ಧಾರವಾಡ, ಕಲಬುರಗಿ ಪೀಠ ಸ್ಥಾಪನೆ ಪ್ರಶ್ನಿಸಿದ್ದ ಪಿಐಎಲ್ ವಜಾ
ಬೆಂಗಳೂರು, ಮೇ 31; ಹದಿನೈದು ವರ್ಷಗಳ ಹಿಂದೆ ಧಾರವಾಡ ಹಾಗೂ ಕಲಬುರಗಿಗಳಲ್ಲಿ ಕರ್ನಾಟಕ ಹೈಕೋರ್ಟ್ ಪೀಠಗಳ ಸ್ಥಾಪನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಧಾರವಾಡ ಮತ್ತು ಕಲಬುರಗಿ ಪೀಠಗಳ ಸ್ಥಾಪನೆ ಅಗತ್ಯತೆ ಮತ್ತು ಅವುಗಳ ಆರಂಭದಿಂದ ನ್ಯಾಯದಾನದಲ್ಲಿ ಆಗಿರುವ ಬದಲಾವಣೆಗಳು, ಸಾರ್ವಜನಿಕರಿಗೆ ಆಗುವ ಅನುಕೂಲಗಳು ಹೀಗೆ ನಾನಾ ಅಂಶಗಳನ್ನು ಪ್ರಸ್ತಾಪಿಸಿದೆ.

ಧಾರವಾಡ ಹಾಗೂ ಕಲಬುರಗಿ ಪೀಠಗಳ ಸ್ಥಾಪನೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಮನೆ ಬಾಗಿಲಿಗೆ ನ್ಯಾಯ ದೊರಕುತ್ತಿದೆ. ಯುವ ವಕೀಲರಿಗೆ ಉದ್ಯೋಗಾವಕಾಶ ದೊರಕುತ್ತಿದೆ. ಆ ಮೂಲಕ ನ್ಯಾಯದಾನ ವ್ಯವಸ್ಥೆಯ ಉದ್ದೇಶ ಈಡೇರಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ವಕೀಲ ಎನ್. ಪಿ. ಅಮೃತೇಶ್ 2014ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಹಿರಿಯ ನ್ಯಾ. ಬಿ. ವೀರಪ್ಪ ಮತ್ತು ನ್ಯಾ. ಕೆ. ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ 196 ಪುಟಗಳ ತೀರ್ಪಿನಲ್ಲಿ ಆದೇಶ ನೀಡಿದೆ. ಈ ಎರಡು ಪೀಠಗಳಿಂದ ಬಡ ಕ್ಷಕಿದಾರರಿಗೆ ತ್ವರಿತ ನ್ಯಾಯದಾನವಾಗುತ್ತಿದೆ, ವ್ಯಾಜ್ಯ ವೆಚ್ಚ ತಗುವ ಜತೆಗೆ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿನ ಉದ್ದೇಶ ಸಾರ್ಥಕವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯ ದೇಗುಲ: ನ್ಯಾಯಾಲಯ ಅರ್ಜಿದಾರರಿಗೆ ದಂಡ ವಿಧಿಸಲು ಬಯಸಿತ್ತು, ಆದರೆ ಅರ್ಜಿದಾರರಿಗೆ 62 ವರ್ಷವಾಗಿದೆ, ಅವರು ಹಿರಿಯ ನಾಗರಿಕರು ಎಂದು ಪರಿಗಣಿಸಿ ಸುಮ್ಮನಾಗಿದೆ. ಜತೆಗೆ ಅವರು ಹಿಂದೆ ಕೆಲವು ನೈಜ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿರುವುದನ್ನು ಪರಿಗಣಿಸಿ ದಂಡದಿಂದ ವಿನಾಯಿತಿ ನೀಡಲಾಗಿದೆ. ಆದರೆ ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ವಜಾಗೊಳಿಸಿದೆ.
