ನಂದಿಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್ ಒಪ್ಪಿಗೆ
ಬೆಂಗಳೂರು, ಜನವರಿ 13; ಚಿಕ್ಕಬಳ್ಳಾಪುರದ ನಂದಿಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಅನಾರಣಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಕರ್ನಾಟಕ ಹೈಕೋರ್ಟ್ ಪ್ರತಿಮೆ ಅನಾವರಣಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದೆ.
ಆದರೆ ಪ್ರತಿಮೆ ಅನಾವರಣ ಬಿಟ್ಟು ಉಳಿದ ಕಾಮಗಾರಿಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಸೂಚನ ನೀಡಿದೆ. ಹಾಗಾಗಿ ರಾಜ್ಯ ಸರ್ಕಾರ, ಈಶ ಯೋಗ ಕೇಂದ್ರ ಸ್ವಲ್ಪ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. ಜತೆಗೆ ಇದೇ ಜನವರಿ 15ರಂದು ಸಂಕ್ರಾಂತಿಗೆ ನಡೆಸಲು ಉದ್ದೇಶಿದ್ದ ಬೃಹತ್ ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಲೆ ನೇತೃತ್ವದ ಹೈಕೋರ್ಟ್ ವಿಭಾಗೀಯಪೀಠ ಶುಕ್ರವಾರ ವಿಚಾರಣೆ ನಡೆಸಿ ಪ್ರತಿಮೆ ಅನಾವರಣಕ್ಕೆ ಅನುಮತಿ ನೀಡಿತು.

ಅರ್ಜಿದಾರರ ಪರ ವಕೀಲರು, ನಂದಿಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಕಾರ್ಯಕ್ರಮ ಜ.15 ರಂದು ನಿಗದಿಯಾಗಿದೆ. ಉಪರಾಷ್ಟ್ರಪತಿ, ಸಿಎಂ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಪಿಐಎಲ್ ದಾಖಲು ಮಾಡುವ ಮುನ್ನವೇ ಕಾರ್ಯಕ್ರಮ ನಿಗದಿಯಾಗಿದೆ. ಹಾಗಾಗಿ ಅನುಮತಿ ನೀಡಬೇಕು ಎಂದು ಕೋರಿದರು.
ಆ ಮನವಿ ಒಪ್ಪಿದ ನ್ಯಾಯಾಲಯ, ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಿದೆ. ಉಳಿದಂತೆ ಮರಗಳನ್ನು ಕಡಿಯದಂತೆ ಹೈಕೋರ್ಟ್ ನಿರ್ಬಂಧ ಮುಂದುರಿವರಿಸಿದೆ. ಉಳಿದಂತೆ ಯಥಾಸ್ಥಿತಿ ಆದೇಶ ಕೂಡ ಮುಂದುವರಿಯಲಿದೆ. ಮಂಗಳವಾರ ಕೋರ್ಟ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಈಶ ಯೋಗ ಕೇಂದ್ರ ಸೇರಿ ಹದಿನಾರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು.
ಅರ್ಜಿದಾರರ ಆಕ್ಷೇಪವೇಕೆ?; ನಂದಿ ಗಿರಿಧಾಮದ ಬೆಟ್ಟ ಸೇರಿದಂತೆ ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ನರಸಿಂಹ ದೇವರ ವಲಯಕ್ಕೆ ಸೇರಿವೆ. ಈ ಬೆಟ್ಟಗಳ ಸಾಲಿನಲ್ಲಿ ಔಷಧೀಯ ಆಯುರ್ವೇದ ಸಸ್ಯಗಳು ದಟ್ಟವಾಗಿದೆ.
ನಂದಿ ಬೆಟ್ಟಕ್ಕೆ ಹೊಂದಿಕೊಂಡಿರುವ ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಸ್ವಯಂ ಘೋಷಿತ ದೇವ ಮಾನವ ಎಂದು ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರಿಗೆ ಸೇರಿದ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿದಂತೆ ವಿವಿಧ ಕಾಯಿದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರ್ಕಾರ ಜಮೀನು ಮಂಜೂರು ಮಾಡಿದೆ.
ಅಲ್ಲದೆ, ಈ ಪ್ರದೇಶವನ್ನು ಗ್ರೀನ್ ಬೆಲ್ಟ್ (ವಾಣಿಜ್ಯ ಉದ್ದೇಶಕ್ಕೆ ಬಳಸದಂತೆ) ಎಂದು ಘೋಷಣೆ ಮಾಡಲಾಗಿದ್ದು, ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬೇಕಾಗಿದ್ದ ಸರ್ಕಾರದ ಎ-ಖರಾಬು ಮತ್ತು ಬಿ-ಕರಾಬು ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಜಿಲ್ಲಾಡಳಿತ ಹಸ್ತಾಂತರ ಮಾಡಿದೆ.
ಇದೀಗ ಇಶಾ ಪ್ರತಿಷ್ಠಾನ ಪ್ರಸ್ತುತ ಪರಿಸರ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ದೊಡ್ಡ ಯಂತ್ರೋಪಕರಣಗಳಿಂದ ಭೂಮಿಯನ್ನು ವಿರೂಪಗೊಳಿಸಲಾಗಿದೆ. ನರಸಿಂಹ ದೇವರ ಬೆಟ್ಟದ ವಲಯವನ್ನು ಸಂಪೂರ್ಣ ನಾಶ ಮಾಡುವುದಕ್ಕೆ ಮುಂದಾಗಿದೆ.
ಇದರಿಂದ ಜಲ ಮೂಲಗಳು ಸೇರಿದಂತೆ ಇಡೀ ಪರಿಸರ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳ್ಳಲಿದೆ. ಈ ಭಾಗದಲ್ಲಿರುವ ಸುತ್ತ ಮುತ್ತಲ ಗ್ರಾಮಗಳಲ್ಲಿನ ಜನ ಜೀವನೋಪಾಯಕ್ಕಾಗಿ ಹೈನುಗಾರಿಕೆ ಮತ್ತು ಕೃಷಿಯನ್ನು ಅವಲಂಭಿಸಿದ್ದು, ಈ ಪ್ರದೇಶ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡಲ್ಲಿ ಜನ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ಇದೇ ಬೆಟ್ಟಗಳ ಸಾಲಿನಲ್ಲಿಯೇ ಉತ್ತರ ಪಿನಾಕಿನಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಮೂಲವಾಗಿವೆ. ಜತೆಗೆ, ಈ ಬೆಟ್ಟಗಳಲ್ಲಿನ ನೀರು ಸುತ್ತಮುತ್ತಲ ಸುಮಾರು 35ಕ್ಕೂ ಹೆಚ್ಚು ಹಳ್ಳಿಗಳ ಕೆರೆಗಳನ್ನು ತುಂಬಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಇದೀಗ ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುವುದರಿಂದ ಇದು ಪರಿಸರದ ಮೇಲೆ ಗಂಭೀರ ಪರಿಣಾಮ ಭಿರಲಿದೆ ಎಂದು ವಾದಿಸಿದರು.
ಪರಿಸರ ಸೂಕ್ಷ್ಮ ವಲಯ ವಾಣಿಜ್ಯ ಉದ್ದೇಶಕ್ಕೆ ಬಳಕೆ. ಸರ್ಕಾರ ಕಾನೂನುಬಾಹಿರವಾಗಿ ಜಮೀನು ಮಂಜೂರು ಮಾಡಿದೆ. ನಂದಿ ಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದೆ ಎಂದರು.












Click it and Unblock the Notifications