ಅರೆ ನ್ಯಾಯಿಕ ಪ್ರಾಧಿಕಾರಗಳಿಗೂ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ
ಬೆಂಗಳೂರು, ಏಪ್ರಿಲ್ 04; ಜನರಿಗೆ ತ್ವರಿತ ನ್ಯಾಯದಾನ ಒದಗಿಸಲು ರಾಜ್ಯದ ಎಲ್ಲಾ ಅರೆನ್ಯಾಯಿಕ ಪ್ರಾಧಿಕಾರಗಳ ವಿಡಿಯೋ ಕಾನ್ಫರೆನ್ಸ್ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಹೈಬ್ರಿಡ್ ಮಾದರಿಯಲ್ಲಿ ಪ್ರಕರಣಗಳ ವಿಚಾರಣೆಗೆ ನಡೆಸಲು ಇರುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರಿಂದ ದೇಶದ ಪ್ರಜೆಗಳಿಗೆ ನ್ಯಾಯದಾನವು ಸುಲಭವಾಗಿ ಲಭ್ಯವಾಗಲು ಸಾಧ್ಯವಾಗುತ್ತದೆ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಖಾತಾ ರದ್ದತಿ ವಿಚಾರವಾಗಿ ನಾಗಮಂಗಲ ತಾಲೂಕಿನ ಮಂಜೇಗೌಡ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶಗಳ ಕುರಿತು ಇ-ಮೇಲ್, ಎಸ್ಎಸ್ಎಂಎಸ್ಗಳ ಮೂಲಕ ಅರ್ಜಿದಾರರಿಗೆ ಮತ್ತು ವಕೀಲರಿಗೆ ಪ್ರಕರಣಗಳ ವಿಚಾರಣೆ ಕಾಲಕಾಲಕ್ಕೆ ತಿಳಿಸುವಂತೆ ವ್ಯವಸ್ಥೆ ಮಾಡಬೇಕು. ಪ್ರಕರಣದ ವಿಚಾರಣೆ ಮುಂದೂಡುವ ಸಂದರ್ಭಗಳಲ್ಲಿ ಯಾವ ಕಾರಣಕ್ಕಾಗಿ ಮುಂದೂಡಲಾಗುತ್ತಿದೆ ಎಂಬದರ ಕುರಿತು ಸ್ಪಷ್ಟವಾದ ಕಾರಣವನ್ನು ಆದೇಶದಲ್ಲಿ ಉಲ್ಲೇಖಿಸಬೇಕು ಎಂದೂ ಕೋರ್ಟ್ ಹೇಳಿದೆ.

ಈ ನಿರ್ದೇಶನಗಳ ಕುರಿತು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿಬೇಕು. ಜತೆಗೆ, ನಿರ್ದೇಶನಗಳ ಅನುಪಾಲನಾ ವರದಿಯನ್ನು ಏಪ್ರಿಲ್ 17ರಂದು ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ. ಪ್ರಸ್ತುತದ ಕಾಲಮಾನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುವ ಹೈಬ್ರಿಡ್ ವಿಧಾನಗಳನ್ನು ನ್ಯಾಯಾಲಯಗಳೇ ಅಳವಡಿಸಿಕೊಂಡಿವೆ. ಇದೇ ಮಾದರಿಯ ಸೌಲಭ್ಯಗಳನ್ನು ರಾಜ್ಯದ ಎಲ್ಲಾ ಅರೆನ್ಯಾಯಿಕ ಪ್ರಾಧಿಕಾರಗಳಿಗೆ ಕಲ್ಪಿಸುವ ಸಂಬಂಧ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಗಮನ ಹರಿಸಬೇಕು ಎಂದು ಹೇಳಿದೆ.
ಅಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಆಡಳಿತಾತ್ಮಕ ವಿಭಾಗದ ಅಧಿಕಾರಿಗಳು ಸಹ ಅರೆ-ನ್ಯಾಯಾಂಗ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಇದು ನಾಗರಿಕರ ಹಕ್ಕುಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿದೆ. ಹಾಗಾಗಿ, ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು ಪ್ರತ್ಯೇಕವಾಗಿ ಸಿಬ್ಬಂದಿಯನ್ನು ನೇಮಕ ಮಾಡುವ ಬಗ್ಗೆಯೂ ಸರ್ಕಾರದ ಮುಖ್ಯ ಕಾರ್ಯದರ್ಶಿಪರಿಶೀಲನೆ ನಡೆಸಬೇಕು. ಆ ಮೂಲಕ ಅರೆ ನ್ಯಾಯಿಕ ಮತ್ತು ಅಡಳಿತಾತ್ಮಕ ಪ್ರಾಧಿಕಾರಗಳ ಕಾರ್ಯಗಳಿಗೆ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಇದೇ ವೇಳೆ ಅರೆನ್ಯಾಯಿಕ ಪ್ರಾಧಿಕಾರಗಳು ಅರ್ಜಿಗಳ ವಿಚಾರಣೆ ನಡೆಯುವ ದಿನಾಂಕ, ದಿನನಿತ್ಯ ಹೊರಡಿಸುವ ಆದೇಶಗಳು ಮತ್ತು ಅಂತಿಮ ತೀರ್ಪುಗಳ ಮಾಹಿತಿ ಅರ್ಜಿದಾರರಿಗೆ ಸಕಾಲಕ್ಕೆ ಲಭ್ಯವಾಗದ ಅಂಶವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಈ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ಮಾದರಿಯಲ್ಲಿಯೇ ಅರೆ ನ್ಯಾಯಿಕ ಪ್ರಾದಿಕಾರಗಳ ದಿನನಿತ್ಯದ ಆದೇಶಗಳು, ತೀರ್ಪುಗಳು ಸೇರಿದಂತೆ ಪ್ರಕರಣಗಳ ಎಲ್ಲ ಪ್ರಕ್ರಿಯೆಗಳ ಮಾಹಿತಿ ವೆಬ್ಹೋಸ್ಟ್ ಮಾಡುವ ಅಗತ್ಯ ವ್ಯವಸ್ಥೆ ಮತ್ತು ವಿಧಾನಗಳನ್ನು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಜಮೀನಿಗೆ ಸಂಬಂಧಿಸಿದಂತೆ ಅರ್ಜಿದಾರ ಮಂಜೇಗೌಡ ತಂದೆ ಹೆಸರಿನಲ್ಲಿ ನೀಡಲಾಗಿದ್ದ ಖಾತಾವನ್ನು ರದ್ದುಪಡಿಸಿ ನಾಗಮಂಗಲ ತಾಲೂಕು ಪಂಚಾಯತಿ ಅಧ್ಯಕ್ಷರು 2002ರ ಮಾ.7ರಂದು ಆದೇಶ ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮಂಜೇಗೌಡರ ತಂದೆ ಮಂಡ್ಯ ಜಿಲ್ಲಾ ಪಂಚಾಯತ್ಗೆ ಅಧ್ಯಕ್ಷರ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಸುಮಾರು 12 ವರ್ಷಗಳ ಕಾಲ ಬಾಕಿ ಉಳಿಸಿಕೊಳ್ಳಲಾಗಿತ್ತು.
ಅರ್ಜಿ ವಿಚಾರಣೆಯು 2002ರ ಮೇ 10ರಿಂದ ಆರಂಭವಾಗಿತ್ತು. 2014ರ ಜ.16ರಂದು ಅರ್ಜಿ ವಜಾಗೊಳಿಸಿ ಜಿ.ಪಂ. ಅಧ್ಯಕ್ಷರು ಆದೇಶಿಸಿದ್ದರು. ಈ ನಡುವೆ ಮಂಜೇಗೌಡ ಅವರ ತಂದೆ ನಿಧನರಾಗಿದ್ದರು. 12 ವರ್ಷಗಳ ಅವಧಿಯಲ್ಲಿ ಈ ಅರ್ಜಿಯನ್ನು 111 ಬಾರಿ ಯಾವುದೇ ವಿಚಾರಣೆ ನಡೆಸದೆಯೇ ಮುಂದೂಡಲಾಗಿದೆ. ಯಾವುದೇ ಮಾಹಿತಿಯಿಲ್ಲದ ಕಾರಣ 2014ರಲ್ಲಿ ವಿಚಾರಣೆಗೆ ಗೈರಾಗಿದ್ದರು. ಅರ್ಜಿದಾರ ಮತ್ತವರ ವಕೀಲರ ಅನುಪಸ್ಥಿತಿಯಲ್ಲೇ ವಿಚಾರಣೆಯನ್ನೂ ನಡೆಸಿದ್ದ ಜಿ.ಪಂ. ಅಧ್ಯಯಕ್ಷರು ಅರ್ಜಿ ವಜಾಗೊಳಿಸಿ ಆದೇಶಿಶಿಸಿದ್ದರು.
2016ರಲ್ಲಿ ಮಂಜೇಗೌಡ ವಿಚಾರಿಸಿ ಆದೇಶದ ಪ್ರತಿಯನ್ನು ಪಡೆದಾಗಲೇ ಅರ್ಜಿ ವಜಾಗೊಂಡಿರುವುದು ವಿಷಯ ಬೆಳಕಿಗೆ ಬಂದಿತ್ತು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಮಂಜೇಗೌಡ, ಪಂಚಾಯತ್ ರಾಜ್ ಕಾಯ್ದೆ-1993ರ ಪ್ರಕಾರ ಜಮೀನು ಖಾತಾವನ್ನು ರದ್ದುಪಡಿಸುವ ಅಧಿಕಾರ ಜಿ.ಪಂ ಮತ್ತು ತಾ.ಪಂ ಅಧ್ಯಕ್ಷರಿಗೆ ಇಲ್ಲ ಎಂದು ಆಕ್ಷೇಪಿಸಿದ್ದರು. ಅದನ್ನು ಒಪ್ಪಿ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಮಂಜೇಗೌಡ ಅವರ ತಂದೆ ಹೆಸರಿನ ಖಾತೆಯನ್ನು ರದ್ದುಪಡಿಸಿದ ಆದೇಶವನ್ನು ಅಮಾನ್ಯಗೊಳಿಸಿದೆ.












Click it and Unblock the Notifications