ಎಲ್ಲೂ ನ್ಯಾಯ ಸಿಗದೇ ಇದ್ದಾಗ ಜನರು ಕೊನೆಯದಾಗಿ ನ್ಯಾಯಾಲಯವೆಂಬ ದೇಗುಲಕ್ಕೆ ಆಗಮಿಸುತ್ತಾರೆ. ಈ ದೇವಾಲಯವನ್ನು ಜಾತಿ, ಧರ್ಮ, ಲಿಂಗ ಅಥವಾ ಜನ್ಮಸ್ಥಳ ಯಾವುದೇ ಬೇಧ ಭಾವ ಇಲ್ಲದೆ ಪೂಜಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಉತ್ತರ ಕರ್ನಾಟಕ ಭಾಗದ ಜನರ ಬಹುವರ್ಷಗಳ ಬೇಡಿಕೆಯಂತೆ ಹೈಕೋರ್ಟ್ ಪೀಠಗಳನ್ನು ಸ್ಥಾಪನೆ ಮಾಡಲಾಗಿದೆ. ಅಂದಿನ ಸಿಜೆ 7 ಜನರ ಸಮಿತಿಯನ್ನು ರಚಿಸಿತ್ತು, ಸಮಿತಿ ಎಲ್ಲಸಾಧಕ ಬಾಧಕ ಪರಿಶೀಲಿಸಿದ ನಂತರ ಪೀಠಗಳ ಸ್ಥಾಪನೆಗೆ ಶಿಫಾರಸು ಮಾಡಿತ್ತು. ಅದರಂತೆ ಮೊದಲು ಸಂಚಾರಿ ಪೀಠಗಳನ್ನು ಸ್ಥಾಪಿಸಿ ಬಳಿಕ ಖಾಯಂ ಪೀಠಗಳನ್ನು ಸ್ಥಾಪನೆ ಮಾಡಲಾಗಿದೆ. ಇದರಿಂದ ಆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಉತ್ತರ ಕರ್ನಾಟಕ ಭಾಗದ ಜನರ ಮನೆ ಬಾಗಿಲಿಗೆ ನ್ಯಾಯಾಲಯ ಬಂದ ಪರಿಣಾಮ ಆ ಭಾಗದ ಜನರಲ್ಲಿಕಾನೂನು ಬಗೆಗೆ ಅರಿವು ಹೆಚ್ಚಾಗಿದೆ. ಕೋರ್ಟ್ ಕದತಟ್ಟುವ ಕಕ್ಷಿದಾರರಿಗೆ ತ್ವರಿತ ಹಾಗೂ ಗುಣಾತ್ಮಕ ನ್ಯಾಯ ದೊರಕುತ್ತಿದೆ. ಜನರು ನ್ಯಾಯಾಂಗದ ಮೆಲೇಟ್ಟಿರುವ ವಿಶ್ವಾಸ ವೃದ್ಧಿಯಾಗಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
84 ಸಾವಿರ ಪ್ರಕರಣ ಬಾಕಿ: 2008ರಲ್ಲಿ ಧಾರವಾಡ ಮತ್ತು ಕಲಬುರಗಿ ಪೀಠಗಳು ಸ್ಥಾಪನೆ ಆದ ನಂತರ ಈವರೆಗೆ ಕ್ರಮವಾಗಿ 20,766 ಮತ್ತು 25,606 ಕೇಸುಗಳನ್ನು ಇತ್ಯರ್ಥಪಡಿಸಲಾಗಿದೆ. ಅಂತೆಯೇ 2023ರ ಫೆ.28ರವರೆಗಿನ ಅಂಕಿ ಅಂಶಗಳಂತೆ ಎರಡೂ ಪೀಠಗಳಲ್ಲಿಕ್ರಮವಾಗಿ 58,586 ಮತ್ತಯ 25,606 ಪ್ರಕರಣಗಳು ಸೇರಿ ಒಟ್ಟು 84 ಸಾವಿರ ಪ್ರಕರಣಗಳು ಬಾಕಿ ಇವೆ, ಇವುಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಕೇಸುಗಳಿವೆ ಎಂದು ಕೋರ್ಟ್ ಹೇಳಿದೆ.
ಅಲ್ಲದೇ, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ 2008-09ರಿಂದ 2022-23ರವರೆಗೆ ಕ್ರಮವಾಗಿ 148,61,49,833 ಮತ್ತು 118,97,81,691 ರೂ. ವ್ಯಯ ಮಾಡಲಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.












Click it and Unblock the Notifications