ಮಾಜಿ ಶಾಸಕ ಅನಿಲ್ ಲಾಡ್ಗೆಗೆ ಹೈಕೋರ್ಟ್ ಛೀಮಾರಿ
ಬೆಂಗಳೂರು, ಫೆಬ್ರವರಿ 02: ಕರ್ನಾಟಕ ಹೈಕೋರ್ಟ್ ಮಾಜಿ ಶಾಸಕ ಅನಿಲ್ ಎಚ್. ಲಾಡ್ಗೆ ಇಷ್ಟು ವರ್ಷ ಗಾಢ ನಿದ್ರೆಯಲ್ಲಿದ್ದೀರಾ? ಎಂದು ಛೀಮಾರಿ ಹಾಕಿದೆ. ಸುಮಾರು 9 ವರ್ಷಗಳ ಕಾಲ ವಿಳಂಬವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಲ್ಲದೇ, ನ್ಯಾಯಾಲಯವನ್ನು ತಪ್ಪು ದಾರಿಗೆಳೆಯುವ ಹೇಳಿಕೆಗಳನ್ನು ನೀಡಿದ ಅನಿಲ್ ಲಾಡ್ ಅವರಂತಹವರಿಗೆ ನ್ಯಾಯಾಲಯದ ಬಾಗಿಲುಗಳು ಮುಚ್ಚಿರುತ್ತವೆ ಎಂದು ತಿಳಿಸಿದೆ. ಅಮೇರಿಕಾ ಲೇಖಕ ವಾಷಿಂಕ್ ಟನ್ ಇರ್ವಿನ್ ಅವರ ಪುಸ್ತಕ ರಿಪ್ ವ್ಯಾನ್ ವಿಂಕಲ್ಸ್ ಅನ್ನು ಕೋರ್ಟ್ ಉಲ್ಲೇಖಿಸಿದೆ.
ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್ಟಿ) 2015ರಲ್ಲಿ ಹೊರಡಿಸಿದ ಆದೇಶದ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಅನಿಲ್ ಲಾಡ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆದೇಶವೊಂದನ್ನು ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆಸ್ತಿಯ ಮಾರಾಟದ ಕುರಿತು ಬ್ಯಾಂಕ್ ವಂಚಿಸಿದೆ. ಅಲ್ಲದೆ, ಆಸ್ತಿ ಮಾರಾಟದ ಕುರಿತಂತೆ ತಮ್ಮ ಕಕ್ಷಿದಾರರ ಗಮನಕ್ಕೆ ಬಂದಿರಲಿಲ್ಲ. ಹಲವು ವರ್ಷಗಳ ಬಳಿಕ ಈ ಬಗ್ಗೆ ಗೊತ್ತಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ ಬ್ಯಾಂಕ್ ಪರ ವಕೀಲರು, ಅರ್ಜಿದಾರರು ತಮ್ಮ ಆಸ್ತಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬುದು ತಿಳಿಸಿದೆ. 2014ರ ಸೆಪ್ಟೆಂಬರ್ 22ರಂದು ಜಮೀನು ಮಾರಾಟ ನೋಟಿಸ್ ಅನ್ನು ಪ್ರಶ್ನಿಸಿ ಡಿಆರ್ಟಿ ಮುಂದೆ ಅರ್ಜಿ ಸಲ್ಲಿಸಿದ್ದರು. ಅದು ವಜಾಗೊಂಡ ಬಳಿಕ 9 ವರ್ಷಗಳ ನಂತರ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ ಎಂದು ವಾದಿಸಿದ್ದರು.
ಪ್ರಕರಣದಲ್ಲಿ 2014-15ರಲ್ಲಿ ಡಿಆರ್ಟಿ ಮುಂದೆ ಲಾಡ್ ಅವರು ಹರಾಜನ್ನು ಪ್ರಶ್ನಿಸಿಲ್ಲ. ಅಲ್ಲದೆ, ಬ್ಯಾಂಕ್ ಅವರಿಗೆ ಎರಡು ಬಾರಿ ಇಮೇಲ್ ಮೂಲಕ ಮಾರಾಟ ಪ್ರಮಾಣ ಪತ್ರವನ್ನು ಕಳುಹಿಸಿರುವ ಅಂಶ ದಾಖಲೆಗಳಿಂದ ತಿಳಿದು ಬಂದಿದೆ. ಆದರೆ, ಈ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಮೂಲಕ ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲು ಮುಂದಾಗಿದ್ದಾರೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 2008ರಲ್ಲಿ ತಮ್ಮ ಕಂಪನಿಗಳಲ್ಲಿ ಒಂದಾದ ವಿ.ಎಸ್.ಲಾಡ್ ಅಂಡ್ ಸನ್ಸ್ಗೆ ನೀಡಿದ 12.67 ಕೋಟಿ ರೂ.ಗಳ ಸಾಲ ಸೌಲಭ್ಯಕ್ಕೆ ಖಾತರಿದಾರರಾಗಿ ಕೆಲ ಭಾಗ ಜಮೀನನ್ನು ಬ್ಯಾಂಕ್ಗೆ ಗ್ಯಾರಂಟಿ ನೀಡಿದ್ದರು.
ಬ್ಯಾಕ್ಗೆ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಖಾತರಿ ಜಮೀನನ್ನು ಬ್ಯಾಂಕ್ ಹರಾಜು ಮೂಲಕ ಮಾರಾಟ ಮಾಡಿತ್ತು. ಹರಾಜಿನಲ್ಲಿ ಲಾಡ್ ಅವರ ಅಡಮಾನ ಆಸ್ತಿಯನ್ನು ಖರೀದಿಸಿದ ಸಂಸ್ಥೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 2014ರಲ್ಲಿ ಮಾರಾಟ ಪ್ರಮಾಣ ಪತ್ರ ವಿತರಣೆ ನೀಡಿತ್ತು. ಈ ಕ್ರಮವನ್ನು ಡಿಆರ್ಟಿ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಅನಿಲ್ ಲಾಡ್ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications