ಏನು ಹೇಳಿದರು?
ಬೆಂಗಳೂರು, ಜನವರಿ 06 : ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲು ಮಾಡಿದ್ದ 15 ಎಫ್ಐಆರ್ಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಯಡಿಯೂರಪ್ಪ ಅವರಿಗೆ ಬಹುದೊಡ್ಡ ಗೆಲುವು ದೊರೆತಿದೆ.
ನ್ಯಾಯಮೂರ್ತಿ ರತ್ನಕಲಾ ಅವರ ಏಕಸದಸ್ಯ ಪೀಠ ಮಂಗಳವಾರ ಈ ಕುರಿತು ಆದೇಶ ಹೊರಡಿಸಿದೆ. 2015ರ ಜೂನ್ 19 ರಿಂದ 27ರ ತನಕ ಲೋಕಾಯುಕ್ತ ಪೊಲೀಸರು ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ದಾಖಲಿಸಿದ್ದ 15 ಎಫ್ಐಆರ್ಗಳನ್ನು ಕೋರ್ಟ್ ರದ್ದುಪಡಿಸಿದೆ. [ಯಡಿಯೂರಪ್ಪ ವಿರುದ್ಧದ 15 FIR ರದ್ದು]
ಸಿಎಜಿ ವರದಿ ಹೊರತುಪಡಿಸಿ ಇತರೆ ಅಂಶಗಳ ಆಧಾರದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅವಕಾಶಗಳನ್ನು ಮಕ್ತವಾಗಿಡಲಾಗಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಸಿಎಜಿ ವರದಿಯ ಬಗ್ಗೆ ಸದನದಲ್ಲಿ ನಿರ್ಧಾರ ಕೈಗೊಳ್ಳಬೇಕು, ಸದನ ಒಪ್ಪಿಗೆ ನೀಡಿದರೆ ಮಾತ್ರ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಬಹುದು ಎಂದು ಬಿಎಸ್ವೈ ಪರ ವಕೀಲರು ಕೋರ್ಟ್ನಲ್ಲಿ ವಾದ ಮಾಡಿದ್ದರು. [ಯಡಿಯೂರಪ್ಪ, ಡಿಕೆಶಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್]
ಯಡಿಯೂರಪ್ಪ ಅವರ ವಿರುದ್ಧದ 15 ಎಫ್ಐಆರ್ ರದ್ದಾಗುತ್ತಿದ್ದಂತೆ ಹಲವು ಕಡೆ ಸಂಭ್ರಮಾಚರಣೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬಿಜೆಪಿಯ ಹಲವು ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು, ಏನು ಹೇಳಿದರು ಚಿತ್ರಗಳಲ್ಲಿ ನೋಡಿ.....
'ಕಾಂಗ್ರೆಸ್ ಷಡ್ಯಂತ್ರದ ಹಾಕಿದ ಕೇಸುಗಳು ವಜಾ'
'ಯಡಿಯೂರಪ್ಪ ಅವರ ವಿರುದ್ಧದ ಎಫ್ಐಆರ್ ರದ್ದಾಗಿರುವುದು ಬಿಜೆಪಿಯ ಕಾನೂನು ಹೋರಾಟಕ್ಕೆ ಸಿಕ್ಕ ಜಯ. ಯಡಿಯೂರಪ್ಪ ಅವರು ಜನನಾಯಕರು. ಕಾಂಗ್ರೆಸ್ ಸರ್ಕಾರದ ಷಡ್ಯಂತ್ರದಿಂದಾಗಿ ಯಡಿಯೂರಪ್ಪ ಅವರ ಮೇಲೆ ಕೇಸು ಹಾಕಲಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
'ವಿನಾಕಾರಣ ಕೇಸು ಹಾಕಿದ್ದರು'
'15 ಕೇಸುಗಳಲ್ಲಿ ಯಡಿಯೂರಪ್ಪ ಅವರು ಖುಲಾಸೆಗೊಂಡಿರುವುದು ಸಂತಸದ ಸಂಗತಿ. ವಿನಾಕಾರಣ ಯಡಿಯೂರಪ್ಪ ಅವರ ವಿರುದ್ಧ ಕೇಸು ಹಾಕಿದವರಿಗೆ ಇದೊಂದು ಪಾಠವಾಗಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
'ಪಕ್ಷದ ಬೆಳವಣಿಗೆಗೆ ಸಹಕಾರಿಯಾಗಿದೆ'
'ಕಾನೂನು ಹೋರಾಟದಲ್ಲಿ ಯಡಿಯೂರಪ್ಪ ಅವರು ಜಯಗಳಿಸಿರುವುದು ಪಕ್ಷದ ಬೆಳವಣಿಗೆಗೆ ಸಹಕಾರಿಯಾಗಿದೆ. ಅವರೊಬ್ಬ ಧೀಮಂತ ನಾಯಕರು. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ' ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
'ವಿರೋಧಿಗಳ ಷಡ್ಯಂತ್ರ'
'ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ವಿರೋಧಿಗಳು ಹೂಡಿದ ಷಡ್ಯಂತ್ರಕ್ಕೆ ನ್ಯಾಯಾಲಯದಲ್ಲಿ ಸೋಲಾಗಿದೆ. 15 ಕೇಸುಗಳಲ್ಲಿ ಯಡಿಯೂರಪ್ಪ ಅವರು ಖುಲಾಸೆಗೊಂಡಿರುವುದು ಪಕ್ಷದ ಬೆಳವಣಿಗೆಗೆ ಸಹಕಾರಿಯಾಗಿದೆ' ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ಅವರ ವಾದವೇನಾಗಿತ್ತು?
ಈ ಪ್ರಕರಣಗಳಲ್ಲಿ ಯಡಿಯೂರಪ್ಪ ಅವರ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್, ಸಂದೀಪ ಎಸ್.ಪಾಟೀಲ, ಅಶೋಕ ಹಾರನಹಳ್ಳಿ ವಾದ ಮಂಡನೆ ಮಾಡಿದ್ದರು. ಸಿಎಜಿ ವರದಿಯ ಆಧಾರದ ಮೇಲೆ ದೂರು ನೀಡಲು ಬರುವುದಿಲ್ಲ. ಸಿಎಜಿ ವರದಿ ಬಗ್ಗೆ ಸದನ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಸದಸನ ವರದಿ ಬರುವ ತನಕ ಅದು ಸಾರ್ವಜನಿಕರ ಮಾಹಿತಿಯಾಗಿರುವುದಿಲ್ಲ. ಆದ್ದರಿಂದ, ದೂರುಗಳನ್ನು ರದ್ದಗೊಳಿಸಬೇಕು ಎಂದು ಯಡಿಯೂರಪ್ಪ ಪರ ವಕೀಲರು ವಾದ ಮಂಡನೆ ಮಾಡಿದ್ದರು.