ಆರೋಪಿ ಅಪ್ರಾಪ್ತರಲ್ಲ ಎಂದು ಖಾತ್ರಿಪಡಿಸಿಕೊಳ್ಳಿ ಕೋರ್ಟ್ ನಿರ್ದೇಶನ
ಬೆಂಗಳೂರು, ಜನವರಿ 14: ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಗಳ ಮುಂದೆ ಹಾಜರುಪಡಿಸುವ ಆರೋಪಿಗಳು ಅಪ್ರಾಪ್ತ ವಯಸ್ಕರಲ್ಲ ಎಂದು ಖಾತ್ರಿಪಡಿಸಿಕೊಳ್ಳಬೇಕೆಂದು ಕರ್ನಾಟಕ ಹೈಕೋರ್ಟ್ ವಿಶೇಷ ನ್ಯಾಯಾಲಯಗಳು ಸೇರಿದಂತೆ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.
ಇದರಿಂದಾಗಿ ನ್ಯಾಯಾಲಯಗಳು ಇನ್ನು ಆರೋಪಿಗಳನ್ನು ಹಾಜರುಪಡಿಸಿದಾಗ ಅವರ ವಿವರಗಳನ್ನು ತಿಳಿದುಕೊಳ್ಳುವಾಗ ಮುಖ್ಯವಾಗಿ ಅವರು ಅಪ್ರಾಪ್ತರೇ? ಅಥವಾ ಅಲ್ಲವೇ? ಎಂಬದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಪ್ರಕರಣದಲ್ಲಿ ಅಪ್ರಾಪ್ತ ಆರೋಪಿಯನ್ನು (16 ವರ್ಷ) ಬಾಲಾಪರಾಧಿ ನ್ಯಾಯ ಮಂಡಳಿಗೆ ಕರೆದೊಯ್ಯುವ ಬದಲಾಗಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪ್ರಕರಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಿ. ಎಂ. ಜೋಶಿ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಅಪರಾಧಿಯ ಶಿಕ್ಷೆಯನ್ನು ರದ್ದುಪಡಿಸಿ ಆದೇಶಿಸಿದೆ.
ನ್ಯಾಯಾಲಯದ ಆದೇಶವೇನು?; 18 ರಿಂದ 22 ವರ್ಷದೊಳಗಿನ ಆರೋಪಿಗಳನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸಿದಾಗ ವಯಸ್ಸಿಗೆ ಸಂಬಂಧಿಸಿದಂತೆ ದಾಖಲೆ ಪುರಾವೆಗಳನ್ನು ಹಾಜರುಪಡಿಸಲು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ತನಿಖಾಧಿಕಾರಿಗಳು ಹಾಗೂ ಆರೋಪಿಗಳಿಗೆ ಸೂಚಿಸಬೇಕು ಎಂದು ಕೋರ್ಟ್ ತಿಳಿಸಿದೆ.
ಅಲ್ಲದೆ, ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯಗಳು ಆರೋಪಿಗಳನ್ನು ಮೊದಲ ಬಾರಿಗೆ ಹಾಜರುಪಡಿಸುವ ಸಮಯದಲ್ಲಿ, ಪೊಲೀಸರ ಕೆಟ್ಟ ನಡವಳಿಕೆಗಳು, ವಶಕ್ಕೆ ಪಡೆದ ಕುರಿತು ಆರೋಪಿಗಳ ಕುಟುಂಬ ಸದಸ್ಯರಿಗೆ ನೀಡಿದ ಮಾಹಿತಿ, ಬಂಧನದ ಕಾರಣಗಳು, ಬಂಧನದ ಸ್ಥಳದ ಬಗ್ಗೆ ಹೊರತಾಗಿ ವಯಸ್ಸಿನ ಬಗ್ಗೆ ಮೌಖಿಕ ವಿಚಾರಣೆ ನಡೆಸಬೇಕು ಎಂದು ಹೇಳಿದೆ. ಜತೆಗೆ, ಯಾವುದೇ ಕಾಯಿಲೆಗಳಿದ್ದಲ್ಲಿ ಆದೇಶದಲ್ಲಿ ದಾಖಲಿಸಬೇಕು ಎಂದು ಪೀಠ ತನ್ನ ತಿಳಿಸಿದೆ.
ಬಾಲಾಪರಾಧಿ ವಿಚಾರಣೆಗೆ ಅವಕಾಶವಿಲ್ಲ: ಆರೋಪಿ ಬಾಲಾಪರಾಧಿಯಾಗಿರುವುದರಿಂದ ಸಾಮಾನ್ಯ ನ್ಯಾಯಾಲಯದ ಮುಂದೆ ಅವರ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಲು ಅವಕಾಶವಿಲ್ಲ. ಸಂತ್ರಸ್ತೆ ಸೇರಿದಂತೆ ಅನೇಕ ಸಾಕ್ಷಿಗಳು ಪ್ರತಿಕೂಲವಾಗಿರುವುದರಿಂದ ಅವರ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ.
ಅಲ್ಲದೆ, ಕೇವಲ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯವು ಅವರನ್ನು ದೋಷಿ ಎಂದು ಪರಿಗಣಿಸಿದೆ. ಡಿಎನ್ಎ ಪರೀಕ್ಷೆಗಾಗಿ ಮಾದರಿಗಳ ಸಂಗ್ರಹವನ್ನು ಪೊಲೀಸರು ಸರಿಯಾಗಿ ನಡೆಸಿಲ್ಲ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ವೈದ್ಯರ ಹೇಳಿಕೆಗಳನ್ನು ಸಹ ವಿಚಾರಣಾ ನ್ಯಾಯಾಲಯದ ಮುಂದೆ ದಾಖಲಿಸಲಾಗಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಜತೆಗೆ, ಬಾಲಾಪರಾಧಿಗಳಿಗೆ ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ವಿಶೇಷ ಗೃಹಗಳಲ್ಲಿ ಗರಿಷ್ಠ ಬಂಧನದ ಅವಧಿ ಮೂರು ವರ್ಷಗಳಾಗಿದ್ದರೂ ಅವರು ಮೂರು ವರ್ಷಕ್ಕಿಂತಲೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿಸಿರುವ ನ್ಯಾಯಪೀಠ, ಆರೋಪಿಯ ಶಿಕ್ಷೆಯನ್ನು ರದ್ದುಪಡಿಸಿ ಆದೇಶಿಸಿದೆ.












Click it and Unblock the Notifications